ಬಿಹಾರ ಚುನಾವಣೆ ರದ್ದು ಕೋರಿದ್ದ ಪಿಕೆ ಅರ್ಜಿ ವಜಾ

KannadaprabhaNewsNetwork |  
Published : Feb 07, 2026, 02:00 AM ISTUpdated : Feb 07, 2026, 04:58 AM IST
Prashant Kishor

ಸಾರಾಂಶ

ಇತ್ತೀಚೆಗೆ ನಡೆದ ಬಿಹಾರ ಚುನಾವಣೆ ರದ್ದು ಕೋರಿದ್ದ ಜನ ಸುರಾಜ್‌ ಪಕ್ಷದ ಮುಖ್ಯಸ್ಥ ಹಾಗೂ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ. ಸೋತ ಬಳಿಕ ಪ್ರಚಾರಕ್ಕೆಂದು ಕೋರ್ಟ್‌ಗೆ ಬಂದಿದ್ದೀರಿ ಎಂದು ಚಾಟಿ ಬೀಡಿದೆ.

  ನವದೆಹಲಿ :  ಇತ್ತೀಚೆಗೆ ನಡೆದ ಬಿಹಾರ ಚುನಾವಣೆ ರದ್ದು ಕೋರಿದ್ದ ಜನ ಸುರಾಜ್‌ ಪಕ್ಷದ ಮುಖ್ಯಸ್ಥ ಹಾಗೂ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ. ಸೋತ ಬಳಿಕ ಪ್ರಚಾರಕ್ಕೆಂದು ಕೋರ್ಟ್‌ಗೆ ಬಂದಿದ್ದೀರಿ ಎಂದು ಚಾಟಿ ಬೀಡಿದೆ.

‘ಚುನಾವಣೆಗೂ ಮುನ್ನ ನಿತೀಶ್‌ ಕುಮಾರ್‌ ಸರ್ಕಾರ 15,600 ಕೋಟಿ ರು. ವೆಚ್ಚದ ಮುಖ್ಯಮಂತ್ರಿ ಮಹಿಳಾ ರೋಜಗಾರ್‌ ಯೋಜನೆ ಜಾರಿಗೊಳಿಸಿತ್ತು. ಆ ಪ್ರಕಾರ ಪ್ರತಿ ಮಹಿಳೆಯರ ಖಾತೆಗೆ 10,000 ರು. ಹಣ ಜಮೆ ಮಾಡಿತ್ತು. ಇದು ನಿಷ್ಪಕ್ಷಪಾತ ಚುನಾವಣೆಯ ಅವಕಾಶ ತಪ್ಪಿಸಿತು. ಹೀಗಾಗಿ ಚುನಾವಣೆ ರದ್ದು ಮಾಡಿ’ ಎಂದು ಪಿಕೆ ಸುಪ್ರೀಂ ಮೆಟ್ಟಿಲೇರಿದ್ದರು.

ಅರ್ಜಿ ವಜಾ ಮಾಡಿದ ಸಿಜೆಐ ಅವರ ಪೀಠ, ‘ಸೋತ ಬಳಿಕ ಜನಪ್ರಿಯತೆ ಗಳಿಸಲು ನ್ಯಾಯಾಂಗ ಬಳಸಿಕೊಳ್ಳುತ್ತಿದ್ದೀರಿ. ನೀವು ಎಷ್ಟು ಮತವನ್ನು ಗಳಿಸಿದ್ದೀರಿ? ಜನರು ನಿಮ್ಮನ್ನು ತಿರಸ್ಕರಿಸಿದ ಮೇಲೆ ನ್ಯಾಯಾಂಗ ಬಳಸಿ ಪರಿಹಾರ ಪಡೆಯುತ್ತೀರಿ. ಆಗಲೇ ಯಾರಾದರೂ ಈ ಯೋಜನೆ ಬಗ್ಗೆ ಪ್ರಶ್ನಿಸಬೇಕಿತ್ತು’ ಎಂದು ಕಿಡಿಕಾರಿತು.

