ದೇಶವ್ಯಾಪಿ ಗ್ಯಾಸ್‌ ಟ್ರಬಲ್‌ಗೆ ಹೋಟೆಲ್‌ಗಳು ಬಂದ್‌ : ಜನಜೀವನದ ಮೇಲೆ ಭಾರೀ ಹೊಡೆತ

Published : Mar 12, 2026, 05:41 AM IST
LPG

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ದೇಶವ್ಯಾಪಿ ಉದ್ಭವಿಸಿರುವ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿನ ವ್ಯತ್ಯಯ ಬುಧವಾರ ಮತ್ತಷ್ಟು ತೀವ್ರಗೊಂಡಿದೆ. ಸಿಲಿಂಡರ್‌ ಪೂರೈಕೆ ಕೊರತೆ ಪರಿಣಾಮ ದೇಶಾದ್ಯಂತ ಹೋಟೆಲ್‌, ಕ್ಯಾಂಟೀನ್‌, ಪಿಜಿ, ಕಲ್ಯಾಣ ಮಂಟಪಗಳಿಗೆ ಭಾರೀ ಹೊಡೆತ ಬಿದ್ದಿದೆ.

  ಬೆಂಗಳೂರು/ ನವದೆಹಲಿ :  ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ದೇಶವ್ಯಾಪಿ ಉದ್ಭವಿಸಿರುವ ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿನ ವ್ಯತ್ಯಯ ಬುಧವಾರ ಮತ್ತಷ್ಟು ತೀವ್ರಗೊಂಡಿದೆ.

 ಸಿಲಿಂಡರ್‌ ಪೂರೈಕೆ ಕೊರತೆ ಪರಿಣಾಮ ದೇಶಾದ್ಯಂತ ಹೋಟೆಲ್‌, ಕ್ಯಾಂಟೀನ್‌, ಪಿಜಿ, ಕಲ್ಯಾಣ ಮಂಟಪಗಳಿಗೆ ಭಾರೀ ಹೊಡೆತ ಬಿದ್ದಿದೆ. ದೇಶವ್ಯಾಪಿ ಶೇ.20-30ರಷ್ಟು ಹೋಟೆಲ್‌ಗಳು ಬಂದ್‌ ಆಗಿದ್ದರೆ, ಬಹುತೇಕ ಕಡೆ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದೆ. 

ಇನ್ನು ರಾಜ್ಯದ ಬಹುತೇಕ ಜಿಲ್ಲೆಗಳಲ್ಲೂ ವಾಣಿಜ್ಯ ಸಿಲಿಂಡರ್‌ ಸಮಸ್ಯೆ ವ್ಯಾಪಕವಾಗಿದ್ದು, ಪೂರೈಕೆಯಲ್ಲಿ ಶೇ.50ರಷ್ಟು ಕಡಿತವಾಗಿದೆ. ಕೆಲ ಪಿಜಿ ಹಾಗೂ 30ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಕೊಕ್‌ ನೀಡಲಾಗಿದೆ. ಸಿಲಿಂಡರ್‌ ಕೊರತೆಯ ಬಿಸಿ ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳ ಮೇಲೂ ಬಿದ್ದಿದ್ದು, ರೋಗಿಗಳಿಗೆ ಪೂರೈಕೆಯಾಗುವ ಊಟದ ಮೆನುವಿಗೂ ಕತ್ತರಿ ಬಿದ್ದಿದೆ. ಇನ್ನು ಸಾಮೂಹಿಕ ಭೋಜನ ಸಿದ್ಧತೆಗೆ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಕೆಲವೆಡೆ ವಿವಾಹಗಳೇ ಮುಂದೂಡಿಯಾಗಿದ್ದರೆ, ಕೆಲ ದೇವಸ್ಥಾನಗಳಲ್ಲಿ ನೀಡುತ್ತಿದ್ದ ಉಚಿತ ಪ್ರಸಾದಕ್ಕೂ ಸಂಚಕಾರ ಎದುರಾಗಿದೆ.

