ಅಗ್ನಿವೀರರಿಗೆ 4 ಬಿಜೆಪಿ ರಾಜ್ಯಗಳ ಪೊಲೀಸ್‌ ನೇಮಕದಲ್ಲಿ ಮೀಸಲು- ಯೋಜನೆ ಬಗ್ಗೆ ಮೋದಿ ಹಸೀ ಸುಳ್ಳು: ಖರ್ಗೆ

KannadaprabhaNewsNetwork | Updated : Jul 27 2024, 06:21 AM IST

ಸಾರಾಂಶ

ಬಿಜೆಪಿ ರಾಜ್ಯಗಳಾದ ಉತ್ತರಾಖಂಡ, ಛತ್ತೀಸ್‌ಗಢ, ಉತ್ತರ ಪ್ರದೇಶದ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಅಗ್ನಿವೀರ ಯೋಧರಿಗೆ ನಿವೃತ್ತಿ ನಂತರ ಪೊಲೀಸ್ ಮತ್ತು ಸಶಸ್ತ್ರ ಪಡೆಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ನೇಮಕದಲ್ಲಿ ಮೀಸಲಾತಿ ನೀಡಲು ನಿರ್ಧರಿಸಿವೆ.

ಲಖನೌ/ಭೋಪಾಲ್‌: ಬಿಜೆಪಿ ರಾಜ್ಯಗಳಾದ ಉತ್ತರಾಖಂಡ, ಛತ್ತೀಸ್‌ಗಢ, ಉತ್ತರ ಪ್ರದೇಶದ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಅಗ್ನಿವೀರ ಯೋಧರಿಗೆ ನಿವೃತ್ತಿ ನಂತರ ಪೊಲೀಸ್ ಮತ್ತು ಸಶಸ್ತ್ರ ಪಡೆಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ನೇಮಕದಲ್ಲಿ ಮೀಸಲಾತಿ ನೀಡಲು ನಿರ್ಧರಿಸಿವೆ. 

ಕಾರ್ಗಿಲ್ ವಿಜಯ್ ದಿವಸ್ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸ್ ಮತ್ತು ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ಅಗ್ನಿವೀರರಿಗೆ ಮೀಸಲಾತಿ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ 4 ಬಿಜೆಪಿ ಆಡಳಿತದ ಸರ್ಕಾರಗಳು ಮೀಸಲು ಘೋಷಣೆ ಮಾಡಿವೆ. ಅಗ್ನಿವೀರ ಯೋಜನೆಯಲ್ಲಿ 4 ವರ್ಷ ಸೇವೆ ಸಲ್ಲಿಸಿದ ಬಹುತೇಕ ಯೋಧರನ್ನು ಸೇವೆಯಿಂದ ಕೈಬಿಡಲಾಗುತ್ತದೆ.

ಅಗ್ನಿವೀರ ಯೋಜನೆ ಬಗ್ಗೆ ಮೋದಿ ಹಸೀ ಸುಳ್ಳು: ಖರ್ಗೆ

ನವದೆಹಲಿ : ಕಾರ್ಗಿಲ್ ವಿಜಯ್ ದಿವಸ್‌ ಆಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ನಿವೀರ ಯೋಜನೆ ಬಗ್ಗೆ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಶುಕ್ರವಾರ ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,

‘ಸೇನೆಯ ಇಚ್ಛೆಯ ಮೇರೆಗೆ ಸರ್ಕಾರ ಅಗ್ನಿಪಥ್ ಯೋಜನೆ ಜಾರಿಗೊಳಿಸಿದೆ ಎಂದು ನೀಡಿದ ಹೇಳಿಕೆ ಒಂದು ಕಟ್ಟಾ ಸುಳ್ಳು ಎಂದಿದ್ದಾರೆ.ಟ್ವೀಟ್‌ ಮಾಡಿರುವ ಖರ್ಗೆ, ‘ಕಾರ್ಗಿಲ್ ವಿಜಯ್ ದಿವಸ್‌ನಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದರ್ಭದಲ್ಲೂ ಪ್ರಧಾನಿ ನರೇಂದ್ರ ಮೋದಿ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ದುರದೃಷ್ಟಕರ ಮತ್ತು ಖಂಡನೀಯ. "ಮೋದಿ ಅವರು ತಮ್ಮ ಸರ್ಕಾರವು ಸೇನೆಯ ಆಜ್ಞೆಯ ಮೇರೆಗೆ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೇಳುತ್ತಿದ್ದಾರೆ, ಇದು ಹಸಿ ಸುಳ್ಳು ಮತ್ತು ನಮ್ಮ ಧೀರ ಸಶಸ್ತ್ರ ಪಡೆಗಳಿಗೆ ಅಕ್ಷಮ್ಯ ಅವಮಾನ’ ಎಂದಿದ್ದಾರೆ.

‘ಮಾಜಿ ಸೇನಾ ಮುಖ್ಯಸ್ಥ ಜ।(ನಿವೃತ್ತ) ಎಂ.ಎಂ. ನರವಣೆ ಅವರು ಅಗ್ನಿಪಥ್ ಯೋಜನೆ ಅಡಿ ನೇಮಕವಾಗುವ ಶೇ.75 ಯೋಧರನ್ನು ಕಾಯಂ ಮಾಡಿ, ಉಳಿದ ಶೇ.25 ಯೋಧರನ್ನು ಕೈಬಿಡಬೇಕು ಎಂದಿದ್ದರು. ಆದರೆ ಮೋದಿ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ. ಹೀಗಾಗಿ ಇದು ಆಘಾತಕಾರಿ ಯೋಜನೆ ಎಂದು ನರವಣೆ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಆದರೆ ಪುಸ್ತಕ ಮುದ್ರಣ ಆಗದಂತೆ ಮೋದಿ ಸರ್ಕಾರ ತಡೆದಿದೆ’ ಎಂದು ಖರ್ಗೆ ಆರೋಪಿಸಿದರು.

‘ನಾವು ಕೇವಲ 6 ತಿಂಗಳ ತರಬೇತಿಯಿಂದ ವೃತ್ತಿಪರ ಸೈನಿಕರನ್ನು ರೂಪಿಸುವುದು ಸಾಧ್ಯವೇ? ಸೈನಿಕರು ದೇಶಭಕ್ತಿಯಿಂದ ಸೇನೆಗೆ ಸೇರುತ್ತಾರೆಯೇ ಹೊರತು ಜೀವನೋಪಾಯಕ್ಕಾಗಿ ಅಲ್ಲ’ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.

Share this article