‘ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್‌ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದ ಹೈದರಾಬಾದ್‌ನ ನಾಲ್ಸಾರ್ ಕಾನೂನು ವಿವಿಯ 2026ನೇ ಬ್ಯಾಚ್‌ನ ಯಾವುದೇ ವಿದ್ಯಾರ್ಥಿಗಳನ್ನು ವಕೀಲರಾಗಿ ನೋಂದಾಯಿಸಕೂಡದು’ ಎಂದು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಬಿಸಿಐ), ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

- ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ

- ವಿದ್ಯಾರ್ಥಿಗಳಿಗೆ ಪ್ರತಿಭಟನೆ ನಡೆಸುವ ಹಕ್ಕು ಇದೆ

- ಬಿಸಿಐ ಹಸ್ತಕ್ಷೇಪ ಸರಿಯಲ್ಲ: ಸಿಜೆ ಸೂರ್ಯಕಾಂತ್‌

- ಜಿರಳೆ ಪಾರ್ಟಿ ಬೆಂಬಲಿಸಿ ಸಿಜೆಐರನ್ನು ವಿರೋಧಿದ್ದ ವಿದ್ಯಾರ್ಥಿಗಳು

ಪಿಟಿಐ ನವದೆಹಲಿ

‘ಭಾರತದ ಮುಖ್ಯ ನ್ಯಾಯಾಧೀಶ ನ್ಯಾ। ಸೂರ್ಯಕಾಂತ್‌ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದ ಹೈದರಾಬಾದ್‌ನ ನಾಲ್ಸಾರ್ ಕಾನೂನು ವಿವಿಯ 2026ನೇ ಬ್ಯಾಚ್‌ನ ಯಾವುದೇ ವಿದ್ಯಾರ್ಥಿಗಳನ್ನು ವಕೀಲರಾಗಿ ನೋಂದಾಯಿಸಕೂಡದು’ ಎಂದು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಬಿಸಿಐ), ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಜಿರಳೆ ಪಕ್ಷದ ಹೋರಾಟದ ಬಗ್ಗೆ ನ್ಯಾ। ಸೂರ್ಯಕಾಂತ್‌ ಟೀಕೆ-ಟಿಪ್ಪಣಿ ಮಾಡಿದ್ದರು ಎಂದು ಆರೋಪಿಸಿದ್ದ ನಾಲ್ಸಾರ್ ಕಾನೂನು ವಿವಿಯ 400ಕ್ಕೂ ಹೆಚ್ಚಿ ವಿದ್ಯಾರ್ಥಿಗಳು, ತಮ್ಮ ವಿವಿ ಘಟಿಕೋತ್ಸವದಲ್ಲಿ ಸಿಜೆಐ ಅವರು ಭಾಗಿಯಾಗುವುದನ್ನು ವಿರೋಧಿಸಿದ್ದರು. ಇದು ಬಾರ್‌ ಕೌನ್ಸಿಲ್‌ನ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಾರ್‌ ಕೌನ್ಸಿಲ್‌, ಅವರ ವಕೀಲಿಕೆ ನೊಂದಣಿ ನಿರ್ಬಂಧಿಸಿ ಸುತ್ತೋಲೆ ಹೊರಡಿಸಿತ್ತು. ಬಿಸಿಐ ಈ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಆಗಿತ್ತು.

ಶುಕ್ರವಾರ ಇದರ ವಿಚಾರಣೆ ವೇಳೆ, ಬಿಸಿಐ ಪರ ವಕೀಲರು ಸುತ್ತೋಲೆಯನ್ನು ಹಿಂಪಡೆದಿರುವುದಾಗಿ ಕೋರ್ಟ್‌ ಗಮನಕ್ಕೆ ತಂದರು. ಆದರೂ ಕಟು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ। ಸೂರ್ಯಕಾಂತ್‌. ‘ವಿದ್ಯಾರ್ಥಿಗಳ ವಿರೋಧದ ವಿಚಾರದಲ್ಲಿ ಬಾರ್‌ ಕೌನ್ಸಿಲ್‌ನ ಹಸ್ತಕ್ಷೇಪ ಸರಿಯಲ್ಲ. ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ವಿಚಾರ. ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಹಕ್ಕಿದೆ’ ಎಂದರು. ಅಲ್ಲದೆ, ‘ವಿದ್ಯಾರ್ಥಿಗಳು ವಕೀಲಿಕೆಗೆ ನೋಂದಣಿ ಮಾಡಿಕೊಳ್ಳಬಹುದು. ಯಾವುದೇ ರಾಜ್ಯದ ಬಾರ್ ಕೌನ್ಸಿಲ್‌ಗಳು ವಿದ್ಯಾರ್ಥಿಗಳ ವಿರುದ್ಧ ದಂಡನಾ ಕ್ರಮ ಕೈಗೊಳ್ಳಬಾರದು’ ಎಂದೂ ಸೂಚಿಸಿತು.

ಈ ಅರ್ಜಿಗೆ ಸಂಬಂಧಿಸಿ ಪೀಠವು ಬಿಸಿಐಗೆ ನೋಟಿಸ್‌ ನೀಡಿ ವಿವರಣೆ ಕೇಳಿತು.