ಆಟೋ ಗ್ಯಾಸ್‌ ಕೂಡ ಏರಿಕೆ:

ವಾಣಿಜ್ಯ ಬಳಕೆ ಸಿಲಿಂಡರ್‌ ಜತೆಗೆ ಆಟೋ ಗ್ಯಾಸ್‌ ಬೆಲೆಯೂ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕರ ಜೇಬಿಗೆ ಹೊರೆಯಾಗುತ್ತಿದೆ. ಅನಿಲ ಸಿಲಿಂಡರ್‌ ಅಭಾವ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದು ಯಾವ ಹಂತ ತಲುಪುತ್ತದೆಯೋ ಎಂಬ ಆತಂಕ ಜನಸಾಮಾನ್ಯರಲ್ಲಿ ಮನೆ ಮಾಡಿದೆ.

ಬಂದ್‌ ಆಗುತ್ತಿವೆ ಹೋಟೆಲ್‌ಗಳು:

ವಾಣಿಜ್ಯ ಬಳಕೆ ಅನಿಲ್‌ ಸಿಲಿಂಡರ್‌ ಅಭಾವದ ಅತಿದೊಡ್ಡ ಹೊಡೆತ ಬಿದ್ದಿರುವುದು ಹೋಟೆಲ್‌ ಉದ್ಯಮದ ಮೇಲೆ. ಸಿಲಿಂಡರ್‌ ಸಿಗದೆ ಸಾಕಷ್ಟು ಹೋಟೆಲ್‌ಗಳು ಬುಧವಾರ ಬಂದ್‌ ಆಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಗುರುವಾರದ ನಂತರ ಸಂಪೂರ್ಣ ಚಿತ್ರಣವೇ ಬದಲಾಗಲಿದ್ದು, ಹೋಟೆಲ್‌ ಅನ್ನೇ ಅವಲಂಬಿಸಿದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಮೂಡಿದೆ.

ಬೆಂಗಳೂರಿನ ಹೃದಯ ಮೆಜೆಸ್ಟಿಕ್‌ ಸುತ್ತಮುತ್ತ ಬಹಳಷ್ಟು ಹೋಟೆಲ್‌ಗಳು ಬಂದ್‌ ಆಗಿ ಜನತೆ ಸಂಕಷ್ಟ ಅನುಭವಿಸುವಂತಾಗಿದೆ. ಮೆಜೆಸ್ಟಿಕ್‌ನ ಪ್ರತಿಷ್ಠಿತ ಕದಂಬ ಹೋಟೆಲ್‌ನಲ್ಲಿ ನಿತ್ಯ ಸಾವಿರಾರು ಜನ ಊಟ ಮಾಡುತ್ತಿದ್ದು, ಸಿಲಿಂಡರ್‌ ಅಭಾವದಿಂದಾಗಿ ತಾತ್ಕಾಲಿಕವಾಗಿ ಹೋಟೆಲ್‌ ಬಂದ್‌ ಮಾಡಲಾಗಿದೆ.

ಇನ್ನು ಮೆಜೆಸ್ಟಿಕ್‌ನ ಹೋಟೆಲ್ ಶ್ರೀಕೃಷ್ಣ ವೈಭವ, ಉಡುಪಿ ಆದಿತ್ಯ ಹೋಟೆಲ್, ಶ್ರೀ ಗಣೇಶ ದರ್ಶಿನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಯ ರೈಲ್ವೆ ನಿಲ್ದಾಣ ಸಮೀಪದ ದೊನ್ನೆ ಬಿರಿಯಾನಿ ಮನೆ ಹೋಟೆಲ್ ಸೇರಿ ಹಲವು ಹೋಟೆಲ್‌ಗಳು ಬಂದ್ ಆಗಿದ್ದವು. ಕೆಲ ಹೋಟೆಲ್‌ಗಳು ಬುಧವಾರ ಅರ್ಧ ದಿನ ತೆಗೆದಿದ್ದು ಬಳಿಕ ಮುಚ್ಚಿದವು. ಪ್ರತಿನಿತ್ಯ ಸಾವಿರಾರು ಜನರಿಗೆ ಅಡುಗೆ ಮಾಡಿ ಬಡಿಸುವ ಸಿಬ್ಬಂದಿಯೂ ಬೆಳಗಿನ ತಿಂಡಿ ಇಲ್ಲದೆ ಪರದಾಡುವುದು ಕೆಲವೆಡೆ ಕಂಡುಬಂತು. ಸಿಲಿಂಡರ್‌ ಪೂರೈಕೆ ಆಗದಿದ್ದರೆ ಗುರುವಾರದಿಂದ ಹೋಟೆಲ್‌ಗಳನ್ನು ಸಂಪೂರ್ಣ ಬಂದ್‌ ಮಾಡಬೇಕಾಗುತ್ತದೆ ಎಂದು ಹೋಟೆಲ್‌ಗಳ ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆ ಕ್ಯಾಂಟೀನ್‌ಗಳಲ್ಲಿ ಮೆನುಗೆ ಕತ್ತರಿ

