ಕೊಚ್ಚಿ: ಕೇರಳದಲ್ಲೊಂದು ವಿಶೇಷ ವಿವಾಹ ನಡೆದಿದ್ದು, ವಧು-ವರರು ಆಸ್ಪತ್ರೆಯ ತರ್ತು ಚಿಕಿತ್ಸಾ ಘಟಕದಲ್ಲಿ ನವಜೀವನಕ್ಕೆ ಕಾಲಿಟ್ಟ ಪ್ರಸಂಗ ಶುಕ್ರವಾರ ಜರಗಿದೆ. ಅವನಿ ಮತ್ತು ಶಾರೋನ್ ಅವರು ಶುಕ್ರವಾರ ಎರ್ನಾಕುಲಂನಲ್ಲಿ ಮದುವೆಯಾಗಬೇಕಿತ್ತು. ಇದರ ಭಾಗವಾಗಿ ಅವನಿ ಅವರು ಮದುವೆ ಮೇಕಪ್ಗಾಗಿ ಶುಕ್ರವಾರ ಬೆಳಗ್ಗೆ ತಮ್ಮ ಕಾರಿನಲ್ಲಿ ಕುಮಾರಕೋಂಗೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಕಾರು ಅಪಘಾತಗೊಂಡಿದೆ. ಸ್ಥಳೀಯರು ಬೆನ್ನು ಮೂಳೆಗೆ ಏಟು ತಿಂದಿದ್ದ ಅವನಿಯವರನ್ನು ವಿಪಿಎಸ್ ಲೇಕ್ಶೋರ್ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ.
ಅಪಘಾತದ ಮಾಹಿತಿ ಪಡೆಯುತ್ತಿದ್ದಂತೆ ಶಾರೋನ್ ಕುಟುಂಬವೂ ಆಸ್ಪತ್ರೆಗೆ ಬಂದಿದೆ. ಅದೇ ದಿನ ಮಧ್ಯಾಹ್ನ 12.15-12.30ರವರೆಗೆ ಮುಹೂರ್ತವಿದ್ದ ಕಾರಣ ಎರಡೂ ಕುಟುಂಬದವರು ಆಸ್ಪತ್ರೆಯಲ್ಲಿಯೇ ಮದುವೆ ಮಾಡಲು ತೀರ್ಮಾನಿಸಿ, ಆಸ್ಪತ್ರೆಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಇದನ್ನು ಮನ್ನಿಸಿದ ಆಡಳಿತ ಮತ್ತು ವೈದ್ಯರು, ಅವನಿಗೆ ಯಾವುದೇ ತೊಂದರೆಯಾಗದಂತೆ ತುರ್ತು ಚಿಕಿತ್ಸಾ ವಿಭಾಗದಲ್ಲಿಯೇ ಮದುವೆ ಸೆಟ್ಅಪ್ ಮಾಡಿ ವಿವಾಹ ನೆರವೇರಿಸಿದ್ದಾರೆ.
ಬಳಿಕ ಅವನಿಯನ್ನು ಹೆಚ್ಚಿನ ಚಿಕಿತ್ಸೆಗೆ ಎರ್ನಾಕುಲಂನ ದೊಡ್ಡ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.