ಕೇಂದ್ರ ಸರ್ಕಾರದ 'ಒಂದು ದೇಶ ಒಂದು ಚುನಾವಣೆ' ಪ್ರಸ್ತಾಪ : ಚೀಪ್ ಗಿಮಿಕ್ ಅಥವಾ ಅಗತ್ಯ ಸುಧಾರಣೆ?

KannadaprabhaNewsNetwork |  
Published : Sep 19, 2024, 01:45 AM ISTUpdated : Sep 19, 2024, 05:18 AM IST
ಒಂದು ದೇಶ ಒಂದು ಚುನಾವಣೆ | Kannada Prabha

ಸಾರಾಂಶ

ಕೇಂದ್ರ ಸರ್ಕಾರದ 'ಒಂದು ದೇಶ ಒಂದು ಚುನಾವಣೆ' ಪ್ರಸ್ತಾಪವು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷಗಳು ಇದನ್ನು ಚೀಪ್ ಗಿಮಿಕ್ ಎಂದು ಟೀಕಿಸಿದರೆ, ಎನ್‌ಡಿಎ ಮಿತ್ರಪಕ್ಷಗಳು ಸ್ವಾಗತಿಸಿವೆ.

ನವದೆಹಲಿ: ಕೇಂದ್ರ ಸರ್ಕಾರದ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾಪವನ್ನು ವಿಪಕ್ಷಗಳು ವ್ಯಾಪಕವಾಗಿ ತಿರಸ್ಕರಿಸಿವೆ. ಇದು ಅಪ್ರಾಯೋಗಿಕ ಮತ್ತು ಚೀಪ್‌ ಗಿಮಿಕ್‌ ಎಂದು ಸರ್ಕಾರವನ್ನು ಕಟುವಾಗಿ ಟೀಕಿಸಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಈ ಪರಿಕಲ್ಪನೆ ಅಪ್ರಾಯೋಗಿಕವಾಗಿದ್ದು, ಚುನಾವಣೆಗಳು ಸಮೀಪಿದ್ದಾಗ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ತಿರುಗಿಸಲು ಬಿಜೆಪಿ ಇಂತಹ ತಂತ್ರ ಹೂಡುತ್ತದೆ’ ಎಂದು ಟೀಕಿಸಿದ್ದಾರೆ.

ಇದಕ್ಕೆ ಜೆಎಂಎಂ ಸಚಿವೆ ಮಹುವಾ ಮಾಜಿ ಕೂಡ ದನಿಗೂಡಿಸಿದ್ದು, ‘ಇಂಥ ಯೋಜನೆಗಳ ಮೂಲಕ ಭಾರತದಲ್ಲಿ ಅಧಿಕಾರ ನಡೆಸುವ ಏಕೈಕ ಪಕ್ಷವಾಗಲು ಬಿಜೆಪಿ ಬಯಸುತ್ತಿದೆ. ಎನ್‌ಸಿಪಿ ಮತ್ತು ಶಿವಸೇನೆಯನ್ನು ವಿಭಜಿಸಿದಂತೆ ಜೆಎಂಎಂ ಸೇರಿದಂತೆ ಅನ್ಯ ಪ್ರಾದೇಶಿಕ ಪಕ್ಷಗಳನ್ನು ತೊಡೆದುಹಾಕಲು ಹವಣಿಸುತ್ತಿದೆ’ ಎಂದಿದ್ದಾರೆ.

‘ಹರ್ಯಾಣಾ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆಗಳಲ್ಲಿ ಸೋಲುವ ಭಯದಲ್ಲಿರುವ ಬಿಜೆಪಿ, ಈಗಾಗಲೇ ಒಂದರ ಮೇಲೊಂದರಂತೆ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದು, ಮೈತ್ರಿ ಬಿದ್ದುಹೋಗುವ ಸಾಧ್ಯತೆಯಿದೆ. ಅದರಿಂದ ಗಾಬರಿಯಾಗಿ ಈ ಕ್ರಮ ಕೈಗೊಂಡಿದೆ’ ಎಂದು ಕಾಂಗ್ರೆಸ್‌ ನಾಯಕ ಹರೀಶ್‌ ರಾವತ್‌ ಮೂದಲಿಸಿದ್ದಾರೆ.

