ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ಸಚಿವ ಸಂಪುಟದಲ್ಲಿದ್ದ ಸುಮಾರು 20 ಸಚಿವರು ಸೋಲನ್ನಪ್ಪಿದ್ದರು. ಈ ಪೈಕಿ ಕೆಲವರು ಭಾರೀ ಮತಗಳ ಅಂತರದಿಂದ ಸೋತಿದ್ದರೆ, ಇನ್ನು ಕೆಲವರು ಅತ್ಯಂತ ತೀವ್ರ ಸ್ಪರ್ಧೆ ನೀಡಿ ವಿರೋಚಿತ ಸೋಲು ಕಂಡಿದ್ದಾರೆ. ಹೀಗೆ ಸೋತ ಸಚಿವರ ಮತಗಳ ಅಂತರವನ್ನು ನೋಡಿದರೆ, ಕೇರಳದ ತಿರುವನಂತಪುರ ಕ್ಷೇತ್ರದಲ್ಲಿ ಸೋತ ಬಿಜೆಪಿ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರ ಸೋಲಿನ ಅಂತರ ಅತ್ಯಂತ ಕಡಿಮೆ.
ತಿರುವನಂತಪುರದಲ್ಲಿ ರಾಜೀವ್ ಅವರು, ಕಾಂಗ್ರೆಸ್ನ ಪ್ರತಿಸ್ಪರ್ಧಿ, ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್ಗೆ ಭಾರೀ ಪೈಪೋಟಿ ನೀಡಿ ಕೇವಲ 16077 ಮತಗಳ ಅಂತರದಿಂದ ಸೋತಿದ್ದಾರೆ.
ಕಳೆದ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜೀವ್ ಅವರಿಗೆ ಈ ಬಾರಿ ಕಡೆಯ ಹಂತದಲ್ಲಿ ಕೇರಳದ ತಿರುವನಂತಪುರದ ಟಿಕೆಟ್ ನೀಡಲಾಗಿತ್ತು. ಪ್ರಚಾರಕ್ಕೆ ಸಿಕ್ಕಿದ್ದು ಕೇವಲ 35 ದಿನ. ಮತ್ತೊಂದೆಡೆ ಎದುರಾಳಿಯಾಗಿದ್ದು, ಇಂಡಿ ಕೂಟದ ಅಭ್ಯರ್ಥಿ, 3ನೇ ಸಲ ಲೋಕಸಭೆ ಪ್ರವೇಶಕ್ಕಾಗಿ ಕಣಕ್ಕೆ ಇಳಿದಿದ್ದ ತರೂರ್. ಈ ಎಲ್ಲಾ ಸವಾಲುಗಳ ಹೊರತಾಗಿಯೂ ಸಿಕ್ಕ ಅವಧಿಯಲ್ಲೇ ಇಡೀ ಕ್ಷೇತ್ರ ಸುತ್ತಾಡಿದ ರಾಜೀವ್ ಬಿಜೆಪಿ, ಮೋದಿ ಸರ್ಕಾರದ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಕ್ಷೇತ್ರದಲ್ಲಿ ಬಿಜೆಪಿ ಹೊಸ ಅಲೆ ಕಾಣಿಸಿಕೊಂಡಿತ್ತು. ಅದರೆ ಅಂತಿಮವಾಗಿ ರಾಜೀವ್ ಕೇವಲ 16000 ಮತಗಳ ಅಂತರದಿಂದ ಸೋತರು. ಚುನಾವಣೆಯಲ್ಲಿ ರಾಜೀವ್ ನೀಡಿದ ಸ್ಪರ್ಧೆ ಎದುರಾಳಿಗಳಲ್ಲೂ ಅಚ್ಚರಿ ಹುಟ್ಟಿಸಿತ್ತು.
ಉಳಿದಂತೆ ಕೈಲಾಶ್ ಚೌಧರಿ 4.17 ಲಕ್ಷ, ಮುರುಗನ್ 2.4 ಲಕ್ಷ, ಸಚಿವೆ ಸ್ಮೃತಿ ಇರಾನಿ 1.67 ಲಕ್ಷ, ಅರ್ಜುನ್ ಮುಂಡಾ 1.49 ಲಕ್ಷ, ರಾವ್ ಸಾಹೇಬ್ ಧನ್ವೆ 1.09 ಲಕ್ಷ, ಭಗವಂತ್ ಖೂಬಾ 1.28 ಲಕ್ಷ, ಭಾರತೀ ಪವಾರ್ 1.13 ಲಕ್ಷ, ಅಜಯ್ ಕುಮಾರ್ ಮಿಶ್ರಾ 34329 ಅಂತರದಲ್ಲಿ ಸೋತ ಪ್ರಮುಖ ಸಚಿವರಾಗಿದ್ದಾರೆ.