2ನೇ ಹಂತದ ಚುನಾವಣೆ: ರಾಹುಲ್‌ ಸೇರಿ ಹಲವರ ಭವಿಷ್ಯ ನಿರ್ಧಾರ

KannadaprabhaNewsNetwork | Updated : Apr 26 2024, 05:20 AM IST

ಸಾರಾಂಶ

13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಬಾರಿ ಲೋಕಸಭೆಗೆ ಒಟ್ಟು 7 ಹಂತದಲ್ಲಿ ಚುನಾವಣೆ ನಿಗದಿಯಾಗಿದ್ದು ಈ ಪೈಕಿ ಇದು 2ನೇಯದ್ದಾಗಿದೆ.

ನವದೆಹಲಿ: 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಬಾರಿ ಲೋಕಸಭೆಗೆ ಒಟ್ಟು 7 ಹಂತದಲ್ಲಿ ಚುನಾವಣೆ ನಿಗದಿಯಾಗಿದ್ದು ಈ ಪೈಕಿ ಇದು 2ನೇಯದ್ದಾಗಿದೆ. ಏ.14ರಂದು ಮೊದಲ ಹಂತದಲ್ಲಿ 21 ರಾಜ್ಯಗಳ 102 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆಗ ಶೇ.65.5ರಷ್ಟು ಮತ ಚಲಾವಣೆಯಾಗಿತ್ತು.2ನೇ ಹಂತದ ಚುನಾವಣೆಗೆ ಒಟ್ಟು 2633 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಕೆಲವರು ನಾಮಪತ್ರ ಹಿಂಪಡೆದ ಕಾರಣ ಅಂತಿಮವಾಗಿ 1206 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.

ಕೇರಳದ ವಯನಾಡಿನಿಂದ ರಾಹುಲ್‌ ಗಾಂಧಿ, ತಿರುವನಂತಪುರದಿಂದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಶಶಿ ತರೂರ್‌, ಮಥುರಾದಿಂದ ನಟಿ ಹೇಮಾಮಾಲಿನಿ, ಮೇರಠ್‌ನಿಂದ ಟೀವಿ ರಾಮಾಯಣದ ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌, ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಕೋಟಾದಿಂದ ಕಣಕ್ಕೆ ಇಳಿದಿರುವ ಪ್ರಮುಖರು. ಇನ್ನು ಕೇರಳದ ಎಲ್ಲಾ 20 ಕ್ಷೇತ್ರಗಳಿಗೂ ಶುಕ್ರವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತದಂತೆ ಈ ಹಂತ ಕೂಡಾ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ನಡುವಿನ ಹೋರಾಟದ ಕಣವಾಗಿದ ಹೊರಹೊಮ್ಮಿದೆ.ಮೊದಲ ಹಂತದಲ್ಲಿ ಉಭಯ ಬಣಗಳು ತಮ್ಮ ತಮ್ಮ ಪ್ರಣಾಳಿಕೆ ಬಿಡುಗಡೆ ಮೂಲಕ ಜನರ ಗಮನ ಸೆಳೆಯುವ ಯತ್ನ ಮಾಡಿದ್ದವು. ಆದರೆ ಎರಡನೇ ಹಂತದ ವೇಳೆ ಕಾಂಗ್ರೆಸ್‌ನ ಓಲೈಕೆ ರಾಜಕಾರಣ, ಹಿಂದುಳಿದ ವರ್ಗದವರ ಮೀಸಲನ್ನು ಮುಸ್ಲಿಮರಿಗೆ ನೀಡಲು ಯತ್ನಿಸುತ್ತಿದೆ ಎಂದು ಮೋದಿ ಮಾಡಿದ ಆರೋಪಗಳು ಭಾರೀ ಚರ್ಚೆಗೆ ಕಾರಣವಾದವು. ಇದರ ಜೊತೆಗೆ ಸಂಪತ್ತಿನ ಹಂಚಿಕೆ ಕುರಿತ ಕಾಂಗ್ರೆಸ್‌ನ ಪ್ರಣಾಳಿಕೆ ಹಾಗೂ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಅವರ ಅಮೆರಿಕ ಮಾದರಿ ಪಿತ್ರಾರ್ಜಿತ ಆಸ್ತಿಯಲ್ಲಿ ಅರ್ಧಭಾಗ ಸರ್ಕಾರಕ್ಕೆ ಹೋಗಬೇಕು ಎಂಬ ಸಲಹೆ ಭಾರೀ ಕೋಲಾಹಲ ಸೃಷ್ಟಿಸಿದವು.ಪ್ರಧಾನಿ ಮೊದಲ ಭಾರಿ ನೇರವಾಗಿ ಮುಸ್ಲಿಂ ಸಮುದಾಯ ಗುರಿಯಾಗಿಸಿ ಸತತ 4 ದಿನ ನಡೆಸಿದ ವಾಗ್ದಾಳಿ ರಾಜಕೀಯ ವಿಶ್ಲೇಷಕರನ್ನೂ ಅಚ್ಚರಿಗೆ ಗುರಿ ಮಾಡಿತು.

