ದೇಶದ ಕೆಲವಡೆ ಮುಸ್ಲಿಂ ಜನಸಂಖ್ಯೆ ಹೆಚ್ಚಳ: ಆರೆಸ್ಸೆಸ್‌ ಪತ್ರಿಕೆ ಕಳವಳ

KannadaprabhaNewsNetwork | Published : Jul 10, 2024 12:36 AM

ಸಾರಾಂಶ

‘ದೇಶದ ಕೆಲವು ಭಾಗಗಳಲ್ಲಿ ಮುಸ್ಲಿಮರ ಜನಸಂಖ್ಯೆ ಗಮನಾರ್ಹವಾಗಿ ಬೆಳವಣಿಗೆ ಕಾಣುತ್ತಿದೆ. ಇದು ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್-ಸಂಬಂಧಿತ ನಿಯತಕಾಲಿಕ ‘ಆರ್ಗನೈಸರ್’, ‘ಸಮಗ್ರ ರಾಷ್ಟ್ರೀಯ ಜನಸಂಖ್ಯಾ ನಿಯಂತ್ರಣ ನೀತಿ’ಯನ್ನು ಪರಿಚಯಿಸುವ ಅಗತ್ಯ ಇದೆ ಎಂದು ಒತ್ತಿಹೇಳಿದೆ.

ಪಿಟಿಐ ನವದೆಹಲಿ

‘ದೇಶದ ಕೆಲವು ಭಾಗಗಳಲ್ಲಿ ಮುಸ್ಲಿಮರ ಜನಸಂಖ್ಯೆ ಗಮನಾರ್ಹವಾಗಿ ಬೆಳವಣಿಗೆ ಕಾಣುತ್ತಿದೆ. ಇದು ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್-ಸಂಬಂಧಿತ ನಿಯತಕಾಲಿಕ ‘ಆರ್ಗನೈಸರ್’, ‘ಸಮಗ್ರ ರಾಷ್ಟ್ರೀಯ ಜನಸಂಖ್ಯಾ ನಿಯಂತ್ರಣ ನೀತಿ’ಯನ್ನು ಪರಿಚಯಿಸುವ ಅಗತ್ಯ ಇದೆ ಎಂದು ಒತ್ತಿಹೇಳಿದೆ.ತನ್ನ ಇತ್ತೀಚಿನ ಆವೃತ್ತಿಯಲ್ಲಿ ಸಂಪಾದಕೀಯ ಪ್ರಕಟಿಸಿರುವ ‘ಆರ್ಗನೈಸರ್‌’, ‘ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವಲ್ಲಿ ತಕ್ಕಮಟ್ಟಿಗೆ ಉತ್ತಮ ಸಾಧನೆ ಮಾಡಿವೆ. ಆದರೆ ಜನಸಂಖ್ಯೆ ನಿಯಂತ್ರಿಸಿದರೆ, ಮುಂಬರುವ ಕ್ಷೇತ್ರ ಮರುವಿಂಗಡಣೆಯಲ್ಲಿ ತಮ್ಮ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಕಡಿಮೆ ಆಗಬಹುದು ಎಂಬ ಆತಂಕ ಅವುಗಳಿಗಿದೆ’ ಎಂದಿದೆ.

‘ರಾಷ್ಟ್ರೀಯ ಮಟ್ಟದಲ್ಲಿ ಜನಸಂಖ್ಯೆಯನ್ನು ಸ್ಥಿರಗೊಳಿಸಿದ್ದರೂ, ಎಲ್ಲಾ ಧರ್ಮಗಳು ಮತ್ತು ಪ್ರದೇಶಗಳಲ್ಲಿ ಇದು ಒಂದೇ ರೀತಿ ಸ್ಥಿರ ಆಗುತ್ತಿಲ್ಲ. ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ಗಮನಾರ್ಹ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ಆಗುತ್ತಿದೆ. ಅಂದರೆ ದೇಶದ ಗಡಿಗೆ ಹೊಂದಿಕೊಂಡಿರುವ ಪ. ಬಂಗಾಳ, ಬಿಹಾರ, ಅಸ್ಸಾಂ ಮತ್ತು ಉತ್ತರಾಖಂಡದಂಥ ರಾಜ್ಯಗಳಲ್ಲಿ ಅಕ್ರಮ ವಲಸೆಯಿಂದ ಅಸ್ವಾಭಾವಿಕ ಜನಸಂಖ್ಯಾ ಬೆಳವಣಿಗೆ ಆಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.

‘ಪ್ರಜಾಪ್ರಭುತ್ವದಲ್ಲಿ ಶಾಸನಸಭಾ ಸಂಖ್ಯೆಗಳು ನಿರ್ಣಾಯಕವಾಗುತ್ತವೆ. ಇಂಥ ಶಾಸನಸಭಾ ಸಂಖ್ಯೆಗಳು ನಿರ್ಣಯ ಆಗುವುದು ಜನಸಂಖ್ಯೆ ಆಧರಿಸಿ. ಹೀಗಾಗಿ ಜನಸಂಖ್ಯಾ ಅಸಮತೋಲನದ ಪ್ರವೃತ್ತಿಯು ಸಂಸತ್ತಿನ ಸ್ಥಾನಗಳ ಮೇಲೆ ಪರಿಣಾಮ ಬೀರಬಹುದು. ಈ ಬಗ್ಗೆ ಇನ್ನಷ್ಟು ಜಾಗರೂಕರಾಗಿರಬೇಕು’ ಎಂದು ಅದು ಕರೆ ಕೊಟ್ಟಿದೆ.

‘ಆದರೆ ಇಂದು ರಾಹುಲ್‌ ಗಾಂಧಿ ಹಿಂದೂಗಳಿಗೆ ಬೈಯುತ್ತಾರೆ. ಮಮತಾ ಬ್ಯಾನರ್ಜಿ ಮುಸ್ಲಿಂ ಮಂತ್ರ ಜಪಿಸುತ್ತಾರೆ. ಡಿಎಂಕೆ ನಾಯಕರು ಸನಾತನ ಧರ್ಮವನ್ನು ಬೈಯುತ್ತಾರೆ. ಇದಕ್ಕೆ ಮುಸ್ಲಿಂ ಮತ ಬ್ಯಾಂಕ್‌ ಹೆಚ್ಚಳದ ಕಾರಣ ಆ ಪಕ್ಷಗಳಲ್ಲಿ ಮೂಡಿರುವ ವಿಶ್ವಾಸವೇ ಕಾರಣ. ಇಂಥ ಪ್ರವೃತ್ತಿ ನಿಲ್ಲಬೇಕು ಎಂದರೆ ಸಮಗ್ರ ರಾಷ್ಟ್ರೀಯ ಜನಸಂಖ್ಯಾ ನೀತಿ ಜಾರಿಗೊಳಿಸಬೇಕು’ ಎಂದು ಆರ್ಗನೈಸ್‌ ಕರೆ ನೀಡಿದೆ.

Share this article