ಒಂದು ದೇಶ, ಒಂದು ಚುನಾವಣೆ ಒಕ್ಕೂಟ ವ್ಯವಸ್ಥೆಯನ್ನು ನಾಶ ಪಡಿಸುವ ಮೂಲಕ ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ಪ್ರಜಾಪ್ರಭುತ್ವವನ್ನು ರಾಜಿ ಮಾಡುವ ಪ್ರಯತ್ನ. ಆದ್ದರಿಂದಲೇ ಇದನ್ನು ನಾನು ವಿರೋಧಿಸುತ್ತೇನೆ. ಬಹು ಚುನಾವಣೆಗಳಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರಿಗೆ ಮಾತ್ರ ತೊಂದರೆ. ಆದ್ದರಿಂದಲೇ ಒಂದು ದೇಶ, ಒಂದು ಚುನಾವಣೆಯನ್ನು ಜಾರಿ ಮಾಡಲು ಮುಂದೆ ಬಿದ್ದಿದ್ದಾರೆ.

-ಅಸಾದುದ್ದೀನ್‌ ಓವೈಸಿ, ಎಐಎಂಐಎ ಮುಖ್ಯಸ್ಥ

ಬಿಜೆಪಿಯ ಮತ್ತೊಂದು ಕಳಪೆ ಸಾಹಸ

ಒಂದು ರಾಷ್ಟ್ರ, ಒಂದು ಚುನಾವಣಾ ವಿಷಯ ಪ್ರಜಾಪ್ರಭುತ್ವವನ್ನು ವಿರೋಧಿಸುವ ಬಿಜೆಪಿಯ ಮತ್ತೊಂದು ಕಳಪೆ ಸಾಹಸ. ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಚುನಾವಣೆಗಳೊಂದಿಗೆ ಮಹಾರಾಷ್ಟ್ರದಲ್ಲಿ ಚುನಾವಣೆಯನ್ನು ಏಕೆ ಘೋಷಿಸಿಲ್ಲ. ಕೇಂದ್ರ ಸರ್ಕಾರಕ್ಕೆ ಒಂದೇ ಬಾರಿ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಅದರಲ್ಲಿ ಒಂದು ದೇಶ, ಒಂದು ಚುನಾವಣೆ ಬಗ್ಗೆ ಮಾತನಾಡುತ್ತಿದೆ.

ಡೆರೆಕ್ ಒ‘ಬ್ರಿಯಾನ್‌, ಟಿಎಂಸಿ ಸಂಸದ

ಏಕ ಚುನಾವಣೆಗೆ ಎನ್‌ಡಿಎ ಮಿತ್ರರ ಬೆಂಬಲ

ನವದೆಹಲಿ: ದೇಶದಲ್ಲಿ ಏಕಕಾಲಿಕ ಚುನಾವಣೆ ನಡೆಸುವ ನರೇಂದ್ರ ಮೋದಿ ನೇತೃತ್ವದ ಮಹತ್ವಕಾಂಕ್ಷಿ ಯೋಜನೆ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದಕ್ಕೆ ಎನ್‌ಡಿಎ ಮೈತ್ರಿ ಕೂಟದ ಮಿತ್ರ ಪಕ್ಷಗಳು ಮೆಚ್ಚುಗೆ ಸೂಚಿಸಿವೆ. ಅಲ್ಲದೇ ನರೇಂದ್ರ ಮೋದಿಯವರು ನೀಡಿರುವ ಭರವಸೆಗಳನ್ನು ಈಡೇರಿಸುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಬಣ್ಣಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಎನ್‌ಡಿಎ ಕೂಟದ ಮಿತ್ರ ಪಕ್ಷಗಳಾಗಿರುವ ಲೋಕ ಜನಶಕ್ತಿ, ಶಿವಸೇನಾ, ಜೆಡಿಯು, ಜೆಡಿಎಸ್‌ ಸೇರಿದಂತೆ ಹಲವು ಪಕ್ಷಗಳು ಸ್ವಾಗತಿಸಿದ್ದು, ದೇಶದ ಹಿತಾಸಕ್ತಿ ಕಾಪಾಡಲು ಇದು ಐತಿಹಾಸಿಕ ಹೆಜ್ಜೆ ಎಂದಿದ್ದಾರೆ.

