ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿಯವರ ಒಂದೇ ಒಂದು ದೂರವಾಣಿ ಕರೆ ಇರಾನ್-ಇಸ್ರೇಲ್ ಸಂಘರ್ಷವನ್ನು ನಿಲ್ಲಿಸಬಲ್ಲದು’ ಎಂದು ಭಾರತದಲ್ಲಿನ ಯುಎಇ ರಾಯಭಾರಿ ಹುಸೇನ್ ಹಸನ್ ಮಿರ್ಜಾ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ‘ಯುದ್ಧದಲ್ಲಿ ಇರಾನ್ ನಮ್ಮನ್ನೇಕೆ ಮಧ್ಯ ತಂದಿತೋ ತಿಳಿಯುತ್ತಿಲ್ಲ. ಇದರಲ್ಲಿ ಯುಎಇಯನ್ನು ಭಾಗಿಯಾಗಿಸಲು ಯಾವ ಕಾರಣವೂ ಇಲ್ಲ. ಪ್ರಧಾನಿ ಮೋದಿಯವರು ಕೊಲ್ಲಿ ನಾಯಕರಲ್ಲಿ ಮಾತ್ರವಲ್ಲದೆ ಆ ಪ್ರದೇಶದ ಸಾರ್ವಜನಿಕರು ಮತ್ತು ವ್ಯಾಪಾರ ಸಮುದಾಯಗಳಲ್ಲಿಯೂ ಅಪಾರ ಗೌರವವನ್ನು ಹೊಂದಿದ್ದಾರೆ. ಅವರು ಇರಾನ್ ಮತ್ತು ಇಸ್ರೇಲ್ನ ಮುಖ್ಯಸ್ಥರಿಗೆ ಒಂದು ಫೋನ್ ಕರೆ ಮಾಡಿ ಈ ಸಮಸ್ಯೆಯನ್ನು ಪರಿಹರಿಸಬಹುದು. ಒಂದೇ ಒಂದು ಫೋನ್ ಕರೆ ಸಾಕು’ ಎಂದರು.
ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದ್ದು ಇಸ್ರೇಲ್ ಮೇಲೆ ಇರಾನ್ ಭಾನುವಾರ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ಗಾಯಗೊಂಡಿದ್ದಾನೆ. ಆತನ ಕುತ್ತಿಗೆಗೆ ಕ್ಷಿಪಣಿಯ ಚೂರು ತಗುಲಿದೆ,ಗಾಯಗೊಂಡ ವ್ಯಕ್ತಿಯು ಟೆಲ್ ಅವಿವ್ನ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ಸದ್ಯ ಅವರ ಪರಿಸ್ಥಿತಿ ಸುಧಾರಿಸಿದೆ. ಟೆಲ್ ಅವಿವ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಪರಿಸ್ಥಿತಿ ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ನವದೆಹಲಿ: ಇರಾನ್ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿ ದೆಹಲಿಯಿಂದ ಮ್ಯಾಂಚೆಸ್ಟರ್ಗೆ ಹೊರಟಿದ್ದ ಇಂಡಿಗೋ ಸಂಸ್ಥೆಯ ಬೋಯಿಂಗ್ 787 ವಿಮಾನವು ಯೂಟರ್ನ್ ಮಾಡಿಮೊಂಡು ದೆಹಲಿಗೆ ಮತ್ತೆ ಮರಳಿದೆ. ಇ್ದದೇ ವೇಳೆ, ಮುಂಬೈ-ಲಂಡನ್ ಇಂಡಿಗೋ ವಿಮಾನ ಕೈರೋದಲ್ಲಿ ಲ್ಯಾಂಡ್ ಆಗಿ ಸಂಚಾರ ಸ್ಥಗಿತಗೊಂಡಿದೆ.ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಎರಿಟ್ರಿಯಾ ವಾಯುನೆಲೆಗಳ ಮೇಲೆ ನಿರ್ಬಂಧ ಕಾರಣ ಈ ದಿಢೀರ್ ಬೆಳವಣಿಗೆ ಸಂಭವಿಸಿದೆ.
ಮೂಲಗಳ ಪ್ರಕಾರ ಮ್ಯಾಂಚೆಸ್ಟರ್ಗೆ ಹೊರಟ ವಿಮಾನವು ಎರಿಟ್ರಿಯಾ ವಾಯುನೆಲೆಗೆ ಪ್ರವೇಶಿಸಬೇಕಿತ್ತು. ಆದರೆ ಈ ವೇಳೆ ಅಲ್ಲಿನ ವಿಮಾನ ಸಂಚಾರದಲ್ಲಿ ಅನುಮೋದನೆಗೆ ಸಮಸ್ಯೆಗಳಿದ್ದ ಕಾರಣ ದೆಹಲಿಗೆ ವಿಮಾನ ಹಿಂದಿರುಗಿದೆ.ಈ ಬಗ್ಗೆ ಇಂಡಿಗೋ ಪ್ರತಿಕ್ರಿಯಿಸಿದ್ದು, ‘ಪಶ್ಚಿಮ ಏಷ್ಯಾದಲ್ಲಿನ ಸದ್ಯದ ಪರಿಸ್ಥಿತಿಯಿಂದಾಗಿ ದೆಹಲಿಯಿಂದ ಮ್ಯಾಂಚೆಸ್ಟರ್ಗೆ ತೆರಳುತ್ತಿದ್ದ 6E033 ವಿಮಾನವು ಕೊನೆ ಕ್ಷಣದ ವಾಯುಪ್ರದೇಶ ನಿರ್ಬಂಧಗಳಿಂದಾಗಿ ದೆಹಲಿಗೆ ಮತ್ತೆ ಮರಳಬೇಕಾಯಿತು’ ಎಂದಿದೆ.
