ಶಿಮ್ಲಾ: ಶಿಮ್ಲಾ ಒಪ್ಪಂದವನ್ನು ರದ್ದುಗೊಳಿಸಿ ಪಾಕಿಸ್ತಾನ ಘೋಷಿಸಿದ ಬೆನ್ನಲ್ಲೇ, ಹಿಮಾಚಲ ಪ್ರದೇಶದ ರಾಜಭವನದ ಕೀರ್ತಿ ಸಭಾಂಗಣದಲ್ಲಿ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಐತಿಹಾಸಿಕ ಮೇಜಿನ ಮೇಲಿಂದ ಪಾಕಿಸ್ತಾನದ ಧ್ವಜ ಕಾಣೆಯಾಗಿದೆ.ಸಭಾಂಗಣದ ಕೆಂಪು ಬಣ್ಣದ ವೇದಿಕೆಯ ಮೇಲೆ ಮೇಜನ್ನು ಇರಿಸಲಾಗಿದೆ. ಅದರ ಮೇಲೆ 1972ರ ಶಿಮ್ಲಾ ಒಪ್ಪಂದಕ್ಕೆ ಝುಲ್ಪಿಕರ್ ಅಲಿ ಭುಟ್ಟೊ ಸಹಿ ಹಾಕುತ್ತಿರುವ ಚಿತ್ರ, ‘ಶಿಮ್ಲಾ ಒಪ್ಪಂದಕ್ಕೆ 3-7-1972ರಂದು ಇಲ್ಲಿ ಸಹಿ ಹಾಕಲಾಯಿತು’ ಎಂದು ಬರೆದ ಫಲಕ ಮತ್ತು ಪಾಕಿಸ್ತಾನದ ಧ್ವಜವನ್ನು ಇಡಲಾಗಿತ್ತು.ಭಾರತದ ಜತೆಗಿನ ರಾಜತಾಂತ್ರಿಕ ಸಂಘರ್ಷದ ಭಾಗವಾಗಿ ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ರದ್ದುಗೊಳಿಸಿದ ಬೆನ್ನಲ್ಲೇ ಮೇಲಿಂದ ಪಾಕ್ ಧ್ವಜ ನಾಪತ್ತೆಯಾಗಿದೆ.
ಭಾರತದಿಂದ ಪಾಕ್ಗೆ ಹನಿ ನೀರೂ ಹರಿಯದು: ಕೇಂದ್ರ ಸಿಂಧೂ ನದಿ ಒಪ್ಪಂದಕ್ಕೆ ತಡೆ
ನವದೆಹಲಿ: ‘ಭಾರತದಿಂದ ಪಾಕಿಸ್ತಾನಕ್ಕೆ ಒಂದೇ ಒಂದು ಹನಿ ನೀರು ಹರಿಯದಂತೆ ನೋಡಿಕೊಳ್ಳಲು ಸರ್ಕಾರ ಕಾರ್ಯತಂತ್ರ ರೂಪಿಸುತ್ತಿದೆ’ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಹೇಳಿದರು.ಸಿಂಧೂ ನದಿ ಒಪ್ಪಂದಕ್ಕೆ ತಡೆ ನೀಡಿದ ಬೆನ್ನಲ್ಲೇ, ಮುಂದಿನ ಕ್ರಮಗಳ ಕುರಿತು ಸಮಾಲೋಚಿಸಲು ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿತ್ತು.
ಸಭೆಯ ಬಳಿಕ ಮಾತನಾಡಿದ ಸಚಿವ ಪಾಟೀಲ್, ‘ಪ್ರಧಾನಿ ಮೋದಿಯವರು ಹಲವಾರು ನಿರ್ದೇಶನಗಳನ್ನು ಹೊರಡಿಸಿದ್ದಾರೆ. ಅವುಗಳನ್ನು ಅನುಸರಿಸಲು ಸಭೆ ನಡೆಸಲಾಗಿದೆ. ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಮಿತ್ ಶಾ ಅವರು ಸಭೆಯಲ್ಲಿ ಸಲಹೆಗಳನ್ನು ನೀಡಿದ್ದಾರೆ. ಭಾರತದಿಂದ ಪಾಕಿಸ್ತಾನಕ್ಕೆ ಒಂದೇ ಒಂದು ಹನಿ ನೀರು ಹರಿಯದಂತೆ ನೋಡಿಕೊಳ್ಳುತ್ತೇವೆ’ ಎಂದರು.
