ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾದ ಕೆನ್‌- ಬೆಟ್ವಾ ನದಿ ಜೋಡಣೆಗೆ ಮೋದಿ ಶಂಕು

KannadaprabhaNewsNetwork |  
Published : Dec 26, 2024, 01:46 AM ISTUpdated : Dec 26, 2024, 04:24 AM IST
ಮೋದಿ ಚಾಲನೆ | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾದ ಮಧ್ಯಪ್ರದೇಶದ ಕೆನ್‌ ಮತ್ತು ಬೆಟ್ವಾ ನದಿಗಳ ಜೋಡಣೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಶಂಕು ಸ್ಥಾಪನೆ ನೆರವೇರಿಸಿದರು. ಇದು ದೇಶದ ಮೊದಲ ನದಿ ಜೋಡಣೆ ಯೋಜನೆಯಾಗಿದೆ.

 ಖಜುರಾಹೋ (ಮ.ಪ್ರ.) : ಕೇಂದ್ರ ಸರ್ಕಾರದ ಮಹತ್ವಾಂಕ್ಷಿ ಯೋಜನೆಯಾದ ಮಧ್ಯಪ್ರದೇಶದ ಕೆನ್‌ ಮತ್ತು ಬೆಟ್ವಾ ನದಿಗಳ ಜೋಡಣೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಶಂಕು ಸ್ಥಾಪನೆ ನೆರವೇರಿಸಿದರು. ಇದು ದೇಶದ ಮೊದಲ ನದಿ ಜೋಡಣೆ ಯೋಜನೆಯಾಗಿದೆ.

ಮಧ್ಯಪ್ರದೇಶದ ಖಜುರಾಹೋರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನದಿ ಜೋಡಣೆ ಯೋಜನೆಯ ಮಾದರಿಯ ಮೇಲೆ ಕೆನ್‌ ಮತ್ತು ಬೆಟ್ವಾ ನದಿಗಳ ನೀರನ್ನು ಸುರಿಯುವ ಮೂಲಕ ಮೋದಿ ಅವರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘21ನೇ ಶತಮಾನದಲ್ಲಿ ಜಲ ಸಂಪನ್ಮೂಲದ ಸಮರ್ಪಕ ಹಾಗೂ ಉತ್ತಮವಾಗಿ ನಿರ್ವಹಣೆ ಮಾಡುವ ದೇಶ ಮಾತ್ರ ಮುಂದುವರೆಯಲು ಸಾಧ್ಯ’ ಎಂದರು.

ಇದೇ ವೇಳೆ ದೇಶವನ್ನಾಳಿದ ಹಿಂದಿನ ಕಾಂಗ್ರೆಸ್‌ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ‘ಜಲ ಸಂಪನ್ಮೂಲಗಳ ಅಭಿವೃದ್ಧಿಗೆ ಬಿ.ಆರ್‌. ಅಂಬೇಡ್ಕರ್‌ ನೀಡಿದ ಕೊಡುಗೆಯನ್ನು ಕಾಂಗ್ರೆಸ್‌ ಮರೆತಿದೆ. ನೀರಿನ ವಿಷಯದಲ್ಲಿ ದೂರದೃಷ್ಟಿ ಹೊಂದಿದ್ದ ಅಂಬೇಡ್ಕರ್‌ ಹಲವು ಡ್ಯಾಂಗಳನ್ನು ನಿರ್ಮಿಸಿದರು. ಪ್ರಮುಖ ನದಿ ಮುಖಜ ಯೋಜನೆ ಅಭಿವೃದ್ಧಿ ಹಾಗೂ ಕೇಂದ್ರ ಜಲ ಮಂಡಳಿ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಶತಮಾನದದಲ್ಲಿ ನೀರಿನ ಭದ್ರತೆಯೇ ಬಹುದೊಡ್ಡ ಸವಾಲಾಗಿದೆ. ಆದರೆ ಕಾಂಗ್ರೆಸ್‌ ಇದರ ಕುರಿತು ಗಮನವನ್ನೇ ಹರಿಸಲಿಲ್ಲ. ಯೋಜನೆಗಳನ್ನು ಉದ್ಘಾಟಿಸಿ 35-40 ವರ್ಷಗಳಾದರೂ ಅವುಗಳನ್ನು ಕಾರ್ಯರೂಪಕ್ಕೆ ತರದೆ ಮುಂದೂಡಲಾಯಿತು’ ಎಂದು ಕಿಡಿಕಾರಿದರು.

ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್‌, ಬಿಜೆಪಿ ವಿರುದ್ಧ ಮುಗಿಬಿದ್ದಿರುವ ಹೊತ್ತಿನಲ್ಲೇ, ಇತಿಹಾಸವನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ತಿರುಗೇಟು ನೀಡುವ ಯತ್ನವನ್ನು ಪ್ರಧಾನಿ ಮೋದಿ ಮಾಡಿದರು.ಇದೆ ವೇಳೆ ಖಂ ಡ್ವಾ ಜಿಲ್ಲೆಯ ಓಂಕಾರೇಶ್ವರ ತೇಲುವ ಸೌರ ಯೋಜನೆಯನ್ನು ವರ್ಚುವಲ್‌ ಆಗಿ ಉದ್ಘಾಟಿಸಿದ ಮೋದಿ, ದೌಧನ್‌ ಅಣೆಕಟ್ಟು ನಿರ್ಮಾಣ ಯೋಜನೆ, ಕಾಲುವೆ ನಿರ್ಮಾಣ ಯೋಜನೆಗೂ ಮೋದಿ ಶಂಕುಸ್ಥಾಪನೆ ಮಾಡಿದರು.

ನದಿ ಜೋಡಣೆ ಪ್ರಯೋಜನ:

ಬೆನ್‌ ನದಿಯ ಹೆಚ್ಚುವರಿ ನೀರನ್ನು ಅಣೆಕಟ್ಟಿನ ಮೂಲಕ ಸಂಗ್ರಹಿಸಿ ಅದನ್ನು ಬೆಟ್ವಾ ನದಿಗೆ ಹರಿಸುವ ಯೋಜನೆ ಇದಾಗಿದೆ. 8 ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಿರುವ ಈ ಯೋಜನೆಗೆ 44,605 ಕೋಟಿ ರು. ವೆಚ್ಚವಾಗುವ ನಿರೀಕ್ಷೆ ಇದೆ. ಯೋಜನೆಯಿಂದ ಮಧ್ಯಪ್ರದೇಶ, ಉತ್ತರಪ್ರದೇಶದ 10 ಲಕ್ಷ ಕೃಷಿಗೆ ನೀರಾವರಿ ಸೌಲಭ್ಯ, 65 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ. ಜೊತೆಗೆ 130 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಗುರಿಯನ್ನೂ ಹೊಂದಲಾಗಿದೆ.

ವಾಜಪೇಯಿ ಸ್ಮರಣಾರ್ಥ ನಾಣ್ಯ, ಸ್ಟ್ಯಾಂಪ್‌ ಬಿಡುಗಡೆ

ದೇಶದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಯಪೇಯಿ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಅವರ ಸ್ಮರಣಾರ್ಥವಾಗಿ ಪ್ರಧಾನಿ ಮೋದಿ ನಾಣ್ಯ ಹಾಗೂ ಸ್ಟ್ಯಾಂಪ್‌ ಬಿಡುಗಡೆ ಮಾಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

50ನೇ ಟಾಸ್ಕ್‌ ಆತ್ಮಹತ್ಯೆ: ಕೊರಿಯನ್‌ ಗೇಮ್‌ಗೆ 3 ಸೋದರಿಯರು ಬಲಿ!
ರಾಹುಲ್‌, ಸಚಿವ ಬಿಟ್ಟು ನಡುವೆ ದ್ರೋಹಿ, ದೇಶದ್ರೋಹಿ ಸಮರ