ನವದೆಹಲಿ: ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ವಿಷಯದ ಇದೀಗ ಎನ್ಸಿಇಆರ್ಟಿಯ 9ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯವಾಗಿ ಸೇರ್ಪಡೆಗೊಂಡಿದೆ. ದೇಶದ ಯಾವುದೇ ಅರ್ಹ ನಾಗರಿಕ ವೋಟರ್ ಲಿಸ್ಟ್ನಿಂದ ಹೊರಗುಳಿಯಬಾರದು ಮತ್ತು ಅನರ್ಹನ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ನೋಡಿಕೊಳ್ಳಲು ಈ ವಿಶೇಷ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ಪಠ್ಯದಲ್ಲಿ ಹೇಳಲಾಗಿದೆ. ಸುಳ್ಳು ಸುದ್ದಿಗಳು, ತಪ್ಪು ಮಾಹಿತಿ ಮತ್ತು ಬೆದರಿಕೆಗಳ ನಡುವೆಯೂ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸಿದೆ ಎಂದು ಪಠ್ಯ ಪುಸ್ತಕದಲ್ಲಿ ಹೇಳಲಾಗಿದೆ.
ನವದೆಹಲಿ: ‘ನ್ಯಾಯಾಂಗದ ಭ್ರಷ್ಟಾಚಾರ’ ಎಂಬ ಪಠ್ಯವನ್ನು ಕಳೆದ ವರ್ಷ 8ನೇ ತರಗತಿಯ ಪುಸ್ತಕದಲ್ಲಿ ಸೇರಿಸಿ ಎಡವಟ್ಟು ಮಾಡಿಕೊಂಡಿದ್ದ ಎನ್ಟಿಇಆರ್ಟಿ, ಈ ವರ್ಷ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಮಾತ್ರ ‘ನ್ಯಾಯಾಂಗವು ಪಕ್ಷಪಾತರಹಿತ ಮತ್ತು ಸ್ವತಂತ್ರ ಸಂಸ್ಥೆ’ ಎಂದು ಬಣ್ಣಿಸಿದ ಪಠ್ಯ ಸೇರ್ಪಡೆ ಮಾಡಿದೆ. ವಿಶೇಷವೆಂದರೆ ಈ ಪಠ್ಯವನ್ನು ಎಂಟನೇ ತರಗತಿಯ ಪಠ್ಯ ಪುಸ್ತಕ ವಿವಾದ ಭುಗಿಲೇಳುವ ಮೊದಲೇ ಸಿದ್ಧಪಡಿಸಲಾಗಿತ್ತು.
ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ಪ್ರಜಾಪ್ರಭುತ್ವ ಕುರಿತ ಅಧ್ಯಾಯದ ‘ಅಧಿಕಾರದ ವಿಂಗಡಣೆ’ ಕುರಿತ ಪಠ್ಯದಲ್ಲಿ ಮಾತ್ರ ನ್ಯಾಯಾಂಗವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ(ಪಿಐಎಲ್)ನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೂಲಕ ಎಲ್ಲರಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತದೆ. ನ್ಯಾಯಾಂಗವು ಪಕ್ಷಪಾತರಹಿತ ಮತ್ತು ಸ್ವತಂತ್ರ ಸಂಸ್ಥೆಯಾಗಿದ್ದು, ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಸಂವಿಧಾನದ ಸ್ಪೂರ್ತಿಯನ್ನು ಎತ್ತಿಹಿಡಿಯುತ್ತದೆ ಎಂದು ಹೇಳಲಾಗಿದೆ.