ಉಚ್ಚಾಟಿತ ಟಿಎಂಸಿ ನಾಯಕ ಶೇಖ್ ಶಾಜಹಾನ್ ಬೆಂಬಲಿಗರರಿಂದ ಅತ್ಯಾಚಾರಕ್ಕೆ ಒಳಗಾದ ಪ.ಬಂಗಾಳದ ಸಂದೇಶ್ಖಾಲಿ ಗ್ರಾಮದ ಮಹಿಳೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿ ಮಾಡಿ, ಅವರನ್ನು ಸಂತೈಸಿದರು. ದೇಶವನ್ನೇ ಬೆಚ್ಚಿ ಬೀಳಿಸಿದ ಸಂದೇಶ್ಖಾಲಿ ಸಂತ್ರಸ್ತೆಯರನ್ನು ಪ್ರಧಾನಿ ಭೇಟಿ ಮಾಡಿದ್ದು ಇದೇ ಮೊದಲು.
ಪಿಟಿಐ ಬರಾಸತ್ (ಪ,ಬಂಗಾಳ)
ಉಚ್ಚಾಟಿತ ಟಿಎಂಸಿ ನಾಯಕ ಶೇಖ್ ಶಾಜಹಾನ್ ಬೆಂಬಲಿಗರರಿಂದ ಅತ್ಯಾಚಾರಕ್ಕೆ ಒಳಗಾದ ಪ.ಬಂಗಾಳದ ಸಂದೇಶ್ಖಾಲಿ ಗ್ರಾಮದ ಮಹಿಳೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿ ಮಾಡಿ, ಅವರನ್ನು ಸಂತೈಸಿದರು. ದೇಶವನ್ನೇ ಬೆಚ್ಚಿ ಬೀಳಿಸಿದ ಸಂದೇಶ್ಖಾಲಿ ಸಂತ್ರಸ್ತೆಯರನ್ನು ಪ್ರಧಾನಿ ಭೇಟಿ ಮಾಡಿದ್ದು ಇದೇ ಮೊದಲು.
ಈ ವೇಳೆ ಮೋದಿ ಅವರು ನೋವು ಆಲಿಸಿ ‘ಪಿತೃಸ್ವರೂಪ’ರಾಗಿ ಸಂತ್ರಸ್ತೆಯರನ್ನು ಸಮಾಧಾನಪಡಿಸಿದರು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಈ ನಡುವೆ, ತಮ್ಮ ಬಂಗಾಳ ಪ್ರವಾಸದ ವೇಳೆ ಉತ್ತರ 24-ಪರಗಣ ಜಿಲ್ಲೆಯ ಬರಸಾತ್ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಟಿಎಂಸಿ ನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ‘ಸಂದೇಶ್ಖಾಲಿ ಘಟನೆ ನಾಚಿಕೆಗೇಡಿನ ವಿಷಯ. ಬಂಗಾಳ ಸರ್ಕಾರವು ‘ಅಪರಾಧಿ’ಯನ್ನು ರಕ್ಷಿಸಲು ತನ್ನ ಎಲ್ಲಾ ಶಕ್ತಿಯನ್ನು ಬಳಸುತ್ತಿದೆ.
ಸಂದೇಶ್ಖಾಲಿಯ ಮಹಿಳೆಯರು ದುರ್ಗಾಮಾತಾ ಸ್ವರೂಪಿ ಆಗಿದ್ದಾರೆ. ಸಂದೇಶ್ಖಾಲಿ ಬಿರುಗಾಳಿಯಲ್ಲಿ ತೃಣಮೂಲ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಧೂಳೀಪಟವಾಗಲಿದೆ’ ಎಂದು ಶಾಜಹಾನ್ ಹೆಸರೆತ್ತದೇ ವಾಗ್ದಾಳಿ ನಡೆಸಿದರು.
‘ಸಾರ್ವಜನಿಕ ಸಭೆಯ ನಂತರ, ಮೋದಿ ಅವರು ಸಂದೇಶಖಾಲಿಯ ಕೆಲವು ಮಹಿಳೆಯರನ್ನು ಭೇಟಿಯಾದರು. ಈ ವೇಳೆಮಹಿಳೆಯರು ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮಾತನಾಡಿ ಭಾವುಕರಾದರು.
‘ತಂದೆಯಂತೆ’ ತಾಳ್ಮೆಯಿಂದ ಅವರ ನೋವು ಕೇಳಿದ ಮೋದಿ, ಮಹಿಳೆಯರ ನೋವನ್ನು ಅರ್ಥಮಾಡಿಕೊಂಡರು ಹಾಗೂ ಸಂತೈಸಿದರು. ನ್ಯಾಯ ಒದಗಿಸುವ ಭರವಸೆ ನೀಡಿದರು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಗ್ನಿಮಿತ್ರ ಪೌಲ್ ಹಾಗೂ ಪಕ್ಷದ ಕೆಲವು ನಾಯಕರು ತಿಳಿಸಿದ್ದಾರೆ.
ಕೆಲ ಸಂತ್ರಸ್ತೆಯರಿಗೆ ತಡೆ:ಬರಸಾತ್ನಲ್ಲಿ ನಡೆದ ಮೋದಿಯವರ ಸಭೆಗೆ ಪ್ರಯಾಣಿಸುತ್ತಿದ್ದ ಸಂದೇಶಖಾಲಿ ಮಹಿಳೆಯರ ಕೆಲವು ಬಸ್ಗಳನ್ನು ಪೊಲೀಸರು ‘ಭದ್ರತಾ ಪ್ರೋಟೋಕಾಲ್’ ನೆಪದಲ್ಲಿ ಪೊಲೀಸರು ತಡೆದಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ಖಾಲಿ ಎಂಬ ನದಿತೀರದ ದ್ವೀಪದಲ್ಲಿ ಇಎಂಸಿ ನಾಯಕ ಶೇಖ್ ಶಾಜಹಾನ್ ಹಾಗೂ ಆತನ ಸಹಚರರು ಹಿಂದೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅವರ ಭೂಕಬಳಿಕೆ ಮಾಡಿದ ಆರೋಪ ಹೊತ್ತಿದ್ದಾರೆ. ಇತ್ತೀಚೆಗೆ ಶೇಖ್ ಹಾಗೂ ಆತನ 17 ಬಂಟರ ಬಂಧನವಾಗಿದೆ.