ರಾಮಮಂದಿರದಲ್ಲಿ ಜ.22ರ ಪ್ರಾಣಪ್ರತಿಷ್ಠಾಪನೆ ವೇಳೆ ಕೇವಲ 5 ಮಂದಿಗೆ ಪ್ರವೇಶ ಕಲ್ಪಿಸಲಾಗಿದ್ದು, ಪ್ರಮುಖವಾಗಿ ಮೋದಿ, ಯೋಗಿ, ಮೋಹನ್, ಆನಂದಿಬೆನ್ ಮತ್ತು ಸತ್ಯೇಂದ್ರ ದಾಸ್ಗೆ ಪ್ರವೇಶಾವಕಾಶ ನೀಡಲಾಗಿದೆ. ಜೊತೆಗೆ ರಾಮಮಂದಿರದ ಆಸುಪಾಸಿನಲ್ಲಿ ಮಾಂಸ ಮಾರಾಟಕ್ಕೆ ಶಾಶ್ವತ ನಿಷೇಧ ಹೇರಲಾಗಿದೆ.
ಅಯೋಧ್ಯೆ: ರಾಮಮಂದಿರದ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿರುವ ನಡುವೆಯೇ, ದೇಗುಲದಲ್ಲಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಜ.22ರ ಪ್ರಾಣಪ್ರತಿಷ್ಠಾಪನೆ ವೇಳೆ ಗರ್ಭಗುಡಿಯಲ್ಲಿ ಕೇವಲ 5 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯ ಅರ್ಚಕರಾದ ಸತ್ಯೇಂದ್ರ ದಾಸ್ ಅವರಿಗೆ ಅವಕಾಶ ಕಲ್ಪಿಸಲಾಗುವುದು. ಆ ಸಮಯದಲ್ಲಿ ಗರ್ಭಗುಡಿಯನ್ನು ಸಾರ್ವಜನಿಕವಾಗಿ ಮುಚ್ಚಿದ್ದು, ಶ್ರೀರಾಮನ ಮೂರ್ತಿಗೆ ಶಾಸ್ತ್ರೋಕ್ತವಾಗಿ ಕನ್ನಡಿಯಲ್ಲಿ ಮೊದಲಿಗೆ ಪ್ರತಿಬಿಂಬ ತೋರಿಸಿ ಅನಾವರಣ ಮಾಡಲಾಗುವುದು. ಗರ್ಭಗುಡಿಯ ಬಾಗಿಲುಗಳಿಗೆ ಬಂಗಾರ ಲೇಪನ ಮಾಡಲಾಗಿದ್ದು, ಗರ್ಭಗುಡಿಯ ಸುತ್ತಲೂ ಶ್ರೀರಾಮನ ಅಣಿಮುತ್ತುಗಳುಳ್ಳ ಭಿತ್ತಿಪತ್ರಗಳನ್ನು ಕಂಚಿನ ಎಲೆಗಳಲ್ಲಿ ಕೆತ್ತನೆ ಮಾಡಿ ಗೋಡೆಗೆ ಅಂಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆಯಲ್ಲಿ ಮದ್ಯ, ಮಾಂಸದಂಗಡಿಗೆ ನಿಷೇಧರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗಿರುವ ನಡುವೆಯೇ ಅಯೋಧ್ಯೆಯ ಬಹುತೇಕ ಪ್ರದೇಶಗಳಲ್ಲಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ.22 ರಂದು ಮಂದಿರದ ಮೊದಲ ಹಂತ ಉದ್ಘಾಟನೆಯಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಆದೇಶ ಹೊರಡಿಸಿದ್ದಾರೆ. ಇದರನ್ವಯ ನಗರದಲ್ಲಿನ ರಾಮನ ನಂಟಿನ ಪ್ರದೇಶಗಳ ಆಸುಪಾಸಿನ ಪ್ರದೇಶಗಳಲ್ಲಿ ಎಲ್ಲ ಮಾಂಸ ಮತ್ತು ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶ್ರೀರಾಮ ಜನ್ಮಭೂಮಿ ಮತ್ತು ಮಂದಿರವನ್ನು ಅತ್ಯುನ್ನತ ಪವಿತ್ರ ಕ್ಷೇತ್ರವೆಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಸುಮಾರು 150 ರಿಂದ 175 ಕಿ.ಮೀ ಮಾರ್ಗದಲ್ಲಿ ಈ ಆದೇಶ ಅನ್ವಯವಾಗಲಿದೆ ಎನ್ನಲಾಗಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.