ಚಂಡೀಗಢ: ಪಾಕ್ ಪರ ಬೇಹುಗಾರಿಕೆ ಆರೋಪದಲ್ಲಿ ಬಂಧಿತ ಯುಟ್ಯೂಬರ್ ಜ್ಯೋತಿ 26 ಪ್ರವಾಸಿಗರ ನರಮೇಧ ನಡೆದ ಪಹಲ್ಗಾಂ, ಕೇರಳ, ಒಡಿಶಾದ ಪುರಿ ದೇಗುಲಕ್ಕೂ ಭೇಟಿ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ.
ಹೀಗಾಗಿ ಈ ಸ್ಥಳಗಳ ಕುರಿತು ಆಕೆ ಪಾಕಿಸ್ತಾನದೊಂದಿಗೆ ಮಾಹಿತಿ ಹಂಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಜ್ಯೋತಿ ಇದೇ ವರ್ಷದ ಜನವರಿಯಲ್ಲಿ ಕಾಶ್ಮೀರದ ಶ್ರೀನಗರ, ಸೋನ್ಮಾರ್ಗ್, ಗುಲ್ಮಾರ್ಗ್ ಮತ್ತು ಇತ್ತೀಚೆಗೆ ಉಗ್ರದಾಳಿಗೆ ಸಾಕ್ಷಿಯಾದ ಪಹಲ್ಗಾಂಗೆ ಭೇಟಿ ನೀಡಿದ್ದಳು ಎಂದು ವರದಿಗಳು ತಿಳಿಸಿವೆ
ಒಂದು ಕಡೆ ಗಡಿಯಲ್ಲಿ ಕ್ಯಾತೆ ತೆಗೆಯುತ್ತಾ, ಉಗ್ರರನ್ನು ಗಡಿ ದಾಟಿಸಿ ಭಯೋತ್ಪಾದನೆ ಕೃತ್ಯ ನಡೆಸುತ್ತಿರುವ ಪಾಕಿಸ್ತಾನ, ಇನ್ನೊಂದೆಡೆ ಭಾರತದ ವಿರುದ್ಧ ಭಾರತದ ಸಾಮಾಜಿಕ ಜಾಲತಾಣ ಪ್ರಭಾವಿಗಳು ಮತ್ತು ರೀಲ್ಸ್ ಸ್ಟಾರ್ಗಳನ್ನು ತನ್ನ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಪಾಕ್ಗೆ ಭಾರತದ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಶನಿವಾರ ಬಂಧನಕ್ಕೊಳಗಾಗಿದ್ದ ಹರ್ಯಾಣದ ಜ್ಯೋತಿ ಮಲ್ಹೋತ್ರಾ ವಿಚಾರಣೆ ವೇಳೆ ಇಂಥದ್ದೊಂದು ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.
ಜ್ಯೋತಿ ಬಂಧನದ ಬೆನ್ನಲ್ಲೇ ಆಕೆಯೊಂದಿಗೆ ಮತ್ತು ಭಾರತದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿ ಸಿಬ್ಬಂದಿ ಜೊತೆ ನಂಟು ಹೊಂದಿದ್ದ, ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ, ಪಾಕಿಸ್ತಾನದಲ್ಲಿ ಭಾರತವನ್ನು ತೆಗಳುವ ಕೆಲಸ ಮಾಡಿದ್ದ ಹಲವು ರೀಲ್ಸ್ ಸ್ಟಾರ್ಗಳ ಮೇಲೆ ಇದೀಗ ಕೇಂದ್ರೀಯ ಗುಪ್ತಚರ ಸಂಸ್ಥೆಗಳು ಕಣ್ಣಿಟ್ಟಿದ್ದು, ಶೀಘ್ರವೇ ಇನ್ನಷ್ಟು ಜನರ ಬಂಧನದ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಹೊಸ ದಾಳ:
ಶನಿವಾರ ಬಂಧನಕ್ಕೆ ಒಳಗಾದ ಜ್ಯೋತಿ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಿಸಾರ್ನ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್, ‘ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಪ್ರಭಾವಿಗಳನ್ನು ಬಳಸಿಕೊಂಡು, ಅವರು ತಮ್ಮ ಪರವಾಗಿ ಮಾತನಾಡುವಂತೆ ಮಾಡುತ್ತಾರೆ. ಅಂತಹ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಜ್ಯೋತಿ ಈಗಾಗಲೇ ಹಲವು ಬಾರಿ ಪಾಕ್ಗೆ ಮತ್ತು ಒಮ್ಮೆ ಚೀನಾಗೆ ಹೋಗಿ ಬಂದಿರುವುದು ಕಂಡುಬಂದಿದೆ. ಅಂತೆಯೇ, ಜ್ಯೋತಿಯ ಆದಾಯ ಮತ್ತು ಖರ್ಚು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಈ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ. ಆಕೆಯ ಪ್ರವಾಸವೆಲ್ಲಾ ಪಾಕ್ ಪ್ರಾಯೋಜಿತವಾಗಿತ್ತು. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ವೇಳೆ ಆಕೆ ಭಾರತದಲ್ಲಿನ ಪಾಕ್ ರಾಯಭಾರ ಕಚೇರಿ ಸಿಬ್ಬಂದಿ ಜೊತೆ ನಿರಂತರ ಸಂಪರ್ಕದಲ್ಲಿದ್ದಳು. ಅದರಲ್ಲಿ ಆಕೆಯ ನಂಟು ಅಥವಾ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಜತೆಗೆ, ಭಾರತೀಯ ಸೇನೆ ಅಥವಾ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಆಕೆಗೆ ತಿಳಿದಿರಲಿಲ್ಲ ಎಂದೂ ಹೇಳಿದ್ದಾರೆ.