ಇದೇ ವೇಳೆ ‘ಇದು ಒಂದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಹಾಗಾಗಿ ಆ ರಾಜ್ಯದ ಕೋರ್ಟ್‌ಗೆ ಹೋಗಿ’ ಎಂದೂ ಸೂಚಿಸಿತು.

ಮಹಾರಾಷ್ಟ್ರ: ನಕ್ಸಲ್‌ ನಾಯಕ ಪ್ರಭಾಕರ್‌ ಸೇರಿ 7 ಮಂದಿ ಹತ್ಯೆ

ಗಡ್‌ಚಿರೋಲಿ: ಮಹಾರಾಷ್ಟ್ರದಲ್ಲಿ ಪ್ರಮುಖ ನಾಯಕ ಪ್ರಭಾಕರ್‌ ಅಲಿಯಾಸ್‌ ಲೊಕೇಟಿ ಚಂದರ್‌ ರಾವ್‌, 3 ಮಹಿಳೆಯರು ಸೇರಿ 7 ಮಂದಿಯ ಎನ್‌ಕೌಂಟರ್‌ ನಡೆದಿದೆ. ಚಕಮಕಿಯಲ್ಲಿ ಓರ್ವ ಸಿಬ್ಬಂದಿ ಹುತಾತ್ಮರಾಗಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ.ಈ ಭಾಗದಲ್ಲಿ ಕಳೆದ 6 ದಿನಗಳಿಂದ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿತ್ತು. ಅದರ ಭಾಗವಾಗಿಯೇ ಶುಕ್ರವಾರ ತೆಲಂಗಾಣದ ಕಾಮರೆಡ್ಡಿಯಲ್ಲಿ ನಕ್ಸಲ್‌ ಗುಂಪಿನ ಉಸ್ತುವಾರಿ ಹೊತ್ತಿದ್ದ, ತಲೆಗೆ 25 ಲಕ್ಷ ರು. ಇನಾಮು ಹೊಂದಿದ್ದ ಪ್ರಭಾಕರ್‌ನ್ನು ಭದ್ರತಾ ಸಿಬ್ಬಂದಿ ಹತ್ಯೆಗೈದಿದ್ದಾರೆ. ಸಿಬ್ಬಂದಿ ಗುರುವಾರ ಮೂವರು, ಶುಕ್ರವಾರ 4 ಮಾವೋಗಳ ಶವ ವಶಪಡಿಸಿಕೊಂಡಿದ್ದಾರೆ. ಹತ್ಯೆಯಾದ ಏಳು ನಕ್ಸಲರಿಂದ ಎಕೆ 47 ರೈಫಲ್‌ , 303 ರೈಫಲ್‌ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಗುಂಡಿನ ಚಕಮಕಿಯಲ್ಲಿ ಸಿ- 60 ಭದ್ರತಾ ಪಡೆಯ ಯೋಧ ದೀಪಕ್‌ ಚಿನ್ನಾ ಮಾಧ್ವಿ ಎನ್ನುವರು ಗಾಯಗೊಂಡಿದ್ದು, ಬಳಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮತ್ತೊರ್ವ ಸಿಬ್ಬಂದಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಜಿಟಲ್‌ ವಂಚನೆಗೆ 25,000 ವರೆಗೆ ಪರಿಹಾರ

ಮುಂಬೈ: ದೇಶದಲ್ಲಿ ಡಿಜಿಟಲ್‌ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಹತ್ವದ ತೀರ್ಮಾನವೊಂದಕ್ಕೆ ಬಂದಿದೆ. ಡಿಜಿಟಲ್‌ ವಂಚನೆ ಪ್ರಕರಣಗಳಿಗೆ ತುತ್ತಾಗಿರುವ ಬ್ಯಾಂಕ್‌ ಗ್ರಾಹಕರಿಗೆ ಗರಿಷ್ಠ 25 ಸಾವಿರ ರು. ವರೆಗೆ ‘ಒನ್‌ ಟೈಂ’ (ಒಂದು ಬಾರಿಗೆ) ಪರಿಹಾರ ನೀಡಲು ಇದೀಗ ಆರ್‌ಬಿಐ ಮುಂದಾಗಿದೆ.ಗ್ರಾಹಕರೇ ವಂಚಕರ ಜತೆಗೆ ಒಟಿಪಿ ಹಂಚಿಕೊಂಡ ಪ್ರಕರಣವೂ ಸೇರಿ ಎಲ್ಲ ಡಿಜಿಟಲ್‌ ವಂಚನೆ ಪ್ರಕರಣದಲ್ಲಿ ಬ್ಯಾಂಕ್‌ ಗ್ರಾಹಕರಿಗೆ 25 ಸಾವಿರ ರು. ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ತಿಳಿಸಿದ್ದಾರೆ.

