ನವದೆಹಲಿ: ತನ್ನ ಶೌಚಾಲಯವನ್ನು ತಾನೇ ಶುಚಿಗೊಳಿಸಿಕೊಳ್ಳುವೆ ಮತ್ತು ತನ್ನ ಮಕ್ಕಳಿಗೂ ಶುಚಿಗೊಳಿಸುವಂತೆ ಬೋಧಿಸುತ್ತೇನೆ.
ಇತರರೂ ಸಹ ತಮ್ಮ ಶೌಚಾಲಯವನ್ನು ತಾವೇ ಶುಚಿಗೊಳಿಸಲು ಯಾವುದೇ ಕೀಳರಿಮೆ ಬೆಳೆಸಿಕೊಳ್ಳಬಾರದು ಎಂದು ಬಹುಕೋಟಿ ಉದ್ಯಮಿಯಾಗಿರುವ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ.
ಎನ್ಡಿಟೀವಿಗೆ ಸಂದರ್ಶನ ನೀಡಿದ ಅವರು ಅವರು, ‘ಇಂದಿನ ದಿನಮಾನಗಳಲ್ಲಿ ಶ್ರೀಮಂತ ಕುಟುಂಬಗಳಲ್ಲಿ ಶೌಚಾಲಯ ಶುಚಿಗೊಳಿಸುವುದನ್ನು ಕೀಳರಿಮೆ ಎಂಬಂತೆ ಬಿಂಬಿಸಲಾಗುತ್ತದೆ.
ಅವರು ತಮ್ಮ ನಿರ್ಲಕ್ಷ್ಯದಿಂದ ಶೌಚಾಲಯವನ್ನು ಶುಚಿಗೊಳಿಸದೆ ಮತ್ತೊಬ್ಬರನ್ನು ನೇಮಿಸಿರುತ್ತಾರೆ.
ಜೊತೆಗೆ ನಮ್ಮ ಸಮಾಜದಲ್ಲಿ ಶೌಚಾಲಯ ಶುಚಿಗೊಳಿಸುವವರನ್ನು ಸಮಾಜದಲ್ಲಿ ಕೆಳದರ್ಜೆಯ ವ್ಯಕ್ತಿಗಳಾಗಿ ಪರಿಗಣಿಸಲಾಗುತ್ತದೆ’ ಎಂದು ಬೇಸರಿಸಿದರು.
‘ಆದರೆ ನಮ್ಮ ಶೌಚಾಲಯವನ್ನು ನಾವೇ ಶುಚಿಗೊಳಿಸಿಕೊಳ್ಳುವ ಮೂಲಕ ಇತರರಿಗೆ ಗೌರವ ಸಲ್ಲಿಸಬೇಕು.
ಆ ಮೂಲಕ ನಮಗಿಂತ ಕೆಳಮಟ್ಟದ ವ್ಯಕ್ತಿಗಳು ಈ ಸಮಾಜದಲ್ಲಿ ಯಾರೂ ಇಲ್ಲ ಎಂಬುದನ್ನು ಮನಗಾಣಬೇಕು ಎಂದು ನಮ್ಮ ಮಕ್ಕಳಿಗೆ ಬೋಧಿಸುತ್ತಿರುತ್ತೇನೆ’ ಎಂದು ತಿಳಿಸಿದರು.
ರಾಜಕೀಯಕ್ಕೆ ಸೇರಲ್ಲ: ಇದೇ ವೇಳೆ ತಾವು ರಾಜಕೀಯಕ್ಕೆ ಸೇರುವ ಕುರಿತು ಪ್ರಶ್ನಿಸಿದ ವೇಳೆ ‘ಈಗಾಗಲೇ ನನಗೆ 78 ವರ್ಷವಾಗಿದ್ದು, ಇದು ರಾಜಕೀಯಕ್ಕೆ ಸೇರುವ ವಯಸ್ಸಲ್ಲ.
ಬದಲಾಗಿ ನಾನು ನನ್ನ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸಮಯ ಕಳೆಯುತ್ತಾ ಪುಸ್ತಕಗಳನ್ನು ಓದುತ್ತಾ ಜೀವನವನ್ನು ಆನಂದಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.
ಹಾಗೆಯೇ ಪತ್ನಿ ಸುಧಾ ಮೂರ್ತಿಯವರೂ ಮಾತನಾಡಿ, ಸಮಾಜ ಸೇವೆ ಮಾಡಲು ರಾಜಕೀಯಕ್ಕೇ ಸೇರಬೇಕೆಂದೇನೂ ಇಲ್ಲ ಎಂದು ಹೇಳಿದರು.