ಹಾಲಿ ಕಾನೂನು ದ್ವೇಷ ಭಾಷಣ ತಡೆಗೆ ಸಕ್ಷಮವಾಗಿದೆ
ನವದೆಹಲಿ: ಹಾಲಿ ಇರುವ ಕ್ರಿಮಿನಲ್ ಕಾನೂನುಗಳು ದ್ವೇಷ ಭಾಷಣ ತಡೆಯಲು ಸಕ್ಷಮವಾಗಿವೆ. ಸಮಸ್ಯೆಯಿರುವುದು ಕಾನೂನಿನಲ್ಲಲ್ಲ, ಬದಲಾಗಿ ಅದರ ಸರಿಯಾದ ಅನುಷ್ಠಾನದಲ್ಲಿ. ಹೀಗಾಗಿ ಹಾಲಿ ಇರುವ ಕಾನೂನಿನ ವಿಚಾರದಲ್ಲಿ ಹಸ್ತಕ್ಷೇಪದ ಅಗತ್ಯವಿಲ್ಲ, ದ್ವೇಷ ಭಾಷಣ ತಡೆಗೆ ಹೊಸದಾಗಿ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದ್ವೇಷ ಭಾಷಣಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಬಳಿಕ ನ್ಯಾ.ವಿಕ್ರಂನಾಥ್ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ರೀತಿಯ ಅಪರಾಧಗಳನ್ನು ತಡೆಯಲು ಹೊಸದಾಗಿ ನಿರ್ದೇಶನ ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿತು.ಶಿಕ್ಷೆಯನ್ನು ನಿಗದಿಪಡಿಸುವ ಅಧಿಕಾರ ಪೂರ್ಣವಾಗಿ ಶಾಸಕಾಂಗದ ವ್ಯಾಪ್ತಿಯಲ್ಲಿದೆ. ಸಾಂವಿಧಾನಿಕ ವ್ಯವಸ್ಥೆಯಡಿ ಅಧಿಕಾರದ ಪ್ರತ್ಯೇಕೀಕರಣವು ನ್ಯಾಯಾಂಗಕ್ಕೆ ಹೊಸ ಕಾನೂನುಗಳನ್ನು ಸೃಷ್ಟಿಸಲು ಅನುಮತಿ ನೀಡುವುದಿಲ್ಲ. ಶಿಕ್ಷಿಸಬಹುದಾ ಅಪರಾಧ ಕೃತ್ಯಗಳಿಗೆ ಶಿಕ್ಷೆ ಮತ್ತು ಅದಕ್ಕೆ ಶಿಕ್ಷೆ ನಿಗದಿಪಡಿಸುವುದು ಶಾಸಕಾಂಗದ ಕೆಲಸ.
ಜತೆಗೆ, ದ್ವೇಷ ಭಾಷಣವನ್ನು ತಡೆಯುವ ಸಂಬಂಧ ಹಾಲಿ ಇರುವ ಕಾನೂನಿನಲ್ಲಿ ಯಾವುದೇ ನಿರ್ವಾತ ಇಲ್ಲ. ಹೀಗಾಗಿ ಈ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
ಒಂದು ವೇಳೆ ಪೊಲೀಸರು ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದರೆ ನಾಗರಿಕರ ಮುಂದೆ ಹಲವು ಆಯ್ಕೆಗಳಿವೆ. ಅವರು ಮೇಲಧಿಕಾರಿ ಅಂದರೆ ಎಸ್ಪಿ ಅವರ ಮುಂದೆ ಹೋಗಬಹುದು. ಮ್ಯಾಜಿಸ್ಟ್ರೇಟ್ರ ಮುಂದೆಯೂ ಹೋಗಬಹುದು ಅಥವಾ ಕೋರ್ಟ್ ಮುಂದೆ ಖಾಸಗಿ ದೂರು ಸಲ್ಲಿಸಬಹುದಾಗಿದೆ.