ಪಾಕ್ನಲ್ಲಿ 15 ದಿನ ಶಾಲೆ ಬಂದ್, ವಾರಕ್ಕೆ ನಾಲ್ಕೇ ದಿನ ಕಚೇರಿ
ಇಸ್ಲಾಮಾಬಾದ್: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವ ಕಾರಣ, ಪಾಕಿಸ್ತಾನ ಸರ್ಕಾರ ಇಂಧನ ಉಳಿತಾಯಕ್ಕಾಗಿ ಹಲವು ಕ್ರಮಗಳನ್ನು ಘೋಷಿಸಿದೆ.15 ದಿನಗಳ ಕಾಲ ಶಾಲಾ ಕಾಲೇಜುಗಳು ಬಂದ್, ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ ನಾಲ್ಕೇ ದಿನ ಕೆಲಸ ಸೇರಿದಂತೆ ಹಲವು ನಿಯಮಗಳನ್ನು ಪ್ರಧಾನಿ ಶೆಹಬಾಜ್ ಷರೀಫ್ ಸೋಮವಾರ ಘೋಷಿಸಿದ್ದಾರೆ.
ರು. ಮೌಲ್ಯ 53 ಪೈಸೆ ಕುಸಿದು 92.35ಕ್ಕಿಳಿಕೆ: ಸಾರ್ವಕಾಲಿಕ ಕನಿಷ್ಠ
ಮುಂಬೈ: ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಕಚ್ಚಾ ತೈಲ ಬೆಲೆಗಳ ಏರಿಕೆಯಿಂದ ಭಾರತದ ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಸೋಮವಾರ ಒಂದೇ ದಿನ 53 ಪೈಸೆ ಕುಸಿದು 92.35 ರು.ಗೆ ಮುಕ್ತಾಯವಾಗಿದೆ. ಇದು ರುಪಾಯಿಯ ಇದುವರೆಗಿನ ಸಾರ್ವಕಾಲಿಕ ಕನಿಷ್ಠವಾಗಿದೆ.ಮಧ್ಯಪ್ರಾಚ್ಯ ಬಿಕ್ಕಟ್ಟು, ಕಚ್ಚಾತೈಲ ಬೆಲೆ ಹೆಚ್ಚಳ, ಭಾರತೀಯ ಷೇರುಪೇಟೆಯಿಂದ ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆದಿದ್ದು, ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಷೇರುಪೇಟೆ ಭಾರಿ ಪತನ
ಮುಂಬೈ: ಇರಾನ್ ಯುದ್ಧದ ಪರಿಣಾಮ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಒಂದೇ ದಿನ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಸೆನ್ಸೆಕ್ಸ್ 1,352.74 ಅಂಕ ಕುಸಿದು 77,566 ಅಂತ್ಯಗೊಂಡಿದ್ದರೆ ನಿಫ್ಟಿ 422.4 ಅಂಕ ಇಳಿದು 24,028ರಲ್ಲಿ ಮುಕ್ತಾಯಗೊಂಡಿದೆ.
ಷೇರು ಮಾರುಕಟ್ಟೆಯಲ್ಲಿನ ಈ ನಕಾರಾತ್ಮಕ ಬದಲಾವಣೆ ಪರಿಣಾಮ ಹೂಡಿಕೆದಾರರು ಒಂದೇ ದಿನ ಬರೋಬ್ಬರಿ 12.78 ಲಕ್ಷ ಕೋಟಿ ರು. ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಆರಂಭವಾದ ಬಳಿಕದಿಂದ ಭಾರತೀಯ ಷೇರುಪೇಟೆಯು ಕಳೆದ 10 ದಿನದಲ್ಲಿ 31 ಲಕ್ಷ ಕೋಟಿ ರು.ನಷ್ಟು ಇಳಿಕೆ ಕಂಡಿದೆ.ಕಚ್ಚಾ ತೈಲಗಳ ಬೆಲೆ ಏರಿಕೆ, ಮಧ್ಯಪ್ರಾಚ್ಯ ಬಿಕ್ಕಟ್ಟು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಜತೆಗೆ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತವು ಪರಿಣಾಮ ಬೀರಿದೆ ಎನ್ನಲಾಗಿದೆ.