ದೇಶದೆಲ್ಲೆಡೆ ಆರಂಭದಲ್ಲಿ ಕುಂಠಿತಗೊಂಡಿದ್ದ ಮುಂಗಾರು ಮಳೆ ಇದೀಗ ಚುರುಕು ಪಡೆದುಕೊಂಡಿದೆ. ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ದೆಹಲಿ, ಕಾಶ್ಮೀರ, ಕಾಶ್ಮಿರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ.
ಕೇರಳ, ಮಹಾರಾಷ್ಟ್ರ, ಕಾಶ್ಮೀರ, ದೆಹಲಿಯಲ್ಲಿ ಮಳೆ ಅನಾಹುತ
ಲೋನಾವಾಲದಲ್ಲಿ 24 ಗಂಟೆಯಲ್ಲಿ 60 ಸೆ.ಮೀನಷ್ಟು ಭಾರೀ ಮಳೆ
ಥಾಣೇಲಿ ಕೋಟೆ, ಜಲಪಾತಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ
ನವದೆಹಲಿ: ದೇಶದೆಲ್ಲೆಡೆ ಆರಂಭದಲ್ಲಿ ಕುಂಠಿತಗೊಂಡಿದ್ದ ಮುಂಗಾರು ಮಳೆ ಇದೀಗ ಚುರುಕು ಪಡೆದುಕೊಂಡಿದೆ. ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ದೆಹಲಿ, ಕಾಶ್ಮೀರ, ಕಾಶ್ಮಿರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ.
ಮಹಾ ಮಳೆ:
ಲೋನಾವಾಲದಲ್ಲಿ 24 ಗಂಟೆ ಅವಧಿಯಲ್ಲಿ 60 ಸೆ.ಮೀ.ನಷ್ಟು ಭಾರೀ ಮಳೆ ಸುರಿದಿದ್ದು ಹಲವು ಕಡೆ ಭೂಕುಸಿತ ಸಂಭವಿಸಿದೆ. ಪಾಲ್ಘರ್ ಜಿಲ್ಲೆಯೊಂದರಲ್ಲೇ ವಾರದಲ್ಲಿ ಮಳೆಗೆ 10 ಮಂದಿ ಬಲಿಯಾಗಿದ್ದಾರೆ. ಥಾಣೆಯಲ್ಲಿ 3 ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, 70-80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಥಾಣೆ ಜಿಲ್ಲಾಡಳಿತ ಕೋಟೆ, ಜಲಪಾತಗಳಿಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಿದೆ. ಮುಂಬೈನಲ್ಲಿ ಮಂಗಳವಾರ ಮಳೆ ಇಳಿಕೆಯಾಗಿದ್ದು ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಕೆಲವೆಡೆ ರೈಲು ಸೇವೆಯಲ್ಲಿಯೂ ವ್ಯತ್ಯಯವಾಗಿದೆ. ಇಲ್ಲಿ ಹವಾಮಾನ ಇಲಾಖೆ ಅರೆಂಜ್ ಅಲರ್ಟ್ ಘೋಷಿಸಿದೆ.
ದಿಢೀರ್ ಪ್ರವಾಹ:
ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗಿದೆ. ಹಠಾತ್ ಪ್ರವಾಹ ಸೃಷ್ಟಿಯಾಗಿದ್ದು, ಹಲವಾರು ಮನೆಗಳು, ಅಂಗಡಿಗಳು ಮತ್ತು ವಾಹನಗಳು ಮಳೆಯಿಂದ ಹಾನಿಗೀಡಾಗಿವೆ. ಮಣ್ಣು ಕುಸಿದು ಬಂಡೆಗಳು ಉರುಳಿ ಕಟ್ಟಡಗಳು, ವಾಹನಗಳ ಮೇಲೆ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದೆಹಲಿಗೆ ಅರೆಂಜ್ ಅಲರ್ಟ್:
ದೆಹಲಿಯಲ್ಲಿಯೂ ಮಳೆ ಆರ್ಭಟ ಜೋರಾಗಿದೆ. ಇಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಬಲವಾದ ಗಾಳಿ ಎಚ್ಚರಿಕೆ ನೀಡಿದೆ. ಗಂಟೆಗೆ 70 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ರೆಡ್ ಅಲರ್ಟ್ ನೀಡಿದೆ. ಇನ್ನು ರಾಜಸ್ಥಾನ, ಕೇರಳ ಒಡಿಶಾ ರಾಜ್ಯಗಳಲ್ಲಿಯೂ ಮಳೆ ಅಬ್ಬರ ಮುಂದುವರೆದಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.