ಜೆಡಿಯು ಶಾಸಕನದ್ದು ಆಲ್-ಖೈದಾ ಮನಸ್ಥಿತಿ: ಬಿಜೆಪಿ ಕಿಡಿ ಪಟನಾ: ವಿಜಯದಶಮಿಯಂದು ನರೇಂದ್ರ ಮೋದಿ ರಾವಣ ಸಂಹಾರ ಮಾಡುವ ಬಿಲ್ಲು-ಬಾಣ ಹಿಡಿದ ಬೆನ್ನಲ್ಲೇ ರಾವಣನ ಅನಿಮೇಟೆಡ್ ವಿಡಿಯೋಗೆ ಮೋದಿ ಫೋಟೋ ಅಂಟಿಸಿ ಜೆಡಿಯು ಶಾಸಕ ನೀರಜ್ ಕುಮಾರ್ ವಿವಾದಕ್ಕೀಡಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿಡಿಯೋದಲ್ಲಿ ನರೇಂದ್ರ ಮೋದಿ ರಾವಣನ ಪೋಷಾಕು ಧರಿಸಿದ್ದು, ನಿತೀಶ್ ಕುಮಾರ್ ಅವರು ಬಾಂಬ್ ಪಾತ್ರಧಾರಿಯಾಗಿರುತ್ತಾರೆ. ಬಾಂಬ್ ರಾವಣನಲ್ಲಿಗೆ ಹೋಗಿ ಸ್ಫೋಟಗೊಳ್ಳುತ್ತದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವಕ್ತಾರ ಅರವಿಂದ್ ಸಿಂಗ್, ‘ಇದು ಜೆಡಿಯು ಶಾಸಕರ ಆಲ್-ಖೈದಾ ಮನಸ್ಥಿತಿ ತೋರಿಸುತ್ತದೆ. ಅವರ ರೀತಿಯಲ್ಲಿಯೇ ಬಿಹಾರ ಮುಖ್ಯಮಂತ್ರಿಯನ್ನು ಆತ್ಮಹತ್ಯಾ ದಾಳಿಕೋರರನ್ನಾಗಿ ಮಾಡಿದ್ದಾರೆ. ಆದರೆ ನಮ್ಮ ಪ್ರಧಾನಿಗಳು ಬುದ್ಧನಂತಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಬುದ್ಧನ ಪ್ರತಿಮೆಯ ಮೇಲೆ ದಾಳಿ ನಡೆಸಿದ ರೀತಿಯಲ್ಲಿ ನಮ್ಮ ಪ್ರಧಾನಿಯ ಕುರಿತು ಅವಹೇಳನ ಮಾಡಲಾಗುತ್ತಿದೆ. ಆದರೂ ಅವರು ಬುದ್ಧನಂತೆ ಸಮಚಿತ್ತದಿಂದ ಇದ್ದು ಜಗತ್ತಿಗೆ ಶಾಂತಿಯ ಸಂದೇಶ ಸಾರುತ್ತಿರುತ್ತಾರೆ’ ಎಂದಿದ್ದಾರೆ.