ಪಟೇಲ್ ಮಾತು ಕೇಳಿದ್ದರೆ ಇಂದು ಪಿಒಕೆ ನಮ್ಮ ಬಳಿ ಇರುತ್ತಿತ್ತು
ಆದರೆ ಆಗಿನ ನಾಯಕತ್ವ ಪಟೇಲ್ರ ಮಾತು ಕೇಳಲೇ ಇಲ್ಲ
ಗಾಂಧಿನಗರ: ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಮಾತು ಕೇಳಿದ್ದರೆ ಇಂದು ಕಾಶ್ಮೀರ ವಿಷಯ ಇತ್ಯರ್ಥ ಆಗಿರುತ್ತಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಸರ್ದಾರ್ ಪಟೇಲ್ ಅವರು ಕಠಿಣ ನಿಲುವು ತಳೆದಿದ್ದರು, ದೇಶ ವಿಭಜನೆಯಾದ ಬಳಿಕ ನಡೆದ ಪಾಕ್ ಜತೆಗಿನ ಮೊದಲ ಯುದ್ಧದ ವೇಳೆ ಪಿಒಕೆ ವಾಪಸ್ ಆಗುವವರೆಗೆ ಸೇನಾ ಕಾರ್ಯಾಚರಣೆ ನಿಲ್ಲಿಸಬಾರದು ಎಂದು ಅವರ ನಿಲುವಾಗಿತ್ತು. ಆದರೆ, ಆಗಿನ ನಾಯಕತ್ವ ಅದನ್ನು ನಿರ್ಲಕ್ಷ್ಯ ಮಾಡಿತು ಎಂದು ಜವಾಹರ್ ಲಾಲ್ ನೆಹರೂ ಹೆಸರೆತ್ತದೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.ಗುಜರಾತ್ನ ಗಾಂಧಿನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದೇಶವಿಭಜನೆ ಮತ್ತು ಕಾಶ್ಮೀರ ಸಂಘರ್ಷಕ್ಕೆ ಸಂಬಂಧಿಸಿ ನೇರ ಸಂಬಂಧ ಕಲ್ಪಿಸಿದ ಮೋದಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬೆನ್ನಿಗೆ ನಿಂತು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುವಶಪಡಿಸಿಕೊಳ್ಳಬಹುದಾಗಿದ್ದ ಬಹುದೊಡ್ಡ ಅವಕಾಶವೊಂದು ಭಾರತದ ಕೈಯಿಂದ ತಪ್ಪಿ ಹೋಯಿತು ಎಂದು ಹೇಳಿದರು.
ಈ ನಡುವೆ ನೆಹರೂ ಅವರ ಪುಣ್ಯಜಯಂತಿಯಂದೂ ಅವರನ್ನು ಮೋದಿ ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
==ಈ ಬಾರಿ ಸಾಕ್ಷಿ ಕೇಳದಂತೆ ಹೊಡೆದಿದ್ದೇವೆ: ಮೋದಿ
ಬಾಲಾಕೋಟ್ ದಾಳಿಗೆ ಸಾಕ್ಷ್ಯ ಕೇಳಿದ್ದ ಕಾಂಗ್ರೆಸ್ಗೆ ತಿರುಗೇಟುನವದೆಹಲಿ: ಈ ಹಿಂದೆ ಬಾಲಾಕೋಟ್ ದಾಳಿ ಬಗ್ಗೆ ಸಾಕ್ಷಿ ಕೇಳಿದ್ದ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದ್ದು, ಈ ಬಾರಿ ಆಪರೇಷನ್ ಸಿಂದೂರದ ಬಗ್ಗೆ ಯಾರೂ ಸಾಕ್ಷಿ ಕೇಳುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರಧಾನಿ, ‘ಆಪರೇಷನ್ ಸಿಂದೂರದಿಂದ ಪಾಕಿಸ್ತಾನದ ಉಗ್ರ ತಾಣಗಳ ಮೇಲಾಗಿರುವ ಭಾರಿ ಅನಾಹುತಗಳನ್ನು ಉಪಗ್ರಹ ಚಿತ್ರಗಳು, ನಮ್ಮದೇ ಆದ ಕ್ಯಾಮೆರಾಗಳು ಚೆನ್ನಾಗಿ ಸೆರೆ ಹಿಡಿದಿವೆ. ಹೀಗಾಗಿ ಈ ಬಾರಿ ಯಾರೂ ಸಾಕ್ಷಿ ಕೇಳುವುದಿಲ್ಲ’ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ. 2019ರಲ್ಲಿ ನಡೆದ ಬಾಲಾಕೋಟ್ ದಾಳಿ ಬಳಿಕ ಕಾಂಗ್ರೆಸ್ ಪಕ್ಷವು ಸಾಕ್ಷಿ ಕೇಳಿ ಭಾರಿ ಸದ್ದು ಮಾಡಿತ್ತು.
==ಗಣೇಶ ವಿಗ್ರಹವೂ ಚೀನಾದಿಂದ ಬರ್ತಿದೆ, ಸ್ವದೇಶಿ ವಸ್ತುಗಳ ಬಳಸಿ: ಮೋದಿ ಕರೆ
ನವದೆಹಲಿ: ‘ಗಣಪತಿ ವಿಗ್ರಹಗಳು ಕೂಡಾ ಚೀನಾದಿಂದ ಆಮದಾಗುತ್ತಿದೆ. ದಯವಿಟ್ಟು ಸ್ವದೇಶಿ ವಸ್ತುಗಳನ್ನು ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಚೀನಾದಿಂದ ಕಡಿಮೆ ಬೆಲೆಯ ವಸ್ತುಗಳ ಬಗ್ಗೆ ಜಾಗೃತರಾಗಿರಿ ಎಂದು ಕರೆ ಕೊಟ್ಟಿದ್ದಾರೆ. ಮಂಗಳವಾರ ಮಾತನಾಡಿದ ಮೋದಿ,‘ಚೀನಾದಿಂದ ಗಣಪತಿಯ ವಿಗ್ರಹಗಳು ಸಹ ಬರುತ್ತಿವೆ. ಅವುಗಳು ಸರಿಯಾಗಿ ಕಣ್ಣು ಸಹ ಬಿಟ್ಟಿರುವುದಿಲ್ಲ. ಚೀನಾದಿಂದ ಕಡಿಮೆ ಬೆಲೆಯ ವಸ್ತುಗಳನ್ನು ಭಾರತದ ಮಾರುಕಟ್ಟೆಯ ಮೇಲೆ ಹೇರಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.