ಹೇಗೆ ಬಳಕೆ?:
ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರನ್ನು ಹೊಂದಿರುವ ರೀಲ್ಸ್ ಸ್ಟಾರ್ಗಳಿಗೆ ಹಣ ಮತ್ತು ಇತರೆ ಆಮಿಷವೊಡ್ಡಿ ಅವರನ್ನು ತಮ್ಮ ಜಾಲಕ್ಕೆ ಪಾಕ್ ಬೀಳಿಸಿಕೊಳ್ಳುತ್ತಿತ್ತು. ಅವರ ಮೂಲಕ ಭಾರತದ ಆಯಕಟ್ಟಿನ, ಪ್ರಮುಖ ಸ್ಥಳಗಳ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿತ್ತು. ಉಚಿತ ಪ್ರವಾಸಗಳ ಮೂಲಕ ಪಾಕಿಸ್ತಾನಕ್ಕೆ ಕರೆದೊಯ್ದು, ಅಲ್ಲಿ ಪಾಕಿಸ್ತಾನ ಪರವಾದ, ಭಾರತಕ್ಕೆ ವಿರುದ್ಧವಾದ ಸಂಗತಿಗಳನ್ನು ಅವರಿಂದ ಹೇಳಿಸಲಾಗುತ್ತಿತ್ತು. ಹೀಗಾಗಿ ಸಾಮಾಜಿಕವಾಗಿ ಸದ್ದಿಲ್ಲದೇ ಜನರ ಮೇಲೆ ಪ್ರಭಾವ ಬೀರುವ ಕೆಲಸ ಮಾಡಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಹಲವರ ಮೇಲೆ ಶಂಕೆ:
ಈ ನಡುವೆ ಜ್ಯೋತಿಯ ಹಳೆಯ ವಿಡಿಯೋ ಕೆದಕಿದಾಗ ಆಕೆಯ ಜೊತೆ ಇನ್ನೂ ಹಲವಾರು ಜಾಲತಾಣ ಪ್ರಭಾವಿಗಳು ದೆಹಲಿಯಲ್ಲಿನ ಪಾಕ್ ರಾಯಭಾರ ಕಚೇರಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು, ಪಾಕಿಸ್ತಾನಕ್ಕೆ ವ್ಲಾಗರ್ಗಳ ಹೆಸರಲ್ಲಿ ತೆರಳಿರುವುದು, ಭಾರತ ವಿರೋಧಿ ಅಂಶಗಳನ್ನು ತಮ್ಮ ವ್ಲಾಗ್ಗಳಲ್ಲಿ ಪ್ರಸಾರ ಮಾಡಿರುವುದು ಕಂಡುಬಂದಿದೆ. ಜೊತೆಗೆ ಕಳೆದ ವರ್ಷ ಜ್ಯೋತಿ, ಒಡಿಶಾದ ಪುರಿಗೆ ಬಂದಾಗ ಸ್ಥಳೀಯ ಯೂಟ್ಯೂಬರ್ ಜೊತೆ ಸಂಪರ್ಕ ಬೆಳೆಸಿದ್ದು ಕಂಡುಬಂದಿದೆ. ಈ ಭೇಟಿಯ ಬಳಿಕ ಒಡಿಶಾ ಮಹಿಳೆ ಪಾಕ್ನಲ್ಲಿರುವ ಕರ್ತಾರ್ಪುರಕ್ಕೆ ಹೋಗಿಬಂದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ ಎಂದು ಒಡಿಶಾ ಪೊಲೀಸರು ಹೇಳಿದ್ದಾರೆ.