ತಮಿಳು ನಟ ವಿಜಯ್‌ ರಾಜಕೀಯ ಪ್ರವೇಶ

KannadaprabhaNewsNetwork | Updated : Feb 03 2024, 07:49 AM IST

ಸಾರಾಂಶ

ನಟ ವಿಜಯ್‌ ತಮಿಳಗ ವೇಟ್ರಿ ಕಳಗಂ ಪಕ್ಷ ಸ್ಥಾಪನೆ ಮಾಡಿದ್ದಾರೆ. ಯಾರೊಂದಿಗೂ ಮೈತ್ರಿ ಇಲ್ಲ. ಲೋಕಸಭೆಗೆ ಸ್ಪರ್ಧೆ ಇಲ್ಲ. 2026ರ ತ.ನಾಡು ಚುನಾವಣೆ ಮೇಲೆ ಕಣ್ಣು ಇಟ್ಟಿರುವುದಾಗಿ ತಿಳಿಸಿದ್ದಾರೆ.

ಚೆನ್ನೈ: ಖ್ಯಾತ ತಮಿಳು ನಟ ತಳಪತಿ ವಿಜಯ್‌ ಶುಕ್ರವಾರ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ. ತಮಿಳ್‌ ವೇಟ್ರಿ ಕಳಗಂ (ಟಿವಿಕೆ) ಎಂಬ ಪಕ್ಷವನ್ನು ಅವರು ಘೋಷಿಸಿದ್ದಾರೆ. ಅಲ್ಲದೆ, 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಇಲ್ಲ. ಆದರೆ 2026ರ ತಮಿಳುನಾಡು ವಿಧಾನಸಭೆ ಚುನಾವಣೆಯತ್ತ ಗಮನ ಹರಿಸುವುದಾಗಿ ಅವರು ಹೇಳಿದ್ದಾರೆ.

ತಮಿಳಗ ವೇಟ್ರಿ ಕಳಗಂ ಎಂದರೆ ‘ತಮಿಳುನಾಡು ವಿಜಯ ಪಕ್ಷ’ ಎಂಬುದಾಗಿದೆ.

ಪಕ್ಷ ಸ್ಥಾಪನೆ ಘೋಷಿಸಿ ಮಾತನಾಡಿದ ವಿಜಯ್‌, ‘ನಮ್ಮ ಟಿಎಂಕೆ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಯಾರಿಗೂ ಬೆಂಬಲವನ್ನೂ ನೀಡುವುದಿಲ್ಲ. 

ಮೊದಲಿಗೆ ನಾನು ಒಪ್ಪಿಕೊಂಡಿರುವ ಚಲನಚಿತ್ರಗಳನ್ನು ಸಂಪೂರ್ಣವಾಗಿ ಮುಗಿಸಿ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕಿ ಜನಸೇವೆಯಲ್ಲಿ ತೊಡಗಿಕೊಳ್ಳುತ್ತೇನೆ’ ಎಂದರು.

ವಿಜಯ್‌ ಅಭಿಮಾನಿಗಳು ಅಭಿಮಾನಿ ಸಂಘ ಸ್ಥಾಪಿಸಿದ್ದರು. ಅದನ್ನುರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಸಲು ವಿಜಯ್‌ ಇತ್ತೀಚೆಗೆ ಒಪ್ಪಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪಕ್ಷ ಸ್ಥಾಪನೆ ಘೋಷಿಸಿದ್ದಾರೆ.

 ತಮಿಳುನಾಡು ರಾಜಕಾರಣದಲ್ಲಿ ಚಲನಚಿತ್ರ ನಟ-ನಟಿಯರು ಚುನಾವಣೆಗೆ ಸ್ಪರ್ಧಿಸುವುದು ಸರ್ವೇ ಸಾಮಾನ್ಯವಾಗಿದೆ. ಎಐಎಡಿಎಂಕೆ ಪಕ್ಷದ ಸ್ಥಾಪಕ ಎಂ.ಜಿ.ರಾಂಚಂದ್ರನ್‌, ಮಾಜಿ ಮುಖ್ಯಮಂತ್ರಿ ಜಯಲಲಿತಾ, ಡಿಎಂಡಿಕೆ ಪಕ್ಷ ಸ್ಥಾಪಿಸಿದ ದಿವಂಗತ ವಿಜಯಕಾಂತ್‌, ಕಮಲ ಹಾಸನ್‌, ಡಿಎಂಕೆ ಪಕ್ಷದಲ್ಲಿ ಮಂತ್ರಿಯಾಗಿರುವ ಉದಯನಿಧಿ ಸ್ಟಾಲಿನ್‌ ಮುಂತಾದ ಚಲನಚಿತ್ರ ನಟರು ರಾಜಕಾರಣ ಪ್ರವೇಶಿಸಿದ್ದರು. ರಜನೀಕಾಂತ್‌ ಕೂಡ ರಾಜಕೀಯ ರಂಗಕ್ಕೆ ಧುಮುಕುವ ಯತ್ನ ಮಾಡಿ ದೂರ ಉಳಿದಿದ್ದರು.

ವಿಜಯ್‌ ಸಮಾಜಸೇವಕ: ವಿಜಯ್‌ ಬಾಲ್ಯನಟನಾಗಿ ನಟನೆ ಆರಂಭಿಸಿ ಇಲ್ಲಿಯವರೆಗೂ 68ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ ಅವರು ತಮ್ಮ ಸಹಾಯ ಸಂಘಗಳ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಪ್ರಮುಖವಾಗಿ ಉಚಿತ ಆಹಾರ ವಿತರಣೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಗ್ರಂಥಾಲಯಗಳ ಸ್ಥಾಪನೆ, ಸಂಜೆ ಪಾಠ, ಕಾನೂನು ಸಲಹೆ ಮುಂತಾದ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಿದ್ದರು.

Share this article