ಕಾಂಗ್ರೆಸ್ಸಿಗರಿಗೆ ಮತ್ತೆ ಸಂಸದ ಶಶಿತರೂರ್‌ ಚಾಟಿ

KannadaprabhaNewsNetwork | Updated : Jun 06 2025, 04:53 AM IST
ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುವವರನ್ನು ಪಕ್ಷ ವಿರೋಧಿಗಳು ಎಂದು ಕರೆಯುವವರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ ಎಂದು ಸಂಸದ ಶಶಿತರೂರ್‌ ಹೇಳಿದ್ದಾರೆ. ಆದರೆ, ಇದೇ ವೇಳೆ ಕಾಂಗ್ರೆಸ್‌ ತ್ಯಜಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

 ವಾಷಿಂಗ್ಟನ್‌ : ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುವವರನ್ನು ಪಕ್ಷ ವಿರೋಧಿಗಳು ಎಂದು ಕರೆಯುವವರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ ಎಂದು ಸಂಸದ ಶಶಿತರೂರ್‌ ಹೇಳಿದ್ದಾರೆ. ಆದರೆ, ಇದೇ ವೇಳೆ ಕಾಂಗ್ರೆಸ್‌ ತ್ಯಜಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಸದ್ಯ ಅಮೆರಿಕದಲ್ಲಿ ಆಪರೇಷನ್ ಸಿಂದೂರ ಪರ ಭಾರತದ ನಿಯೋಗದ ನೇತೃತ್ವ ವಹಿಸಿರುವ ತರೂರ್‌ ಅವರು ಪಹಲ್ಗಾಂ ದಾಳಿ ಬಳಿಕ ಕೇಂದ್ರ ಸರ್ಕಾರದ ನಿಲುವುಗಳನ್ನು ಬೆಂಬಲಿಸುತ್ತಿರುವುದಕ್ಕೆ ಕಾಂಗ್ರೆಸ್‌ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತರೂರ್‌ ಅವರು ಬಿಜೆಪಿ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅ‍ವರು, ದೇಶ ಸೇವೆ ಮಾಡುವಾಗ ಇಂಥ ವಿಚಾರಗಳ ಕುರಿತು ತೀವ್ರ ತಲೆಕೆಡಿಸಿಕೊಳ್ಳುವ ಅಗತ್ಯವಿರುವುದಿಲ್ಲ. ದೇಶದ ಹಿತಾಸಕ್ತಿ ಪರ ಕೆಲಸ ಮಾಡುವವರನ್ನು ಪಕ್ಷ ವಿರೋಧಿ ಎಂದು ಕರೆಯುವವರು ನಮ್ಮನ್ನು ಪ್ರಶ್ನಿಸುವ ಬದಲು ತಮ್ಮನ್ನು ತಾವು ಮೊದಲು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ ಎಂಬುದು ನನ್ನ ಭಾವನೆ ಎಂದು ಹೇಳಿದರು.

ಪಕ್ಷ ಬಿಡಲ್ಲ:

ಇದೇ ವೇಳೆ ತರೂರ್‌ ಅವರು ಕಾಂಗ್ರೆಸ್‌ನಲ್ಲೇ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ, ನಾನು ಸಂಸತ್ತಿನ ಚುನಾಯಿತ ಪ್ರತಿನಿಧಿ. ನನ್ನ ಅವಧಿ ಪೂರ್ಣಗೊಳ್ಳಲು ಇನ್ನೂ ನಾಲ್ಕು ವರ್ಷಗಳು ಬಾಕಿ ಇದೆ. ಹಾಗಿದ್ದರೂ ಈ ರೀತಿಯ ಪ್ರಶ್ನೆ ಕೇಳುವ ಔಚಿತ್ಯವಾದರೂ ಏನು ಎಂಬುದು ನನಗೂ ಗೊತ್ತಿಲ್ಲ ಎಂದರು.

ಈ ನಡುವೆ, ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಒತ್ತಡಕ್ಕೆ ಮಣಿದು ಭಾರತ ಕದನ ವಿರಾಮಕ್ಕೆ ಒಪ್ಪಿಕೊಂಡಿತು ಎಂಬ ಆರೋಪವನ್ನು ಮುಂದಿಟ್ಟುಕೊಂಡು ‘ನರೇಂದರ್‌ ಸರೆಂಡರ್‌’ ಎಂದು ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಪಕ್ಷಗಳು ವಾದ, ಟೀಕೆ ವ್ಯಕ್ತಪಡಿಸುವುದು ಮತ್ತು ಬೇಡಿಕೆಗಳನ್ನು ಇಡುವುದೆಲ್ಲ ಸಾಮಾನ್ಯ. ಆದರೆ, ನಾವು ಪಕ್ಷದ ರಾಜಕೀಯ ಕೆಲಸದ ಮೇಲೆ ಇಲ್ಲಿ ಬಂದಿಲ್ಲ. ಬದಲಾಗಿ ಏಕಭಾರತದ ಪ್ರತಿನಿಧಿಯಾಗಿ ಬಂದಿದ್ದೇವೆ’ ಎಂದರು.