ಏ.28ಕ್ಕೆ ಕಾಶ್ಮೀರ ವಿಧಾನಸಭೆ ವಿಶೇಷ ಅಧಿವೇಶನ
ಶ್ರೀನಗರ: ಏ.22ರಂದು ಅನಂತನಾಗ್ ಜಿಲ್ಲೆಯ ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಗೆ ಸಂಬಂಧಿಸಿದಂತೆ ಘಟನೆ ಬಗ್ಗೆ ಚರ್ಚಿಸಲು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಇದೇ 28ಕ್ಕೆ ವಿಧಾನಸಭೆ ವಿಶೇಷ ಅಧಿವೇಶನ ಕರೆದಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಲೆ.ಗವರ್ನರ್ ಏ.28 ರ ಬೆಳಿಗ್ಗೆ 10.30 ಶಾಸಕರಿಗೆ ಕಲಾಪಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಬುಧವಾರ ಮುಖ್ಯಮಂತ್ರ ಒಮರ್ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ವಿಶೇಷ ಅಧಿವೇಶನ ಕರೆಯುವಂತೆ ಲೆ.ಗವರ್ನರ್ಗೆ ಮನವಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಅದರ ಭಾಗವಾಗಿ ಮನೋಜ್ ಸಿನ್ಹಾ ವಿಶೇಷ ಅಧಿವೇಶನ ಕರೆದಿದ್ದಾರೆ.
ದೆಹಲಿಯ 900 ಮಾರುಕಟ್ಟೆಗಳು ಬಂದ್, ₹1,500 ಕೋಟಿ ವ್ಯಾಪಾರ ನಷ್ಟ
ನವದೆಹಲಿ: ಪಹಲ್ಗಾಂ ದಾಳಿ ಖಂಡಿಸಿ ದೆಹಲಿಯಲ್ಲಿ ವ್ಯಾಪಾರಿಗಳು ಶುಕ್ರವಾರ ಬಂದ್ಗೆ ಕರೆ ನೀಡಿದ ಹಿನ್ನೆಲೆ ಜನಪ್ರಿಯ ಮಾರುಕಟ್ಟೆಗಳಾದ ಕನ್ಹಾಟ್ ಪ್ಲೇಸ್, ಸದರ್ ಬಜಾರ್, ಚಾಂದನಿ ಚೌಕ್ ಸೇರಿದಂತೆ 900ಕ್ಕೂ ಹೆಚ್ಚು ಮಾರುಕಟ್ಟೆಗಳು ನಿರ್ಜನವಾಗಿದ್ದವು. ಜವಳಿ, ಮಸಾಲೆ, ಪಾತ್ರೆ ಮತ್ತು ಬೆಳ್ಳಿ ಸೇರಿದಂತೆ ವಿವಿಧ ವ್ಯಾಪಾರಿ ಸಂಘಗಳು ಬಂದ್ಗೆ ಬೆಂಬಲ ನೀಡಿದ್ದವು. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಕಾರ, ದೆಹಲಿಯಲ್ಲಿ 8 ಲಕ್ಷಕ್ಕೂ ಹೆಚ್ಚು ಅಂಗಡಿಗಳು ಮುಚ್ಚಲ್ಪಟ್ಟಿದ್ದು, ಸುಮಾರು 1,500 ಕೋಟಿ ರು.ಗಳ ವ್ಯಾಪಾರ ನಷ್ಟವಾಗಿದೆ.
ಪಾಕಿಸ್ತಾನಿ ಉತ್ಪನ್ನಗಳ ನಿಷೇಧಿಸಿ:
ಗುರುವಾರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಸಿಟಿಐ) ಬಂದ್ಗೆ ಕರೆ ನೀಡಿತ್ತು. ಉಗ್ರರ ದಾಳಿ ಖಂಡಿಸಿ ಕನ್ನಾಟ್ ಪ್ಲೇಸ್ನಲ್ಲಿ ಮೇಣದಬತ್ತಿ ಮೆರವಣಿಗೆ ನಡೆಸಲಾಯಿತು.ಈ ವೇಳೆ ಮಾತನಾಡಿದ ಸಿಟಿಐನ ಮುಖ್ಯಸ್ಥ ಬ್ರಿಜೇಶ್ ಗೋಯೆಲ್, ‘ಕೇಂದ್ರ ಸರ್ಕಾರವು ಪಾಕಿಸ್ತಾನದೊಂದಿಗಿನ ಎಲ್ಲಾ ವಾಣಿಜ್ಯ ಸಂಬಂಧಗಳನ್ನು ಕಡಿತಗೊಳಿಸಿ, ಭಾರತದಲ್ಲಿ ಪಾಕಿಸ್ತಾನಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕು’ ಎಂದು ಆಗ್ರಹಿಸಿದರು.