ನವದೆಹಲಿ: ಚುನಾವಣಾ ಬಾಂಡ್ ಅಕ್ರಮಕ್ಕೆ ಸಂಬಂಧಿದಂತೆ ಬಿಜೆಪಿಯ ಅತಿದೊಡ್ಡ ದೇಣಿಗೆದಾರ ಎಂಬ ‘ಕೀರ್ತಿ’ಗೆ ಪಾತ್ರ ಆಗಿರುವ ಮೇಘಾ ಎಂಜಿನಿಯರಿಂಗ್ ಕಂಪನಿ, ಕಾಂಗ್ರೆಸ್ ಪಕ್ಷಕ್ಕೆ 2019ರಲ್ಲಿ 25.85 ಕೋಟಿ ರು. ನಗದನ್ನು ನೀಡಿತ್ತು.
ಇದು ಯಾವುದೇ ದಾಖಲೆ ಇಲ್ಲದ ಹಣವಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಇದರಿಂದಾಗಿ ಮೇಘಾ ಕಂಪನಿಗೂ ಬಿಜೆಪಿಗೂ ಏನು ನಂಟಿದೆ ಎಂದು ಚುನಾವಣಾ ಬಾಂಡ್ ವಿವರ ಬಹಿರಂಗ ಬಳಿಕ ಹರಿಹಾಯುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿದೆ.
ಕಾಂಗ್ರೆಸ್ ಪಕ್ಷದ ಸುಮಾರು 8 ವರ್ಷಗಳ ತೆರಿಗೆ ವಿವರ ಸಲ್ಲಿಕೆಯಲ್ಲಿ 520 ಕೋಟಿ ರು. ಆದಾಯದ ಉಲ್ಲೇಖವೇ ಇಲ್ಲ ಎಂದು ಆರೋಪಿಸಿ ಐಟಿ ಇಲಾಖೆಯು ಕಾಂಗ್ರೆಸ್ನ ತೆರಿಗೆ ರಿಟರ್ನ್ಗಳ ಮರುಪರಿಶೀಲನೆ ನಡೆಸುತ್ತಿದೆ.
ಇದರ ವಿರುದ್ಧ ಕಾಂಗ್ರೆಸ್ ಪಕ್ಷ ದಿಲ್ಲಿ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಕಾಂಗ್ರೆಸ್ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾ ಮಾಡಿ, ಐಟಿ ಇಲಾಖೆ ನಡೆಸಿದ ಮರುಪರಿಶೀಲನೆ ಸರಿ ಎಂದಿತ್ತು.
ಈ ವೇಳೆ ಹೈಕೋರ್ಟ್ ನೀಡಿದ ಆದೇಶದಲ್ಲಿ ಮೇಘಾ ಎಂಜಿನಿಯರಿಂಗ್, ಕಾಂಗ್ರೆಸ್ಗೆ 25 ಕೋಟಿ ರು. ನೀಡಿದ್ದ ಅಂಶವಿದೆ. ‘ಪಿ.ವಿ. ಸುನೀಲ್ ಎಂಬಾತ ಬರೆದಿದ್ದ ಕೈಬರಹದ ಟಿಪ್ಪಣಿ ಸಿಕ್ಕಿದೆ.
ಇದರಲ್ಲಿ ಕಾಂಗ್ರೆಸ್ಗೆ ಮೇಘಾ ಕಂಪನಿ 2019ರ ಫೆ.28ರಿಂದ 2019ರ, ಅ.1ರವರೆಗೆ ವಿವಿಧ ಕಂತಿನಲ್ಲಿ 25.85 ಕೋಟಿ ರು. ನಗದು ನೀಡಿತ್ತು ಎಂದು ಬರೆಯಲಾಗಿದೆ’ ಎಂದು ಐಟಿ ಇಲಾಖೆ ಹೇಳಿದೆ.