ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಅನಾಚಾರಗಳಿಗೆ ಅಂತ್ಯ ಹಾಡುವ ಉದ್ದೇಶದಿಂದ ಮಂಡಿಸಲಾಗಿದ್ದ ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಅನ್ನು ಬುಧವಾರ ವಿಪಕ್ಷಗಳ ಸಭಾತ್ಯಾಗದ ನಡುವೆ ಧ್ವನಿಮತದಿಂದ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು

 ನವದೆಹಲಿ : ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಅನಾಚಾರಗಳಿಗೆ ಅಂತ್ಯ ಹಾಡುವ ಉದ್ದೇಶದಿಂದ ಮಂಡಿಸಲಾಗಿದ್ದ ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಅನ್ನು ಬುಧವಾರ ವಿಪಕ್ಷಗಳ ಸಭಾತ್ಯಾಗದ ನಡುವೆ ಧ್ವನಿಮತದಿಂದ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದಲ್ಲಿ 10 ವರ್ಷ ಜೈಲು ಹಾಗೂ 10 ಕೋಟಿ ರು.ವರೆಗೆ ದಂಡದಂತಹ ಕಠಿಣ ಶಿಕ್ಷೆ ವಿಧಿಸುವ ಅಂಶಗಳು ಇದರಲ್ಲಿವೆ.

ಕೆಳಮನೆಯಲ್ಲಿ ಅಂಗೀಕಾರವಾಗಿರುವ ಮಸೂದೆ ಇನ್ನು ರಾಜ್ಯಸಭೆಯಲ್ಲಿ ಪಾಸ್‌ ಆಗುವುದು ಬಾಕಿ ಇದೆ.

ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಫಲವಾಗಿ ರೂಪಿಸಲಾಗಿರುವ ಈ ಬಿಲ್‌ ಅನ್ನು ಮಂಗಳವಾರ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಕೆಳಮನೆಯಲ್ಲಿ ಮಂಡಿಸಿದ್ದರು. ಇದರ ಚರ್ಚೆಗೆ ಉತ್ತರಿಸಿ ಬುಧವಾರ ಮಾತನಾಡಿದ ಅವರು, ‘ನೀಟ್‌ ಪೇಪರ್‌ ಲೀಕ್‌ ಪ್ರಕರಣದಲ್ಲಿ ಸರ್ಕಾರದ ತ್ವರಿತ ಕ್ರಮದ ಪ್ರತೀಕ ಈ ಮಸೂದೆಯಾಗಿದೆ. ಅನುಭವದಿಂದ ಕಲಿಯಲು ಸರ್ಕಾರ ಸಿದ್ಧವಿದೆ ಎಂಬುದಕ್ಕೆ ಈ ತಿದ್ದುಪಡಿ ಸಾಕ್ಷಿ’ ಎಂದರು.

‘2024ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟುವಿಕೆ ಕಾನೂನು ಜಾರಿಯಾದಂದಿನಿಂದ ಇಲ್ಲಿಯ ವರೆಗೆ 52 ಎಫ್‌ಐಆರ್‌ಗಳು ದಾಖಲಾಗಿವೆ. ಕಳೆದ ಕೆಲ ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗೆ ನೊಂದು ಮಾಡಿಕೊಳ್ಳಲಾದ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ’ ಎಂದರು.

ಯುಪಿಎಸ್‌ಸಿ, ಎಸ್‌ಎಸ್‌ಸಿ, ರೈಲ್ವೆ, ಬ್ಯಾಂಕ್‌, ಎನ್‌ಟಿಎ ಪರೀಕ್ಷೆಗಳಲ್ಲಿನ ಅಕ್ರಮ ತಡೆಯಲು 2024ರಲ್ಲಿ ಮೊದಲ ಬಾರಿ ಕಾನೂನನ್ನು ಪರಿಚಯಿಸಲಾಗಿತ್ತು. ಇದಕ್ಕೀಗ ತಿದ್ದುಪಡಿ ತಂದು ಇನ್ನೂ ಕಠಿಣಗೊಳಿಸಲಾಗಿದೆ.

ಮಸೂದೆಯಲ್ಲೇನಿದೆ?:

- ಪ್ರಸ್ತುತ 3ರಿಂದ 5 ವರ್ಷ ಜೈಲು ಶಿಕ್ಷೆ, 10 ಲಕ್ಷ ರು. ವರೆಗೆ ದಂಡ ಇದೆ

- ಇದು 5ರಿಂದ 10 ವರ್ಷ ಸೆರೆವಾಸ, 50 ಲಕ್ಷ ರು. ದಂಡಕ್ಕೆ ಏರಿಕೆ

- ಇನ್ನು ಸೋರಿಕೆ ರೂವಾರಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, 10 ಕೋಟಿ ರು. ದಂಡ

- ಸಂಘಟಿತ ಅಪರಾಧ ಪ್ರಕರಣಗಳಲ್ಲಿ ಕನಿಷ್ಠ 7 ವರ್ಷ ಜೈಲು, 10 ಕೋಟಿ ರು. ದಂಡ

- ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಗೊತ್ತಿದ್ದೂ ಮುಚ್ಚಿಟ್ಟರೆ 1 ಕೋಟಿ ರು. ವರೆಗೆ ದಂಡ

- ಪೇಪರ್‌ ಲೀಕ್‌ ವಿಚಾರಣೆಗಾಗಿ ತ್ವರಿತ ಕೋರ್ಟ್‌ ಸ್ಥಾಪನೆ

-ನಿತ್ಯ ವಿಚಾರಣೆ. 3 ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸಿ ಶಿಕ್ಷೆ ಪ್ರಕಟಿಸಬೇಕು

-ತನಿಖೆಗಾಗಿ ವಿಶೇಷ ಕಾರ್ಯಪಡೆ ರಚಿಸಲು ಕೇಂದ್ರಕ್ಕೂ ಅಧಿಕಾರ

-ಅಪರಾಧಗಳ ತನಿಖೆಯನ್ನು 2 ತಿಂಗಳಲ್ಲಿ ಪೂರ್ಣಗೊಳಿಸಬೇಕು

-ಒಂದು ಅಥವಾ ಹೆಚ್ಚಿನ ವಿಶೇಷ ಸಾರ್ವಜನಿಕ ಅಭಿಯೋಜಕರ ನೇಮಿಸಲು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪವರ್‌

-ತೀರ್ಪು, ಶಿಕ್ಷೆ, ಆದೇಶದ ವಿರುದ್ಧ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠಕ್ಕೆ ಮೇಲ್ಮನವಿ ಸಲ್ಲಿಕೆಗೆ ಅವಕಾಶ. 3 ತಿಂಗಳಲ್ಲಿ ಕಡ್ಡಾಯ ವಿಲೇವಾರಿ