ಎಲ್ಲೆಲ್ಲಿ ಚುನಾವಣೆ

ಕೇರಳ 20, ಕರ್ನಾಟಕ 14, ರಾಜಸ್ಥಾನ 13, ಮಹಾರಾಷ್ಟ್ರ 8, ಉತ್ತರಪ್ರದೇಶ 8, ಮಧ್ಯಪ್ರದೇಶ 7, ಅಸ್ಸಾಂ 5, ಬಿಹಾರ 5, ಛತ್ತೀಸ್‌ಗಢ 3, ಪಶ್ಚಿಮ ಬಂಗಾಳ 3, ಮಣಿಪುರ 1, ತ್ರಿಪುರಾ 1, ಜಮ್ಮು ಮತ್ತು ಕಾಶ್ಮೀರ 1. 2019ರಲ್ಲಿ ಈ 88 ಕ್ಷೇತ್ರಗಳ ಪೈಕಿ ಬಿಜೆಪಿ 56ರಲ್ಲಿ ಕಾಂಗ್ರೆಸ್‌ 18ರಲ್ಲಿ ಗೆಲುವು ಸಾಧಿಸಿತ್ತು.

ಪ್ರಮುಖ ಅಭ್ಯರ್ಥಿಗಳುರಾಹುಲ್‌ ಗಾಂಧಿ, ರಾಜೀವ್‌ ಚಂದ್ರಶೇಖರ್‌, ಶಶಿ ತರೂರ್‌, ಹೇಮಾಮಾಲಿನಿ, ಅರುಣ್‌ ಗೋವಿಲ್‌, ಓಂ ಬಿರ್ಲಾ, ಗಜೇಂದ್ರಸಿಂಗ್‌ ಶೇಖಾವತ್‌, ಭೂಪೇಶ್‌ ಬಘೇಲ್‌, ಕೆ.ಸಿ.ವೇಣುಗೋಪಾಲ್‌, ಸುರೇಶ್‌ ಗೋಪಿ

ರಾಹುಲ್‌ ಗಾಂಧಿ (ವಯನಾಡು), ರಾಜೀವ್‌ ಚಂದ್ರಶೇಖರ್‌ (ತಿರುನಂತಪುರ), ಶಶಿ ತರೂರ್‌ (ತಿರುವನಂತಪುರ), ಹೇಮಾಮಾಲಿನಿ (ಮಥುರಾ), ಅರುಣ್‌ ಗೋವಿಲ್‌ (ಮೇರಠ್‌), ಓಂ ಬಿರ್ಲಾ (ಕೋಟಾ), ಗಜೇಂದ್ರ ಸಿಂಗ್‌ ಶೇಖಾವತ್‌ (ಜೋಧ್‌ಪುರ), ಭೂಪೇಶ್‌ ಬಘೇಲ್‌ (ರಾಜನಂದಗಾಂವ್‌), ಕೆ.ಸಿ.ವೇಣುಗೋಪಾಲ್‌ (ಆಲಪ್ಪುಳ), ಸುರೇಶ್‌ ಗೋಪಿ (ತ್ರಿಶ್ಯೂರು).

ಚುನಾವಣೆಯ ಪ್ರಮುಖ ವಿಷಯಗಳುಬಿಜೆಪಿ

ಕಾಂಗ್ರೆಸ್‌ನ ಕುಟುಂಬ ರಾಜಕಾರಣ, ಅಲ್ಪಸಂಖ್ಯಾತರ ಓಲೈಕೆ ದೂರು, ಹಿಂದೂಗಳ ಮೇಲಿನ ದಾಳಿ, ಸಂವಿಧಾನಿಕ ಮೇಲಿನ ದಾಳಿ, ಇಂಡಿಯಾ ಮೈತ್ರಿಕೂಟದ ನಾಯಕರ ಭ್ರಷ್ಟಾಚಾರ, ರಾಮಮಂದಿರ ನಿರ್ಮಾಣ, ದೇಶದ ಭದ್ರತೆ, ವಿಕಸಿತ ಭಾರತ.

ಕಾಂಗ್ರೆಸ್‌  ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಸಮಸ್ಯೆ, ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ, ಚುನಾವಣಾ ಬಾಂಡ್‌, ವಿಪಕ್ಷ ನಾಯಕರ ಗುರಿಯಾಗಿಸಿ ದಾಳಿ.

ಕ್ರಿಮಿನಲ್‌ ಕೇಸ್

ಶೇ.21 ಅಭ್ಯರ್ಥಿಗಳ ಮೇಲಿದೆ ಕ್ರಿಮಿನಲ್‌ ಕೇಸು

ಶೇ.14 ಅಭ್ಯರ್ಥಿಗಳ ಮೇಲೆ ಗಂಭೀರ ಕ್ರಿಮಿನಲ್‌ ಕೇಸು32 ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರು

ಶೇ. 3 ರಷ್ಟು ಅಭ್ಯರ್ಥಿಗಳ ಮೇಲಿದೆ ಕೊಲೆ ಪ್ರಕರಣ 

ಲೋಕಸಭೆ 2 ನೇ ಹಂತದ ಚುನಾವಣೆಯ ಅಂಕಿ ಅಂಶ

1098 ಪುರುಷ 102 ಮಹಿಳಾ 2 ತೃತೀಯ ಲಿಂಗಿಗಳು

16 ಲಕ್ಷ ಚುನಾವಣಾ ಸಿಬ್ಬಂದಿ1.67 ಲಕ್ಷ ಮತಗಟ್ಟೆ15.88 ಕೋಟಿ ಮತದಾರರು 3 ಹೆಲಿಕಾಪ್ಟರ್‌ 4 ವಿಶೇಷ ರೈಲು 80000 ವಾಹನ

Share this article