ವ್ಯಾನ್ಸ್‌ ಜತೆ ತರೂರ್‌ ಭೇಟಿ: ಉಗ್ರವಾದ ನಿಗ್ರಹ ಯಶಸ್ವಿ ಚರ್ಚೆ

ವಾಷಿಂಗ್ಟನ್‌: ಪಹಲ್ಗಾಂ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲಿಗೆ ನಿಯೋಜಿತ ಆಗಿರುವ ಶಶಿ ತರೂರ್ ನೇತೃತ್ವದ ಭಾರತೀಯ ಸಂಸದರ ಬಹುಪಕ್ಷೀಯ ನಿಯೋಗವು ಗುರುವಾರ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಭೇಟಿ ಮಾಡಿ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಸಮಗ್ರ ಚರ್ಚೆ ನಡೆಸಿತು. ಈ ಬಗ್ಗೆ ಟ್ವೀಟ್‌ ಮಾಡಿರುವ ಶಶಿ, ’ಉಪಾಧ್ಯಕ್ಷ ವ್ಯಾನ್ಸ್‌ ಅವರೊಂದಿಗೆ ನಮ್ಮ ನಿಯೋಗದೊಂದಿಗೆ ಸಭೆ ಉತ್ತಮವಗಿತ್ತು. ಭಯೋತ್ಪಾದನಾ ನಿಗ್ರಹ ಯತ್ನಗಳ ಬಗ್ಗೆ ಫಲಪ್ರದ ಚರ್ಚೆ ನಡಯಿತು’ ಎಂದಿದ್ದಾರೆ. ಏ.22ರಂದು ವ್ಯಾನ್ಸ್‌ ಭಾರತದಲ್ಲಿದ್ದಾಗಲೇ ಪಹಲ್ಗಾಂನಲ್ಲಿ 26 ಪ್ರವಾಸಿಗರ ನರಮೇಧ ಆಗಿತ್ತು.

ಸಲಿಂಗಿಗಳು ಕುಟುಂಬ ರಚಿಸಬಹುದು: ಮದ್ರಾಸ್‌ ಹೈಕೋರ್ಟ್‌ 

ಪಿಟಿಐ ಚೆನ್ನೈಸಲಿಂಗ ವಿವಾಹ ಅಕ್ರಮ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರೂ, ‘ಸಲಿಂಗಿಗಳು ಕುಟುಂಬವನ್ನು ರಚಿಸಬಹುದು. ಮದುವೆಯು ಕೌಟುಂಬಿಕ ಘಟಕಕ್ಕೆ ಏಕೈಕ ಅಡಿಪಾಯವಲ್ಲ’ ಎಂದು ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿದೆ. ಯುವತಿಯೊಬ್ಬಳು ತನ್ನ ಮಹಿಳಾ ಸಂಗಾತಿಯ ಜತೆಗೆ ಇರಲು ಅವಕಾಶ ಮಾಡಿಕೊಟ್ಟಿದೆ ಮತ್ತು ಇಬ್ಬರು ಮಹಿಳೆಯರು ಒಂದು ಕುಟುಂಬವನ್ನು ರಚಿಸಬಹುದು ಎಂದು ಹೇಳಿದೆ.

25 ವರ್ಷದ ಮಹಿಳೆಯೊಬ್ಬಳನ್ನು ಕುಟುಂಬಸ್ಥರು ಬಲವಂತವಾಗಿ ಕೂಡಿ ಹಾಕಿದ್ದಾರೆ. ಆಕೆಯನ್ನು ಬಿಡುಗಡೆ ಮಾಡಿಸಿ ಎಂದು ಆಕೆಯ ಮಹಿಳಾ ಸಂಗಾತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಪೀಠ, ‘ಸ್ವಇಚ್ಛೆಗೆ ವಿರುದ್ಧವಾಗಿ ಕೂಡಿ ಹಾಕುವುದು ಸರಿಯಲ್ಲ. ‘ಕುಟುಂಬ’ ಎಂಬ ಪದಗುಚ್ಛವನ್ನು ವಿಸ್ತೃತ ಅರ್ಥದಲ್ಲಿ ಅರ್ಥಮಾಡಿಕೊಳ್ಳಬೇಕು. ಸಲಿಂಗ ದಂಪತಿಗಳ ನಡುವಿನ ವಿವಾಹ ಕಾನೂನು ಬದ್ಧ ಅಲ್ಲದಿದ್ದರೂ, ಅವರು ಕುಟುಂಬವನ್ನು ರಚಿಸಬಹುದು. ಕುಟುಂಬವನ್ನು ಸ್ಥಾಪಿಸಲು ಮದುವೆಯೇ ಏಕೈಕ ಮಾರ್ಗವಲ್ಲ’ ಎಂದು ಹೇಳಿತು.

