ಲಷ್ಕರ್‌ ಮುಖ್ಯಸ್ಥ ಹಫೀಜ್‌ ಸಯೀದ್‌ ಭದ್ರತೆ ಮತ್ತಷ್ಟು ಹೆಚ್ಚಿಸಿದ ಪಾಕಿಸ್ತಾನ

KannadaprabhaNewsNetwork |  
Published : May 02, 2025, 12:10 AM ISTUpdated : May 02, 2025, 04:26 AM IST
Hafiz Saeed

ಸಾರಾಂಶ

ಪಹಲ್ಗಾಂ ದಾಳಿಗೆ ಭಾರತವು ಪ್ರತೀಕಾರದ ಶಪಥ ಮಾಡಿರುವ ಬೆನ್ನಲ್ಲೇ ಪಾಕಿಸ್ತಾನವು ಇದೀಗ ಮುಂಬೈ ದಾಳಿ ರೂವಾರಿ, ನಿಷೇಧಿತ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಬಿಗಿ ಭದ್ರತೆ ಕಲ್ಪಿಸಿದೆ. 

 ನವದೆಹಲಿ: ಪಹಲ್ಗಾಂ ದಾಳಿಗೆ ಭಾರತವು ಪ್ರತೀಕಾರದ ಶಪಥ ಮಾಡಿರುವ ಬೆನ್ನಲ್ಲೇ ಪಾಕಿಸ್ತಾನವು ಇದೀಗ ಮುಂಬೈ ದಾಳಿ ರೂವಾರಿ, ನಿಷೇಧಿತ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಬಿಗಿ ಭದ್ರತೆ ಕಲ್ಪಿಸಿದೆ. ಪಾಕಿಸ್ತಾನ ಸೇನೆ, ಐಎಸ್‌ಐ ಮತ್ತು ಲಷ್ಕರ್‌-ಎ-ತೊಯ್ಬಾ ಉಗ್ರರು ಜಂಟಿಯಾಗಿ ಆತನ ಭದ್ರತೆಯ ಹೊಣೆ ಹೊತ್ತುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಾಹೋರ್‌ನ ಜನನಿಬಿಡ ಮೊಹಲ್ಲಾ ಜೊಹಾರ್‌ನಗರದಲ್ಲಿದೆ ಎನ್ನಲಾದ ಉಗ್ರನ ಮನೆ ಕಾಂಪೌಂಡ್‌ ಮೇಲೆ ಡ್ರೋನ್‌ ಕಣ್ಗಾವಲು ಇಡಲಾಗಿದೆ. 4 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ ಹೈರೆಸಲ್ಯೂಷನ್‌ ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

26 ಮಂದಿಯನ್ನು ಬಲಿಪಡೆದ ಪಹಲ್ಗಾಂ ದಾಳಿ ಹಿಂದೆಯೂ ಹಫೀಜ್‌ ಇದ್ದಾನೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು ಭಾರತದ ದಾಳಿ ಭೀತಿಯಿಂದ ಲಷ್ಕರ್‌ ಉಗ್ರನಿಗೆ 24 ಗಂಟೆ ಭದ್ರತೆ ನೀಡುತ್ತಿದೆ. ಆತನ ಮನೆಯ ಸುತ್ತಮುತ್ತ ನಾಗರಿಕರ ಓಡಾಟ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ಡ್ರೋನ್‌ಗಳ ಹಾರಾಟವನ್ನೂ ನಿರ್ಬಂಧಿಸಲಾಗಿದೆ. ಪಹಲ್ಗಾಂ ದಾಳಿ ಹೊಣೆಯನ್ನು ದಿ ರಿಸಿಸ್ಟೆನ್ಸ್‌ ಫ್ರಂಟ್‌(ಟಿಆರ್‌ಎಫ್‌) ವಹಿಸಿಕೊಂಡಿದೆಯಾದರೂ ಇದು ಲಷ್ಕರ್‌-ಎ-ತೊಯ್ಬಾದ ಸಹಸಂಘಟನೆ. ಭಾರತೀಯ ಗುಪ್ತಚರ ಇಲಾಖೆಯ ಪ್ರಕಾರ ಸಯೀದ್‌ ಈ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ.

ಸಯೀದ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಅಮೆರಿಕ ಮತ್ತು ವಿಶ್ವಸಂಸ್ಥೆಯಿಂದ ಹೆಸರಿಸಿದ್ದು, ಈತನ ತಲೆಗೆ 84 ಕೋಟಿ ರು. ಬಹುಮಾನ ಘೋಷಿಸಲಾಗಿದೆ. ಸಯೀದ್‌ನನ್ನು ಜೈಲಿನಲ್ಲಿರಿಸಲಾಗಿದೆ ಎಂದು ಪಾಕಿಸ್ತಾನ ಹೇಳುತ್ತಿದ್ದರೂ ಈ ಮೋಸ್ಟ್‌ ವಾಂಟೆಡ್‌ ಉಗ್ರ ಪಾಕ್‌ ಸೇನೆಯ ಆಶ್ರಯದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾನೆ.

2021ರಲ್ಲಿ ಸಯೀದ್‌ ಮನೆ ಸಮೀಪ ನಡೆದ ಬಾಂಬ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. ಆ ಬಳಿಕ ಆತನಿಗೆ ನೀಡಲಾಗಿದ್ದ ಭದ್ರತೆ ಬಿಗಿಗೊಳಿಸಲಾಗಿತ್ತು. ಇತ್ತೀಚೆಗೆ ಆತನ ಆತ್ಮೀಯ ಉಗ್ರ ಅಬು ಖತಲ್‌ನ ಹತ್ಯೆ ಬಳಿಕ ಸಯೀದ್‌ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ.

PREV

Recommended Stories

ಸೆಣಬಿನ ಚೀಲದಲ್ಲಿ ಸಕ್ಕರೆ ಪ್ಯಾಕಿಂಗ್‌ ಕಡ್ಡಾಯ ಆದೇಶ ಎತ್ತಿಹಿಡಿದ ಹೈಕೋರ್ಟ್‌
ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಡಾ.ಬಿ. ದಿನೇಶ್‌ ಹೆಸರು ಫೈನಲ್‌?