ರೈತರಿಗೆ 2000 ಕೋಟಿ ಬಿಡುಗಡೆ, ಬಡವರ 3 ಕೋಟಿ ಮನೆಗಳಿಗೆ ನೆರವು

KannadaprabhaNewsNetwork |  
Published : Jun 11, 2024, 01:33 AM ISTUpdated : Jun 11, 2024, 09:29 AM IST
ಮೊದಲ ಸಂಪುಟ ಸಭೆ | Kannada Prabha

ಸಾರಾಂಶ

ಮೂರನೇ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ನರೇಂದ್ರ ಮೋದಿ ಅವರು ದೇಶದ ರೈತಾಪಿ ವರ್ಗ, ಬಡವರು ಮತ್ತು ಮಧ್ಯಮ ವರ್ಗದ ಜನತೆಗೆ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

 ನವದೆಹಲಿ :   ಮೂರನೇ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ನರೇಂದ್ರ ಮೋದಿ ಅವರು ದೇಶದ ರೈತಾಪಿ ವರ್ಗ, ಬಡವರು ಮತ್ತು ಮಧ್ಯಮ ವರ್ಗದ ಜನತೆಗೆ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. 

ಪ್ರಧಾನಿ ಮೋದಿ ತಮ್ಮ ಮೊದಲ ಕೊಡುಗೆಯಾಗಿ 9 ಕೋಟಿ ರೈತರಿಗೆ 20000 ಕೋಟಿ ರು. ಮೊತ್ತದ ಪಿಎಂ ಕಿಸಾನ್ ನಿಧಿ ಬಿಡುಗಡೆಗೆ ಸೂಚಿಸಿದ್ದರೆ, ಮತ್ತೊಂದೆಡೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಯೋಜನೆಯಡಿ 3 ಕೋಟಿ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ಪ್ರಕಟಿಸಿದ್ದಾರೆ.

ಕಿಸಾನ್‌ ನಿಧಿ:

ಭಾನುವಾರವಷ್ಟೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಸೋಮವಾರ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದ್ದು, ಸುಮಾರು 9.3 ಕೋಟಿ ರೈತರಿಗೆ ಅನುಕೂಲವಾಗಲಿರುವ 20,000 ಕೋಟಿ ರು. ಮೊತ್ತದ ‘ಪಿಎಂ ಕಿಸಾನ್ ನಿಧಿ’ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ.

ಹಣ ಬಿಡುಗಡೆಗೆ ಸಹಿ ಹಾಕಿದ ನಂತರ ಹೇಳಿಕೆ ನೀಡಿರುವ ಮೋದಿ, ‘ನಮ್ಮದು ‘ಕಿಸಾನ್ ಕಲ್ಯಾಣ’ಕ್ಕೆ (ರೈತರ ಕಲ್ಯಾಣ) ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ಸಹಿ ಮಾಡಿದ ಮೊದಲ ಕಡತವು ಇದಕ್ಕೆ ಸಂಬಂಧಿಸಿದೆ ಎಂಬುದು ಸೂಕ್ತವಾಗಿದೆ’ ಎಂದು ಹರ್ಷಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ನಾವು ರೈತರು ಮತ್ತು ಕೃಷಿ ಕ್ಷೇತ್ರಕ್ಕಾಗಿ ಇನ್ನಷ್ಟು ಕೆಲಸ ಮಾಡಬೇಕೆಂದು ಬಯಸುತ್ತೇವೆ’ ಎಂದಿದ್ದಾರೆ.ಇದು ರೈತರಿಗೆ ವರ್ಷಕ್ಕೆ ತಲಾ 6 ಸಾವಿರ ರು. ನೀಡುವ (ಪ್ರತಿ 4 ತಿಂಗಳಿಗೆ 2 ಸಾವಿರ ರು.) ಯೋಜನೆ ಆಗಿದ್ದು, ಮೋದಿ-2 ಸರ್ಕಾರದಲ್ಲಿ ಜಾರಿಗೆ ಬಂದಿತ್ತು.

3 ಕೋಟಿ ಮನೆ: 

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಸರ್ಕಾರದ ಪಾಲಿನ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.‘ಇತ್ತೀಚಿನ ದಿನಗಳಲ್ಲಿ ಮನೆ ನಿರ್ಮಿಸುವ ಅರ್ಹ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕುಟುಂಬಗಳು ಮನೆ ನಿರ್ಮಾಣದ ಖರ್ಚು ವೆಚ್ಚವನ್ನು ಸರಿದೂಗಿಸಲು ಇನ್ನೂ ಹೆಚ್ಚುವರಿಯಾಗಿ 3 ಕೋಟಿ ಗ್ರಾಮೀಣ ಹಾಗೂ ನಗರ ಕುಟುಂಬಗಳ ಮನೆಗೆ ನೆರವು ನೀಡಲು ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.ಪಿಎಂಎವೈ ಅನ್ನು 2015-16ರಿಂದ ಜಾರಿಗೊಳಿಸಲಾಗಿದ್ದು, ಅರ್ಹ ಗ್ರಾಮೀಣ ಮತ್ತು ನಗರ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಗಳನ್ನು ನಿರ್ಮಿಸಲು ಸಹಾಯ ಮಾಡಲು ಸಹಾಯ ಮಾಡುತ್ತದೆ. ಪಿಎಂಎವೈ ಅಡಿಯಲ್ಲಿ, ಕಳೆದ 10 ವರ್ಷಗಳಲ್ಲಿ ವಸತಿ ಯೋಜನೆಗಳ ಅಡಿಯಲ್ಲಿ ಅರ್ಹ ಬಡ ಕುಟುಂಬಗಳಿಗೆ ಒಟ್ಟು 4.21 ಕೋಟಿ ಮನೆಗಳನ್ನು ಪೂರ್ಣಗೊಳಿಸಲಾಗಿದೆ.ಈ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಎಲ್ಲಾ ಮನೆಗಳಿಗೆ ಮೂಲಭೂತ ಅವಶ್ಯಕತೆಗಳಾದ ಶೌಚಾಲಯಗಳು, ಎಲ್‌ಪಿಜಿ ಸಂಪರ್ಕ, ವಿದ್ಯುತ್ ಸಂಪರ್ಕ, ನಲ್ಲಿ ಸಂಪರ್ಕವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಕ ಒದಗಿಸಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎಐ ದುರ್ಬಳಕೆ ತಡೆಗೆ ಕಠಿಣ ನಿಯಮ ಜಾರಿ :ಹೊಸ ನಿಯಮದಲ್ಲೇನಿದೆ?
ಅಂತರಾಷ್ಟ್ರೀಯ ತೈಲ ಸ್ಮಗ್ಲಿಂಗ್‌ ಜಾಲ ಭೇದಿಸಿದ ಕರಾವಳಿ ಪಡೆ