ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಟ್ಯಂತರ ಭಕ್ತರು ಮನೆಮನೆಗಳಲ್ಲೂ ದೀಪಾವಳಿ ರೀತಿಯ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ.
ಇತ್ತೀಚೆಗೆ ಈ ಕುರಿತು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಜ.22 ಅವಿಸ್ಮರಣೀಯ ದಿನ. ಅಂದು ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ನೆರವೇರಲಿದೆ.
ಆದರೆ ಅಂದು ಎಲ್ಲಾ ಭಕ್ತರಿಗೂ ಅಯೋಧ್ಯೆಗೆ ಬರಲು ಸಾಧ್ಯವಾಗದು. ಹೀಗಾಗಿ ದೇಶದ ಎಲ್ಲಾ 140 ಕೋಟಿ ನಾಗರಿಕರು ತಮ್ಮ ಮನೆಗಳಲ್ಲಿ ದೀಪಾವಳಿ ಆಚರಿಸಬೇಕು.
ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ‘ಶ್ರೀ ರಾಮ ಜ್ಯೋತಿ’ ಬೆಳಗಿಸಬೇಕು. ಮನೆಗಳಲ್ಲಿ ಸಿಹಿ ಮಾಡಿ ಸಂಭ್ರಮಿಸಬೇಕು’ ಎಂದು ಕರೆ ಕೊಟ್ಟಿದ್ದರು.
ಅಲ್ಲದೆ, ಬಡವರಿಗೆ ದಾನಧರ್ಮ ಮಾಡಿ ಎಂದೂ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದರು.
ತ್ರೇತಾಯುಗದಲ್ಲಿ ಶ್ರೀರಾಮ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ದಿನ ಪ್ರಜೆಗಳೆಲ್ಲ ದೀಪಾವಳಿ ಆಚರಿಸಿದ್ದರು.
ಅದರಂತೆ ಈಗ ಕಲಿಯುಗದಲ್ಲಿ ಅಯೋಧ್ಯೆಯ ಟೆಂಟ್ವಾಸ ಮುಗಿಸಿ ಭವ್ಯ ದೇಗುಲಕ್ಕೆ ರಾಮ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಾಂಕೇತಿಕವಾಗಿ ದೀಪಾವಳಿ ಆಚರಿಸಲು ದೇಶವಾಸಿಗಳು ಸಿದ್ಧರಾಗಿದ್ದಾರೆ.