ಪ್ರವಾದಿ ನಿಂದನೆ ಕೇಸ್: ಶರ್ಮಿಷ್ಠಾ ಪನೋಲಿಗೆ ಮಧ್ಯಂತರ ಜಾಮೀನು

ಕೋಲ್ಕತಾ: ಆಪರೇಷನ್‌ ಸಿಂದೂರದ ವೇಳೆ ಪಾಕ್‌ ಅನ್ನು ಟೀಕಿಸುವ ಭರದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿ, ಸಾಮಾಜಿಕ ಜಾಲತಾಣ ಪ್ರಭಾವಿ ಶರ್ಮಿಷ್ಠಾ ಪನೋಲಿಗೆ ಕಲ್ಕತ್ತಾ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.ಆಪರೇಷನ್ ಸಿಂದೂರಕ್ಕೆ ಸಂಬಂಧಿಸಿದ ವಿಡಿಯೋದಲ್ಲಿ ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪನೋಲಿಯನ್ನು ಮೇ 30ರಂದು ಹರ್ಯಾಣದ ಗುರುಗ್ರಾಮ್‌ನಲ್ಲಿ ಕೋಲ್ಕತಾ ಪೊಲೀಸರು ಬಂಧಿಸಿದ್ದರು. ಆ ಬಳಿಕ ಅವರನ್ನು ಜೂ.13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.ಶರ್ಮಿಷ್ಠಾ ಕ್ಷಮೆ ಕೇಳಿದ ಬಳಿಕವೂ ಬಂಧನ ಆಗಿತ್ತು. ಇದನ್ನು ಪರಿಗಣಿಸಿದ ಕೋಲ್ಕತಾ ಹೈಕೋರ್ಟ್‌ನ ನ್ಯಾ. ರಾಜಾ ಬಸು ಚೌಧರಿ. ಇದೀಗ 10,000 ರು. ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದ್ದಾರೆ. ಆಕೆಯ ಬಂಧನ ಕೇವಲ ತಾಂತ್ರಿಕವಾಗಿದೆ ಎಂದು ಟೀಕಿಸಿದ್ದಾರೆ.

ಇ-ಕಾಮರ್ಸ್‌ ಕಂಪನಿ ಮೇಲೆ ಕೇಂದ್ರದಿಂದ ಮೊಕದ್ದಮೆ ಸಾಧ್ಯತೆ

ನವದೆಹಲಿ: ಪ್ರಮಾಣೀಕರಿಸದ ಉತ್ಪನ್ನ ಮಾರಿದ್ದಕ್ಕಾಗಿ ಇ-ಕಾಮರ್ಸ್ ದೈತ್ಯ ಕಂಪನಿಗಳ ವಿರುದ್ಧ ಕೇಂದ್ರ ಸರ್ಕಾರ ಮೊಕದ್ದಮೆ ಹೂಡಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಿಂಟ್ರಾ, ಮೀಶೋ, ಬಿಗ್‌ಬಾಸ್ಕೆಟ್, ಅಮೆಜಾನ್, ಫ್ಲಿಪ್‌ಕಾರ್ಟ್‌ನಂಥ ಕಂಪನಿಗಳು ಕಾನೂನು ಕ್ರಮ ಎದುರಿಸುವ ಸಾಧ್ಯತೆಯಿದೆ. ಈ ವೇದಿಕೆಗಳಲ್ಲಿ ತಾನು ಪ್ರಮಾಣೀಕರಿಸದ ಉತ್ಪನ್ನ ಮಾರಲಾಗುತ್ತಿದೆ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಥವಾ ಬಿಐಎಸ್ ಕಂಡುಕೊಂಡ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಈ ಕಂಪನಿಗಳ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸಾವಿರಾರು ಅಕ್ರಮ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ.

Read more Articles on