ಅಡುಗೆ ಅನಿಲ ಸಿಲಿಡರ್‌ ಅಭಾವ ಆಸ್ಪತ್ರೆಗಳ ಕ್ಯಾಂಟೀನ್‌ಗೂ ತಟ್ಟಿದೆ. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕ್ಯಾಂಟೀನ್‌ನಲ್ಲಿ ಸಿಲಿಂಡರ್‌ ಅಭಾವದಿಂದಾಗಿ ಮಧ್ಯಾಹ್ನದವರೆಗೆ ಮಾತ್ರ ಪರೋಟಾ, ಚಪಾತಿ ಲಭ್ಯವಿರುತ್ತದೆ ಎಂದು ಪ್ರಕಟಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಕ್ಯಾಂಟೀನ್‌ನಲ್ಲೂ ಸಿಲಿಂಡರ್‌ ಅಭಾವ ಉಂಟಾಗಿದೆ. ಬುಧವಾರ ಊಟದ ಮೆನುವಿನಲ್ಲಿ ಪೂರಿ, ದೋಸೆ ಇರುವುದಿಲ್ಲ ಎಂದು ಪ್ರಕಟಿಸಿದ್ದು, ಸಿಲಿಂಡರ್‌ ಪೂರೈಕೆ ಆಗದಿದ್ದಲ್ಲಿ ಕ್ಯಾಂಟೀನ್‌ ಬಂದ್‌ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ದೇಗುಲ ಪ್ರಸಾದಕ್ಕೂ ತತ್ವಾರ

ರಾಜಧಾನಿಯ ಪ್ರಸಿದ್ಧ ದೇವಸ್ಥಾನಗಳಿಗೂ ಅಡುಗೆ ಸಿಲಿಂಡರ್‌ ಅಭಾವದ ಬಿಸಿತಟ್ಟಿದೆ. ಭಕ್ತರಿಗೆ ಉಚಿತವಾಗಿ ನಿಡುತ್ತಿದ್ದ ಪ್ರಸಾದ ವಿತರಣೆಗೂ ಸಂಕಷ್ಟ ಉಂಟಾಗಿದೆ.