ಪರಿಹಾರಕ್ಕೆ ಷರತ್ತು:‘ವಂಚನೆ 25 ಸಾವಿರಕ್ಕಿಂತ ಹೆಚ್ಚಾದಲ್ಲಿ 25 ಸಾವಿರ ರು. ಮಾತ್ರ ನೀಡಲಾಗುತ್ತದೆ. ₹25 ಸಾವಿರಕ್ಕಿಂತ ಒಳಗಿನ ಮೊತ್ತದ ವಂಚನೆ ಪ್ರಕರಣದಲ್ಲಿ ಶೇ.15ರಷ್ಟು ಮೊತ್ತವನ್ನು ಗ್ರಾಹಕರೇ ಭರಿಸಬೇಕಾಗುತ್ತದೆ. ಉಳಿದ ಹಣವಷ್ಟೇ ಪರಿಹಾರ ರೂಪದಲ್ಲಿ ಸಿಗಲಿದೆ’ ಈ ಕುರಿತ ಕರಡು ನೀತಿಯನ್ನು ಶೀಘ್ರದಲ್ಲೇ ಸಾರ್ವಜನಿಕ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಗುವುದು’ ಎಂದಿದ್ದಾರೆ.

ಈ ಹಣವನ್ನು 85 ಸಾವಿರ ಕೋಟಿ ಮೊತ್ತದ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯಿಂದ ಪಾವತಿಸಲಾಗುತ್ತದೆ.

ಅನುಕೂಲ:

ಮೇಲ್ನೋಟಕ್ಕೆ ಪರಿಹಾರ ಮೊತ್ತ ಕಡಿಮೆ ಅನಿಸಿದರೂ ಬಹುತೇಕ ಡಿಜಿಟಲ್‌ ವಂಚನೆಗಳ ಮೊತ್ತ 50 ಸಾವಿರ ರುಪಾಯಿಗಿಂತ ಕಡಿಮೆಯೇ ಆಗಿದೆ. ಇದೀಗ ಆರ್‌ಬಿಐ ನೀಡಲುದ್ದೇಶಿಸಿರುವ 25 ಸಾವಿರ ರು. ಪರಿಹಾರದಿಂದ ವಂಚನೆಗೊಳಗಾದ ದೊಡ್ಡ ಪ್ರಮಾಣದ ಜನರಿಗೆ ಅನುಕೂಲ ಆಗಲಿದೆ. ಗ್ರಾಹಕರು ತಾವಾಗಿಯೇ ವಂಚನೆಗೊಳಗಾದರೂ ಅಥವಾ ಬೇರೆಯವರ ಮೂಲಕ ವಂಚನೆಗೊಳಗಾದರೂ ಅದು ಉದ್ದೇಶಪೂರ್ವಕವಾಗಿಲ್ಲದಿದ್ದರೆ ಗ್ರಾಹಕರಿಗೆ ಪರಿಹಾರ ನೀಡಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಐಎಎಸ್‌, ಐಎಫ್ಎಸ್‌ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್‌ ಇಲ್ಲ- ಯುಪಿಎಸ್ಸಿ ನಿಯಮ ಬದಲು
ಶ್ರೀಶೈಲ ದೇಗುಲ ಪ್ರಸಾದಕ್ಕೂ ತಿರುಪತಿ ರೀತಿ ಕಲಬೆರಕೆ ತುಪ್ಪ!