ಆಪ್‌ ವಿರುದ್ಧ ಆಪ್‌ ಸಂಸದೆಯಿಂದಲೇ ಸಮರ ತೀವ್ರ: ಪಕ್ಷಕ್ಕೆ ಹೊಸ ಸಂಕಷ್ಟ!

KannadaprabhaNewsNetwork |  
Published : May 18, 2024, 01:35 AM ISTUpdated : May 18, 2024, 04:54 AM IST
ಸ್ವಾತಿ | Kannada Prabha

ಸಾರಾಂಶ

ಸ್ವಾತಿ ಮಲಿವಾಲ್‌ ಮೇಲೆ ಕೇಜ್ರಿ ಆಪ್ತ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆಪ್‌ ಎಂಪಿ ಪರ ಬಿಜೆಪಿ ನಿಂತ ಕಾರಣ ಹಲ್ಲೆ ಒಪ್ಪಿದ್ದ ಆಪ್‌ ಈಗ ಉಲ್ಟಾ ಹೊಡೆದಿದೆ.

ನವದೆಹಲಿ: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಅವರು ಪಕ್ಷದ ನೇತಾರ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ ವಿರುದ್ಧ ಹೊರಿಸಿರುವ ದೈಹಿಕ ದೌರ್ಜನ್ಯ ಆರೋಪ ಪಕ್ಷಕ್ಕೆ ಹೊಸ ಸಂಕಷ್ಟ ತಂದಿಟ್ಟಿದೆ. ಬಿಭವ್‌ಗೆ ಈಗ ಬಂಧನದ ಭೀತಿ ಆವರಿಸಿದೆ ಹಾಗೂ ಲೋಕಸಭೆ ಚುನಾವಣೆ ವೇಳೆ ದಿಲ್ಲಿಯಲ್ಲಿ 7 ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಕೇಜ್ರಿ ಪಡೆಗೆ ಢವ ಢವ ಆರಂಭವಾಗಿದೆ.

ಈಗಾಗಲೇ ಅಬಕಾರಿ ಹಗರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಈಗಷ್ಟೇ ಜಾಮೀನು ಪಡೆದು ಹೊರಬಂದಿದ್ದಾರೆ. ಅಷ್ಟರಲ್ಲಿ ಈ ಹೊಸ ಪ್ರಕರಣ ಆಪ್‌ ಅನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.

ಮಲಿವಾಲ್‌ ನೀಡಿದ ದೂರು ಆಧರಿಸಿ ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಸ್ವಾತಿ ಮೇಲಿನ ದೌರ್ಜನ್ಯ ಘಟನೆ ನಡೆದಿದೆ ಎನ್ನಲಾದ ಕೇಜ್ರಿವಾಲ್‌ ಮನೆಗೆ ಶುಕ್ರವಾರ ಸಂಜೆ ಭೇಟಿ ನೀಡಿ ಪ್ರಕರಣದ ಮಹಜರು ನಡೆಸಿದ್ದಾರೆ. ಖುದ್ದು ಸ್ವಾತಿಯನ್ನು ಕರೆಸಿ ಘಟನೆಯ ಮರುಸೃಷ್ಟಿ ಮಾಡಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಮಹಿಳಾ ಆಯೋಗ ಬಿಭವ್‌ರನ್ನು ವಿಚಾರಣೆಗೆ ಕರೆದಿದೆ. ಆದರೆ ಬಿಭವ್ ಗೈರು ಹಾಜರಾಗಿದ್ದಾರೆ.

ಇದರ ನಡುವೆ, ಹಲ್ಲೆ ಘಟನೆ ನಡೆದ ನಂತರ ಸ್ವಾತಿ ಅವರು ಕೇಜ್ರಿವಾಲ್‌ ಮನೆಗೆ ಪ್ರವೇಶಿಸಿ ಭದ್ರತಾ ಸಿಬ್ಬಂದಿ ಜತೆ ಜಗಳ ಆಡುವ ವಿಡಿಯೋವೊಂದು ವೈರಲ್‌ ಆಗಿದೆ. ಆಪ್‌ನವರೇ ಈ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಶುಕ್ರವಾರ ಸಂಜೆ ಸುದ್ದಿಗೋಷ್ಠಿ ಮಾಡಿದ ಆಪ್‌ ಸಚಿವೆ ಆತಿಶಿ, ‘ಸಿಎಂ ಮನೆಯಲ್ಲಿ ಬಿಭವ್‌ ಹಲ್ಲೆ ಮಾಡಿದ್ದಾರೆ ಎಂಬ ಸ್ವಾತಿ ಆರೋಪ ಸುಳ್ಳು. ಬಿಜೆಪಿ ಕುಮ್ಮಕ್ಕಿನ ಆರೋಪ ಅದು. ವೈರಲ್‌ ಆದ ವಿಡಿಯೋ, ಹಲ್ಲೆ ಘಟನೆಯ ನಂತರದ್ದು. ಇದರಲ್ಲಿ ಸ್ವಾತಿಗೆ ಯಾವುದೇ ಗಾಯವಾಗಿಲ್ಲ ಎಂಬುದೇ ಹಲ್ಲೆ ಆಗಿಲ್ಲ ಎಂಬುದಕ್ಕೆ ಸಾಕ್ಷಿ’ ಎಂದಿದ್ದಾರೆ.

ಆದರೆ ಸ್ವಾತಿ ಅವರು, ‘ಆಪ್‌ ನನ್ನ ವಿಚಾರದಲ್ಲಿ ಉಲ್ಟಾ ಹೊಡೆದಿದೆ. ನನ್ನ ಚಾರಿತ್ರ್ಯವನ್ನೇ ಶಂಕಿಸಿದೆ. ಇದರ ವಿರುದ್ಧ ಕಾನೂನಾತ್ಮಕವಾಗೇ ಹೋರಾಟ ಮಾಡುವೆ’ ಎಂದಿದ್ದಾರೆ.

ಅಬಕಾರಿ ಹಗರಣ ಬಳಿಕ ಲೋಕಸಭೆ ಚುನಾವಣೆ ವೇಳೆ ಆಮ್‌ ಆದ್ಮಿ ಪಕ್ಷ ಪೇಚಿಗೆ ಸಿಲುಕಿದ್ದು, ಕೇಜ್ರಿವಾಲ್‌ ಆಪ್ತನ ಮೇಲೇ ಆಪ್‌ ಸಂಸದೆಯಿಂದ ದೌರ್ಜನ್ಯದ ದೂರು ದಾಖಲು ಆಗಿದೆ. ಈ ಘಟನೆಯೇ ಸುಳ್ಳಿನ ಕಂತೆ, ಇದೆಲ್ಲ ಬಿಜೆಪಿ ಸೃಷ್ಟಿ ಎಂದ ಆಪ್‌ ಸಚಿವೆ ಆತಿಶಿ, ಇದರ ನಡುವೆ ಕೇಜ್ರಿವಾಲ್‌ ಮನೆಗೆ ಪೊಲೀಸರ ದೌಡು ನಡೆದು, ಪ್ರಕರಣ ಮರುಸೃಷ್ಟಿಯಾಗಿದೆ. ನಮ್ಮ ಪಕ್ಷವೇ ನನ್ನ ಚಾರಿತ್ರ್ಯಹರಣ ಮಾಡಿದೆ, ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುವೆ ಎಂದು ಸ್ವಾತಿ ಗುಡುಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!