ಬನಶಂಕರಿ ದೇವಸ್ಥಾನದಲ್ಲಿ ಮಂಗಳವಾರ ಮತ್ತು ಶುಕ್ರವಾರ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ನಿತ್ಯವೂ ಮೂರರಿಂದ ನಾಲ್ಕು ಸಾವಿರ ಜನರಿಗೆ ಉಚಿತ ಪ್ರಸಾದ ವಿತರಿಸಲಾಗುತ್ತದೆ. ಇನ್ನುಳಿದ ದಿನಗಳಲ್ಲಿ ಮೂರರಿಂದ ನಾಲ್ಕು ಸಾವಿರ ಭಕ್ತರು ಪ್ರಸಾದ ಸೇವಿಸುತ್ತಾರೆ. ಬೆಳಗ್ಗೆ ಪೊಂಗಲ್‌, ಪುಳಿಯೊಗರೆ, ರೈಸ್ ತ್‌ ಅನ್ನು ಪ್ರಸಾದವಾಗಿ ನೀಡಲಾಗುತ್ತದೆ. ಮಧ್ಯಾಹ್ನ ಅನ್ನ ಸಾಂಬಾರ್‌, ಸಂಜೆ ಸಹ ಪ್ರಸಾದದ ವ್ಯವಸ್ಥೆ ಇದೆ. ಅನಿಲ ಸಿಲಿಂಡರ್‌ ಅಭಾವದಿಂದಾಗಿ ಪ್ರಸಾದ ವಿತರಣೆಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾಹಿತಿ ನೀಡಿರುವ ದೇವಸ್ಥಾನ ಇಓ ಕೃಷ್ಣಪ್ಪ, ‘ಪ್ರತಿದಿನ ಭಕ್ತಾದಿಗಳಿಗೆ ಪ್ರಸಾದ ಸಿದ್ಧಪಡಿಸಲು ಒಂದರಿಂದ ಎರಡು ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಬೇಕಾಗುತ್ತದೆ. ಸದ್ಯ ನಮ್ಮ ಬಳಿ 4 ಸಿಲಿಂಡರ್‌ ಮಾತ್ರ ಇದ್ದು ಬುಧವಾರ, ಶುಕ್ರವಾರದವರೆಗೂ ಸಾಕಾಗಲಿವೆ. ಆದರೆ. ಮಾ.12 ರಿಂದ ಭಕ್ತರಿಗೆ ಪ್ರಸಾದ ವಿತರಿಸುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಮದುವೆಗೂ ತಟ್ಟಿದ ಬಿಸಿ

ಬೇಸಿಗೆ ಪ್ರಾರಂಭವಾದರೆ ಸಾಕು ಮದುವೆಗಳ ಸಂಭ್ರಮ ಶುರುವಾಗುತ್ತದೆ. ಆದರೆ ಅಡುಗೆ ಸಿಲಿಂಡರ್‌ ಅಭಾವದ ಬಿಸಿ ವಿವಾಹ ಕಾರ್ಯಕ್ರಮದ ಮೇಲೂ ತಟ್ಟಿದೆ. ವಿವಾಹ ಸಮಾರಂಭದಲ್ಲಿ ಖಾದ್ಯಗಳನ್ನು ತಯಾರಿಸಲು ಸಾಕಷ್ಟು ಸಿಲಿಂಡರ್‌ಗಳ ಅವಶ್ಯಕತೆ ಇದೆ. ಆದರೆ ಸಿಲಿಂಡರ್‌ ಸಂಕಷ್ಟದಿಂದಾಗಿ ಒಂದು ವಾರದಿಂದ ಕಲ್ಯಾಣ ಮಂಟಪ ಬುಕ್‌ ಮಾಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ಬಿಲ್ಲವ ಅಸೋಸಿಯೇಷನ್‌ ಅಧ್ಯಕ್ಷ ವೇದ ಕುಮಾರ್‌ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದರು. ಈ ಹಿಂದೆ ನಿಗದಿಯಾಗಿದ್ದ ವಿವಾಹಗಳೂ ಮುಂದೂಡಲ್ಪಡುತ್ತಿವೆ ಎಂದು ಮಲ್ಲೇಶ್ವರದ ಕರ್ಮಲ್ ಕೆರಮಲು ವೀರಣ್ಣವರ್ ಕಲ್ಯಾಣ ಮಂಟಪದ ಮಾಲಿಕ ಪ್ರಸಾದ್ ತಿಳಿಸಿದ್ದಾರೆ. 

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗೂಗಲ್‌, ಮೈಕ್ರೋಸಾಫ್ಟ್‌ ನಮ್ಮ ಮುಂದಿನ ದಾಳಿ ಗುರಿ : ಇರಾನ್‌!
ಲ್ಯಾಂಡಿಂಗ್‌ ವೇಳೆ ಕಳಚಿದ ವಿಮಾನದ ನೋಸ್‌ ವೀಲ್‌ : ಅಪಾಯವಿಲ್ಲ