ನವದೆಹಲಿ: ಕೇಂದ್ರ ಸರ್ಕಾರವು 72 ಸಾವಿರ ಕೋಟಿ ರು. ವೆಚ್ಚದಲ್ಲಿ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿನ ಗ್ರೇಟ್ ನಿಕೋಬಾರ್ನಲ್ಲಿ ಮೂಲಸೌಕರ್ಯ ಯೋಜನೆಗೆ ಮುಂದಾಗಿರುವುದಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರೋಧಿಸಿದ್ದಾರೆ. ಇದು ಸ್ಥಳೀಯ ಬುಡಕಟ್ಟು ಸಮುದಾಯದವರ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂದಿದ್ದಾರೆ.
‘ ದಿ ಹಿಂದೂ’ ಪತ್ರಿಕೆಗೆ ಲೇಖನ ಬರೆದಿರುವ ಅವರು, ‘72, 000 ಕೋಟಿ ರು. ಈ ಯೋಜನೆಯು ದ್ವೀಪದ ಸ್ಥಳೀಯ ಬುಡಕಟ್ಟು ಸಮುದಾಯಗಳ ಅಸ್ತಿತ್ವಕ್ಕೆ ಅಪಾಯ ಉಂಟು ಮಾಡುತ್ತದೆ. ಅತ್ಯಂತ ವಿಶಿಷ್ಟವಾದ ಸಸ್ಯ ಮತ್ತು ಪ್ರಾಣಿ ಪರಿಸರ ವ್ಯವಸ್ಥೆಗೆ ಬೆದರಿಕೆಯನ್ನುಂಟು ಮಾಡುತ್ತದೆ.
ನೈಸರ್ಗಿಕ ವಿಕೋಪಗಳಿಗೆ ಹೆಚ್ಚು ಒಳಗಾಗುತ್ತದೆ. ಇದನ್ನು ಸಂವೇದನಾರಹಿತವಾಗಿ ಜಾರಿಗೆ ತರಲಾಗುತ್ತಿದೆ. ಇದು ಎಲ್ಲಾ ಕಾನೂನುಗಳನ್ನು ಅಣಕಿಸುವಂತಿದೆ. ರಾಷ್ಟ್ರೀಯ ಮೌಲ್ಯಗಳ ದ್ರೋಹದ ವಿರುದ್ಧ ನಾವು ಧ್ವನಿ ಎತ್ತಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರೇಟರ್ ನಿಕೋಬಾರ್ ದ್ವೀಪದಲ್ಲಿ ಸೇನಾ ನೆಲೆ ಸ್ಥಾಪನೆ, ಬಂದರು ನಿರ್ಮಾಣ- ಇತ್ಯಾದಿ ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.