ಉಲ್ಫಾ ಉಗ್ರರ ಜತೆ ಐತಿಹಾಸಿಕ ಶಾಂತಿ ಒಪ್ಪಂದ

KannadaprabhaNewsNetwork |  
Published : Dec 30, 2023, 01:16 AM IST
ಅಮಿತ್‌ ಷಾ | Kannada Prabha

ಸಾರಾಂಶ

ಉಲ್ಫಾ ಉಗ್ರರ ಜೊತೆ ಅಮಿತ್‌ ಶಾ, ಹಿಮಂತ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಈ ಮೂಲಕ 44 ವರ್ಷಗಳ ಭೀಕರ ರಕ್ತಪಾತಕ್ಕೆ ಅಂತ್ಯ ಅಸ್ಸಾಂ ಕೊನೆ ಹಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಪಿಟಿಐ ನವದೆಹಲಿ

ಅಸ್ಸಾಂನಲ್ಲಿನ ದಶಕಗಳಷ್ಟು ಹಳೆಯದಾದ ಹಿಂಸಾಚಾರವನ್ನು ಕೊನೆಗೊಳಿಸುವ ಉದ್ದೇಶದಿಂದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಂ (ಉಲ್ಫಾ) ಉಗ್ರ ಸಂಘಟನೆ, ಕೇಂದ್ರ ಮತ್ತು ಅಸ್ಸಾಂ ಸರ್ಕಾರಗಳ ನಡುವೆ ಶುಕ್ರವಾರ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಿಂದ 44 ವರ್ಷಗಳಿಂದ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತ್ಯೇಕತೆ ಹೋರಾಟಕ್ಕೆ ತೆರೆ ಬೀಳುವ ಆಶಾಭಾವನೆ ಎದುರಾಗಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಉಲ್ಫಾ (ರಾಜ್‌ಖೋವಾ ಬಣ) ಮುಖ್ಯಸ್ಥ ಅರಬಿಂದ ರಾಜ್‌ಖೋವಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದದ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಇಂದು ಅಸ್ಸಾಂ ಜನರ ಪಾಲಿಗೆ ಬಹುದೊಡ್ಡ ಐತಿಹಾಸಿಕ ದಿನ. ಉಲ್ಫಾ ಹಿಂಸಾಚಾರದಿಂದ ರಾಜ್ಯದ ಜನ ಸಾಕಷ್ಟು ನಲುಗಿದ್ದಾರೆ. 10000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬರಲು ಒಪ್ಪಿರುವ ಉಲ್ಫಾ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರ ದೊಡ್ಡ ಪ್ಯಾಕೇಜ್‌ ಘೋಷಿಸಲಿದೆ. ಅದರ ಪ್ರತಿ ಅಂಶ ಜಾರಿಗೂ ಸರ್ಕಾರ ಬದ್ಧ. ಶಾಂತಿ ಮಾತುಕತೆಯ ಪರಿಣಾಮ ರಾಜ್ಯದಲ್ಲಿ ಹಿಂಸಾಚಾರ ಪ್ರಮಾಣದಲ್ಲಿ ಶೇ.87ರಷ್ಟು, ಸಾವಿನ ಸಂಖ್ಯೆಯಲ್ಲಿ ಶೆ.90ರಷ್ಟು ಮತ್ತು ಅಪಹರಣ ಪ್ರಕರಣಗಳಲ್ಲಿ ಶೇ.84ರಷ್ಟು ಇಳಿಕೆಯಾಗಿದೆ. ಉಲ್ಘಾ ಹಿಂಸಾಚಾರಕ್ಕೆ ಅಸ್ಸಾಂನಲ್ಲಿ 1979ರಿಂದೀಚೆಗೆ 10000 ಜನರು ಜೀವ ತೆತ್ತಿದ್ದಾರೆ. ಈಗ ಉಗ್ರರು ಹಿಂಸೆ ತೊರೆದು, ಸಂಘಟನೆ ವಿಸರ್ಜಿಸಿ, ಪ್ರಜಾಪ್ರಭುತ್ವದಲ್ಲಿ ಭಾಗಿಯಾಗಲು ಒಪ್ಪಿದ್ದಾರೆ. ಅಸ್ಸಾಂಗೆ ದೊಡ್ಡ ಆರ್ಥಿಕ ಪ್ಯಾಕೇಜ್‌ ನೀಡಲಾಗುವುದು’ ಎಂದು ಹೇಳಿದರು.ಈ ಒಪ್ಪಂದವು ಸ್ಥಳೀಯ ಜನರಿಗೆ ಸಾಂಸ್ಕೃತಿಕ ರಕ್ಷಣೆ ಮತ್ತು ಭೂಮಿಯ ಹಕ್ಕುಗಳನ್ನು ಒದಗಿಸುವುದರ ಜೊತೆಗೆ ಅಸ್ಸಾಂಗೆ ಸಂಬಂಧಿಸಿದ ದೀರ್ಘಕಾಲದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತದೆ ಎಂದು ಕೇಂದ್ರ ಸರ್ಕಾರದ ಹೇಳಿಕೆ ತಿಳಿಸಿದೆ. ಇಂಥದ್ದೊಂದು ಒಪ್ಪಂದದ ಕುರಿತು ಉಲ್ಫಾ ಉಗ್ರರು ಮತ್ತು ಸರ್ಕಾರದ ನಡುವೆ 12 ವರ್ಷಗಳಿಂದ ಹಿಂಬಾಗಿಲ ಮಾತುಕತೆ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರುವಾ ಬಣದ ಸಮ್ಮತಿ ಇಲ್ಲ:ಈ ನಡುವೆ, ಉಲ್ಫಾದಲ್ಲಿ ಪರೇಶ್ ಬರುವಾ ಎಂಬಾತನ ಬಣವೂ ಇದ್ದು, ಈ ಬಣವು ಒಪ್ಪಂದದ ಭಾಗವಾಗುವುದಿಲ್ಲ ಏಕೆಂದರೆ ಸರ್ಕಾರದ ಈ ಆಫರ್‌ಗೆ ಬರುವಾ ಬಣದ ಸಮ್ಮತಿಯಿಲ್ಲ.

