ರಾಹುಲ್‌ ಮತ ಅಧಿಕಾರ ಯಾತ್ರೆಗಿಂದು ತೆರೆ

KannadaprabhaNewsNetwork |  
Published : Sep 01, 2025, 01:03 AM IST
ಯಾತ್ರೆ | Kannada Prabha

ಸಾರಾಂಶ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ 16 ದಿನಗಳ 1,300 ಕಿ.ಮೀ.ವೋಟ್‌ ಅಧಿಕಾರ ಯಾತ್ರೆ ಸೋಮವಾರ ಪಟನಾದಲ್ಲಿ ನಡೆಯಲಿರುವ ಬೃಹತ್‌ ಸಮಾವೇಶದ ಮೂಲಕ ಸಮಾರೋಪಗೊಳ್ಳಲಿದೆ.

 ಪಟನಾ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ 16 ದಿನಗಳ 1,300 ಕಿ.ಮೀ.ವೋಟ್‌ ಅಧಿಕಾರ ಯಾತ್ರೆ ಸೋಮವಾರ ಪಟನಾದಲ್ಲಿ ನಡೆಯಲಿರುವ ಬೃಹತ್‌ ಸಮಾವೇಶದ ಮೂಲಕ ಸಮಾರೋಪಗೊಳ್ಳಲಿದೆ. 

ಇದಕ್ಕೂ ಮುನ್ನ ನಗರದಲ್ಲಿ ರಾಹುಲ್‌ ಗಾಂಧಿ, ಆರ್‌ಜೆಡಿ ಮುಖಂಡ ತೇಜಸ್ವಿಯಾದವ್‌ ಸೇರಿ ಮಹಾಘಠಬಂಧನ್‌ನ ನಾಯಕರು ಪಟನಾದಲ್ಲಿ ಪಾದಯಾತ್ರೆ ಮೂಲಕ ಶಕ್ತಿಪ್ರದರ್ಶನ ನಡೆಸಲಿದ್ದಾರೆ.

ಆ.17ರಂದು ಸಸಾರಾಂನಲ್ಲಿ ಆರಂಭವಾದ ಈ ವೋಟ್‌ ಅಧಿಕಾರ ಯಾತ್ರೆ ಬಿಹಾರದ 110 ಕ್ಷೇತ್ರಗಳಲ್ಲಿ ಸಂಚರಿಸಿದೆ. ತೇಜಸ್ವಿಯಾದವ್‌, ಸಿಪಿಐ ಮುಖಂಡ ದಿಪಾಂಕರ್ ಭಟ್ಟಾಚಾರ್ಯ ಮತ್ತು ವೀಕಾಶೀಲ್‌ ಇನ್ಸಾನ್‌ ಪಾರ್ಟಿಯ ಮುಖೇಶ್‌ ಸಹಾನಿ ಅವರು ಯಾತ್ರೆಯುದ್ದಕ್ಕೂ ತೆರೆದ ಜೀಪಿನಲ್ಲಿ ರಾಹುಲ್‌ ಗಾಂಧಿ ಅವರ ಜತೆಗಿದ್ದು, ಈ ಮೂಲಕ ಎನ್‌ಡಿಎ ಒಕ್ಕೂಟ ವಿರುದ್ಧ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತಗಳ್ಳತನ ಆರೋಪವನ್ನು ಬಿಹಾರದ ಎಲ್ಲಾ ಅಸೆಂಬ್ಲಿ ಕ್ಷೇತ್ರಗಳಿಗೂ ತಲುಪುವಂತೆ ನೋಡಿಕೊಂಡಿದ್ದಾರೆ.