ಒಂದು ದೇಶ, ಒಂದು ಚುನಾವಣೆ ಜಾರಿಗೆ 10 ಶಿಫಾರಸು

1. ಏಕಕಾಲಿಕ ಚುನಾವಣೆ ನಡೆಸಲು ಸರ್ಕಾರ ಕಾನೂನುಬದ್ಧ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕು.2. ಮೊದಲ ಹಂತದಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸಬಹುದು.

3. ಎರಡನೆ ಹಂತದಲ್ಲಿ ಪುರಸಭೆ ಮತ್ತು ಪಂಚಾಯತಿ ಚುನಾವಣೆಗಳನ್ನು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆದ 100 ದಿನಗಳೊಳಗಾಗಿ ಪೂರ್ಣಗೊಳಿಸಬೇಕು.4. ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಉದ್ದೇಶದಿಂದ ಲೋಕಸಭೆ ಚುನಾವಣೆಯ ಬಳಿಕದ ಮೊದಲ ಅಧಿವೇಶನಕ್ಕೆ ರಾಷ್ಟ್ರಪತಿಗಳು ಒಂದು ದಿನಾಂಕವನ್ನು ನಿಗದಿಪಡಿಸುತ್ತಾರೆ.

5. ಲೋಕಸಭೆಯ ಅವಧಿ ಮುಕ್ತಾಯವಾಗುವ ಮುನ್ನ ರಚನೆಯಾದ ರಾಜ್ಯ ಸರ್ಕಾರಗಳ ಅವಧಿ ಏಕಕಾಲಿಕ ಚುನಾವಣೆ ಸಂದರ್ಭದಲ್ಲಿ ಮೊಟಕುಗೊಂಡು ಹೊಸದಾಗಿ ಚುನಾವಣೆ ಎದುರಿಸಬೇಕು.6. ಅವಿಶ್ವಾಸ ನಿರ್ಣಯದಂತಹ ಸಂದರ್ಭಗಳಲ್ಲಿ ಲೋಕಸಭೆಗೆ ಹೊಸದಾಗಿ ಚುನಾವಣೆ ನಡೆಸಲು ಅವಕಾಶವಿದೆ.

7. ಹೊಸ ಚುನಾವಣೆಯಿಂದ ರಚನೆಯಾದ ಸರ್ಕಾರದ ಅವಧಿ ಹಿಂದಿನ ಸರ್ಕಾರದ ಪೂರ್ಣಾವಧಿಯ ತನಕ ಮಾತ್ರ ಇರುತ್ತದೆ.8. ಹೊಸ ಚುನಾವಣೆಗಳ ಮೂಲಕ ರಚನೆಯಾದ ರಾಜ್ಯ ಸರ್ಕಾರಗಳು ಲೋಕಸಭೆಯ ಅವಧಿ ಮುಗಿಯುವವರೆಗೆ ಮುಂದುವರೆಯಬೇಕು.

9. ರಾಜ್ಯ ಚುನಾವಣಾ ಆಯೋಗಗಳೊಂದಿಗೆ ಸೇರಿ ನಡೆಸಿ ಕೇಂದ್ರ ಚುನಾವಣಾ ಆಯೋಗ ಏಕರೂಪದ ಮತದಾರರ ಪಟ್ಟಿ ಹಾಗೂ ಗುರುತಿನ ಚೀಟಿಗಳನ್ನು ಸಿದ್ಧಪಡಿಸಬೇಕು.10. ಏಕಕಾಲದಲ್ಲಿ ಚುನಾವಣೆ ನಡೆಸುವ ಸಲುವಾಗಿ ಇವಿಎಂ ಮತ್ತು ವಿವಿಪ್ಯಾಟ್‌ಗಳಂತಹ ಸಲಕರಣೆಗಳ ಖರೀದಿ, ಮತಗಟ್ಟೆಗಳಲ್ಲಿ ಸಿಬ್ಬಂದಿ ಹಾಗೂ ಭದ್ರತಾ ಪಡೆಗಳ ನಿಯೋಜನೆ ಸೇರಿದಂತೆ ಇತರೆ ವ್ಯವಸ್ಥೆ ಮಾಡಲು ಆಯೋಗ ಮುಂಚಿತವಾಗಿ ಯೋಜನೆಯನ್ನು ರೂಪಿಸಬಹುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!