ಆದರೆ ರಾಜ್‌ಖೋವಾ ಗುಂಪಿನ ಇಬ್ಬರು ಉನ್ನತ ನಾಯಕರಾದ- ಅನುಪ್ ಚೇಟಿಯಾ ಮತ್ತು ಶಶ್ಧರ್ ಚೌಧರಿ - ಕಳೆದ ವಾರದಿಂದಲೇ ದಿಲ್ಲಿಯಲ್ಲಿ ಬೀಡುಬಿಟ್ಟು ಸರ್ಕಾರದ ಜತೆಗಿನ ಶಾಂತಿ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡಿದ್ದಾರೆ.44 ವರ್ಷದ ಸಂಘರ್ಷ‘ಸಾರ್ವಭೌಮ ಅಸ್ಸಾಂ‘ ಬೇಡಿಕೆಯೊಂದಿಗೆ 1979ರಲ್ಲಿ ಉಲ್ಫಾವನ್ನು ರಚಿಸಲಾಗಿತ್ತು. ಅಂದಿನಿಂದ, ಅದು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿದೆ. ಇದರಲ್ಲಿ ಸುಮಾರು 4 ಸಾವಿರ ಉಗ್ರರು ಇದ್ದಾರೆ. ಉಲ್ಫಾ ಹಿಂಸಾಚಾರ 10000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಹೀಗಾಗಿ ಕೇಂದ್ರ ಸರ್ಕಾರವು 1990 ರಲ್ಲಿ ಉಲ್ಫಾವನ್ನು ನಿಷೇಧಿತ ಸಂಘಟನೆ ಎಂದು ಘೋಷಿಸಿತ್ತು. ಆದರೆ ಬಳಿಕ ಸಂಘಟನೆ 2 ಬಾರಿ ಒಳಜಗಳದ ಕಾರಣ ವಿಭಜನೆ ಆಗಿತ್ತು.

ಈ ನಡುವೆ, 2011ರಲ್ಲಿ ಮಹತ್ವದ ತಿರುವು ಲಭಿಸಿತು. ಉಲ್ಫಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತು. ನಂತರ ರಾಜ್‌ಖೋವಾ ಬಣವು 2011ರ ಸೆ.3ರಿಂದ ಸರ್ಕಾರದೊಂದಿಗೆ ಶಾಂತಿ ಮಾತುಕತೆ ಆರಂಭಿಸಿತ್ತು. ಆದರೆ ಚೀನಾ-ಮ್ಯಾನ್ಮಾರ್ ಗಡಿಯಲ್ಲಿ ನೆಲೆಸಿರುವ ಪರೇಶ್ ಬರುವಾ ನೇತೃತ್ವದ ಬಣ ಈ ಮಾತುಕತೆಗೆ ಅಸಮ್ಮತಿ ಸೂಚಿಸಿತ್ತು.ಇತ್ತೀಚಿನ ಶಾಂತಿ ಒಪ್ಪಂದಗಳುಎನ್‌ಎಲ್‌ಎಫ್‌ಟಿ: ತ್ರಿಪುರಾದ ನ್ಯಾಷನಲ್‌ ಲಿಬರೇಶನ್ ಫ್ರಂಟ್‌ ಸಂಘಟನೆಯ ಜೊತೆ 2019ರ ಆ.8ರಂದು ಕೇಂದ್ರ ಸರ್ಕಾರದ ಶಾಂತಿ ಒಪ್ಪಂದ.ಬ್ರೂ ಒಪ್ಪಂದ: ತ್ರಿಪುರಾದಲ್ಲಿನ ಬ್ರೂ ವಲಸೆಗಾರರ ಜೊತೆ 2020ರ ಜ.16ರಂದು ಶಾಂತಿ ಒಪ್ಪಂದಕ್ಕೆ ಸಹಿ.ಬೋಡೋ ಒಪ್ಪಂದ: 2020ರ ಜ.27ರಂದು ಅಸ್ಸಾಂನ ಬೋಡೋ ಹೋರಾಟಗಾರರ ಜೊತೆ ಶಾಂತಿ ಒಪ್ಪಂದ.ಕರ್ಬಿ ಒಪ್ಪಂದ: ಅಸ್ಸಾಂನಲ್ಲಿ ಕರ್ಬಿ ಬಂಡುಕೋರರ ಜೊತೆಗೆ 2021ರ ಸೆ.4ರಂದು ಶಾಂತಿ ಒಪ್ಪಂದ. ಆದಿವಾಸಿ ಒಪ್ಪಂದ: ಅಸ್ಸಾಂನ ಟೀ ಎಸ್ಟೇಟ್‌ಗಳಲ್ಲಿನ 8 ಆದಿವಾಸಿ ಸಮುದಾಯಗಳ ಜೊತೆ 2022 ಸೆ.15ರಂದು ಶಾಂತಿ ಒಪ್ಪಂದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಛತ್ತೀಸ್‌ಗಢ ಮದ್ಯ ಹಗರಣ: ಮಾಜಿ ಸಿಎಂ ಪುತ್ರಗೆ ₹250 ಕೋಟಿ ಲಂಚ