ಯಾತ್ರೆಯುದ್ದಕ್ಕೂ ‘ಮತಗಳ್ಳರು, ಅಧಿಕಾರ ಕಳ್ಳರು’ ಎಂಬ ಘೋಷಣೆಗಳನ್ನು ಕೂಗುತ್ತಾ 25 ಜಿಲ್ಲೆಗಳಲ್ಲಿ ಸಂಚರಿಸಿದ ನಾಯಕರು, ಪ್ರಮುಖ ಸ್ಥಳಗಳಲ್ಲಿ ಸಣ್ಣ ಸಣ್ಣ ಸಮಾವೇಶದ ಮೂಲಕ ಬಿಜೆಪಿ ಹಾಗೂ ಚುನಾವಣಾ ಆಯೋಗ ವಿರುದ್ಧ ಕಿಡಿಕಾರಿದ್ದಾರೆ. ಬಿಹಾರದಲ್ಲಿ ವಿಶೇಷ ಮತ ಪರಿಷ್ಕರಣೆ ಮೂಲಕ ಮತಗಳ್ಳತನಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಗಾಂಧಿ ಮೈದಾನದಲ್ಲಿ ಶಕ್ತಿ ಪ್ರದರ್ಶನ:

ಇನ್ನು ವೋಟ್‌ ಅಧಿಕಾರ ಯಾತ್ರೆ ಭಾಗವಾಗಿ ಪಟ್ನಾದ ಗಾಂಧಿ ಮೈದಾನದಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿದ್ದು, ಇದಕ್ಕೂ ಮುನ್ನ ಡಾ. ಅಂಬೇಡ್ಕರ್‌ ಪ್ರತಿಮೆ ಇರುವ ಅಂಬೇಡ್ಕರ್‌ ಪಾರ್ಕ್‌ನಿಂದ ಗಾಂಧಿ ಮೈದಾನ ವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಲವು ಮುಖಂಡರೂ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬಿಹಾರ ಮತಪಟ್ಟಿ ಪರಿಷ್ಕರಣೆ ಬಳಿಕ ಎಲ್ಲರಿಗೂ ಹೊಸ ಗುರುತಿನ ಚೀಟಿ

ನವದೆಹಲಿ: ಸದ್ಯ ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ಪೂರ್ಣಗೊಂಡ ಬಳಿಕ ರಾಜ್ಯದ ಎಲ್ಲಾ ಮತದಾರರಿಗೂ ಹೊಸದಾಗಿ ಗುರುತಿನ ಚೀಟಿ ನೀಡಲು ಚುನಾವಣಾ ಆಯೋಗ ನಿರ್ಧರಿಸಿದೆ. ಹೊಸ ಕಾರ್ಡ್‌ ಯಾವಾಗ ನೀಡಬೇಕು ಎನ್ನುವ ಕುರಿತು ಆಯೋಗ ಇನ್ನಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಯ ಭಾಗವಾಗಿ ಆ.1ರಂದು ಕರಡುಪಟ್ಟಿ ಪ್ರಕಟಿಸಿತ್ತು. ಸೆ.30ರಂದು ಅಂತಿಮ ಪಟ್ಟಿ ಪ್ರಕಟಿಸಲಿದೆ. ಪರಿಷ್ಕರಣೆ ಸಂದರ್ಭದಲ್ಲಿ ಮತದಾರರಿಂದ ಪಡೆದ ದಾಖಲೆ ಮತ್ತು ಛಾಯಾಚಿತ್ರವನ್ನು ಬಳಸಿಕೊಂಡು ನವೀಕರಿಸಿದ ಗುರುತಿನ ಚೀಟಿಯನ್ನು ನೀಡಲಿದೆ.

ನ.22ಕ್ಕೆ ಹಾಲಿ ಸರ್ಕಾರದ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಾಗಿ ಅದಕ್ಕೂ ಮುನ್ನ ಹೊಸ ಗುರುತಿನ ಚೀಟಿ ನೀಡುವ ಸಾಧ್ಯತೆಯಿದೆ.

PREV
Read more Articles on

Recommended Stories

ಮೋದಿ-ಪುಟಿನ್‌ ಎದುರು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಮೂಕ ಪ್ರೇಕ್ಷಕ
ಅಮೆರಿಕ ಬೆದರಿಕೆ ವರ್ತನೆಗೆ ಚೀನಾ ಖಂಡನೆ