ಒಂದು ಕುಟುಂಬದ ಉದ್ಧಾರಕ್ಕೆ ಕಾಂಗ್ರೆಸ್‌ನ ಎಲ್ಲ ಶಕ್ತಿ ಬಳಕೆ: ಮೋದಿ

KannadaprabhaNewsNetwork |  
Published : Feb 26, 2024, 01:37 AM ISTUpdated : Feb 26, 2024, 01:08 PM IST
ಮೋದಿ | Kannada Prabha

ಸಾರಾಂಶ

ದಶಕಗಳ ಕಾಲ ದೇಶ ಆಳಿದವರು ಜನರ ಅಗತ್ಯ ಮನಗಾಣಲೇ ಇಲ್ಲ ಎಂದು ವಿಪಕ್ಷ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಿಟಿಐ ದೇವಭೂಮಿ ದ್ವಾರಕಾ

ಕೇವಲ ಒಂದು ಕುಟುಂಬದ ಅಭ್ಯುದಯಕ್ಕಾಗಿಯೇ ಕಾಂಗ್ರೆಸ್‌ ತನ್ನೆಲ್ಲಾ ಶಕ್ತಿ ಬಳಸಿತು. ದಶಕಗಳ ಕಾಲ ದೇಶವನ್ನು ಆಳಿದ ಪಕ್ಷಕ್ಕೆ ಜನ ಸಾಮಾನ್ಯರ ಅಗತ್ಯಗಳೇನು ಎಂದು ಮನವರಿಕೆಯಾಗಲೇ ಇಲ್ಲ. 

ಜನಸಾಮಾನ್ಯರಿಗೆ ಬೇಕಾದ ಸೌಲಭ್ಯ ಕಲ್ಪಿಸುವ ಇಚ್ಛಾಶಕ್ತಿ, ಉದ್ದೇಶ ಮತ್ತು ಛಲವೂ ಪಕ್ಷಕ್ಕೆ ಇರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಭಾನುವಾರ ಇಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಿ ಮತ್ತು ಹಲವು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ‘ಕಾಂಗ್ರೆಸ್‌ ತನ್ನೆಲ್ಲಾ ಶಕ್ತಿಯನ್ನು ಕೇವಲ ಒಂದು ಕುಟುಂಬದ ಅಭ್ಯದಯಕ್ಕೆ ಬಳಸಿತು. 

ಹೀಗಾದಾಗ ಅವರಿಗೆ ದೇಶಕಟ್ಟ ಬೇಕು ಎಂಬ ನೆನಪಾದರೂ ಹೇಗೆ ಬಂದೀತು? ಅವರ (ಕಾಂಗ್ರೆಸ್‌) ತಮ್ಮ ಇಡೀ ಗಮನವನ್ನು 5 ವರ್ಷ ಹೇಗೆ ಸರ್ಕಾರ ನಡೆಸಬೇಕು ಎಂಬುದರ ಬಗ್ಗೆ ಮತ್ತು ಹಗರಣಗಳನ್ನು ಹೇಗೆ ಮುಚ್ಚಬೇಕು ಎಂಬುದರ ಬಗ್ಗೆಯಷ್ಟೇ ಕೇಂದ್ರೀಕರಿಸಿದ್ದರು’ ಎಂದು ಟೀಕಿಸಿದರು.

‘ಕಾಂಗ್ರೆಸ್‌ ದೇಶವನ್ನು ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಲಷ್ಟೇ ಸಮರ್ಥವಾಯಿತು. ಏಕೆಂದರೆ ಭಾರತದಷ್ಟು ವಿಶಾಲ ದೇಶದ ಜನರ ದೊಡ್ಡ ಕನಸುಗಳನ್ನು ಈಡೇರಿಸುವಷ್ಟು ಸಾಮರ್ಥ್ಯ ಅವರಿಗಿರಲಿಲ್ಲ’ ಎಂದು ಮೋದಿ ಹೇಳಿದರು.

‘ಎಲ್ಲಾ ರೀತಿ ಹಗರಣಗಳಿಗೆ ಕಡಿವಾಣ ಹಾಕುವ ನಮ್ಮ ಸರ್ಕಾರದ ಬದ್ಧತೆಯೇ ದೇಶದ ಅಭಿವೃದ್ಧಿಗೆ ಮತ್ತು ಮುಖ್ಯಭೂಮಿ ಓಕ್ಲಾ ಹಾಗೂ ಬೇಟ್‌ ಓಕ್ಲಾ ನಡುವೆ ಅತಿ ಉದ್ದದ ಕೇಬಲ್‌ ಸೇತುವೆಯಂಥ ಸುಂದರವಾದ ಮೂಲಸೌಕರ್ಯ ನಿರ್ಮಿಸಲು ಸಾಧ್ಯವಾಯಿತು. 

6 ವರ್ಷಗಳ ಹಿಂದೆ ಈ ಯೋಜನೆಗೆ ನಾನೇ ಶಂಕುಸ್ಥಾಪನೆ ಮಾಡಿದ್ದೆ. ಇಂದು ಅದಕ್ಕೆ ನಾನೇ ಚಾಲನೆ ನೀಡುತ್ತಿದ್ದೇನೆ. ಇದುವೇ ಮೋದಿ ಗ್ಯಾರಂಟಿ’ ಎಂದು ಪ್ರಧಾನಿ ಮೋದಿ ಹೇಳಿದರು.

ಕಳೆದ 10 ವರ್ಷಗಳಲ್ಲಿ ನಾವು ದೇಶದ ಆರ್ಥಿಕತೆಯನ್ನು ವಿಶ್ವದಲ್ಲೇ 5ನೇ ಸ್ಥಾನಕ್ಕೆ ತಂದಿದ್ದೇವೆ. ಇದರ ಪರಿಣಾಮವೇ ಭವ್ಯ ಮತ್ತು ದೈವಿಕವಾದ ನಿರ್ಮಾಣಗಳು ಎಲ್ಲೆಡೆ ಸಾಧ್ಯವಾಗಿದೆ. ಇದು ಹೊಸ ಭಾರತದ ಹೊಸ ಚಿತ್ರಣವನ್ನು ಎಲ್ಲರ ಮುಂದಿಟ್ಟಿದೆ ಎಂದು ಮೋದಿ ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಶ್ಮಿಕಾ-ವಿಜಯ್‌ ಮದುವೆ ಪ್ರಸಾರಕ್ಕೆ ₹60 ಕೋಟಿ ಆಫರ್‌!
ಬ್ರಹ್ಮಪುತ್ರಾ ನದಿ ಮೇಲೆ ಅತ್ಯಾಧುನಿಕ 6 ಪಥದ ಸೇತುವೆ