- ಕೆಲವೇ ಶಾಲೆಗಳಲ್ಲಿದ್ದ ವ್ಯವಸ್ಥೆ ಇಡೀ ರಾಜ್ಯಕ್ಕೆ ವಿಸ್ತರಣೆ
ತರಗತಿಗಳಲ್ಲಿ ಕಡೆಯ ಬೆಂಚ್ ಎಂಬ ಮಾದರಿ ರದ್ದುಪಡಿಸಿ ಅದರ ಬದಲು ವಿದ್ಯಾರ್ಥಿಗಳನ್ನು ವೃತ್ತಾಕಾರ, ಯು ಆಕಾರದಲ್ಲಿ ಕೂರಿಸುವ ಕೇರಳದ ಶಾಲೆಯೊಂದರ ಪ್ರಯೋಗ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೇ ಮಾದರಿಯನ್ನು ರಾಜ್ಯವ್ಯಾಪಿ ಅಳವಡಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಶಿಕ್ಷಣ ಸಚಿವ ಶಿವನ್ ಕುಟ್ಟಿ, ‘ಲಾಸ್ಟ್ ಬೆಂಚ್ ಪದ್ಧತಿಯಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಮತ್ತು ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ತೆಗೆದು ಹೊಸ ಮಾದರಿ ಅಳವಡಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಅವರ ಶಿಫಾರಸಿನ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ಕೇರಳದ ತ್ರಿಶೂರಿನ ವಡಕ್ಕಂಚೇರಿ ಪೂರ್ವ ಮಾಂಗಾಡ್ನಲ್ಲಿರುವ ಆರ್ಸಿಸಿಎಲ್ಪಿ ಶಾಲೆ ಸೇರಿ ಹಲವು ಶಾಲೆಗಳು ‘ಸ್ಥಾನಾರ್ಥಿ ಶ್ರೀಕುಟ್ಟನ್’ ಎಂಬ ಚಿತ್ರದಿಂದ ಪ್ರೇರಣೆ ಪಡೆದು ಶಾಲೆಯಲ್ಲಿ ಲಾಸ್ಟ್ ಬೆಂಚ್ ಬದಲಿಗೆ ‘ಯು’ ಆಕಾರದ ಬೆಂಚ್ ಅಳವಡಿಸಿತ್ತು. ಇದರ ಬಳಿಕ ರಾಜ್ಯದಲ್ಲಿ ಹಲವು ಶಾಲೆಗಳು ಇದೇ ಮಾದರಿಯನ್ನು ಅನುಸರಿಸಿದ್ದವು.
ಕರ್ನಾಟಕದ ದಕ್ಷಿಣದ ಕನ್ನಡದ ಶಾಲೆಯೊಂದರಲ್ಲಿ ಹಲವು ದಶಕಗಳಿಂದಲೇ ಇಂಥ ಪದ್ಧತಿ ಜಾರಿಯಲ್ಲಿದೆ.