ನವದೆಹಲಿ: ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ನಡೆದ ರೈಲು ಅಪಘಾತಗಳಿಗೆ, ರೈಲಿನ ಚಾಲಕರಿಗೆ ಸೂಕ್ತ ವಿಶ್ರಾಂತಿ ನೀಡದೇ ಇರುವುದೇ ಕಾರಣ ಎಂದು ದೂರಿರುವ ದಕ್ಷಿಣ ಭಾರತದ ರೈಲ್ವೆ ಚಾಲಕರ ಸಂಘದ ಅಧ್ಯಕ್ಷ ಕುಮಾರೇಶನ್, ಈ ಕುರಿತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಗಮನ ಸೆಳೆದಿದ್ದಾಗಿ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ರಾಹುಲ್ ಗಾಂಧಿ ಅವರು ರೈಲ್ವೆ ಚಾಲಕರನ್ನು ಭೇಟಿ ಮಾಡಿ ಅವರ ಕಷ್ಟ-ಸುಖ ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರೇಶನ್, ‘ರೈಲ್ವೆ ಚಾಲಕರು ಅದರಲ್ಲೂ ಗೂಡ್ಸ್ ರೈಲಿನ ಚಾಲಕರು ದಿನಕ್ಕೆ 14-16 ಗಂಟೆ ಕೆಲಸ ಮಾಡುವ ಅನಿವಾರ್ಯತೆ ಇದೆ.
ಒಮ್ಮೊಮ್ಮೆ ಸತತ 4 ರಾತ್ರಿ ಕೆಲಸ ಮಾಡಬೇಕಾಗಿ ಬರುತ್ತದೆ. ಚಾಲಕರಿಗೆ 3-4 ದಿನಗಳಿಗೆ ಒಮ್ಮೆ ಮನೆಗೆ ಹೋಗುವ ಅವಕಾಶ ಸಿಗುತ್ತದೆ. ಇದೆಲ್ಲರ ಹೊರತಾಗಿಯೂ ಅವರಿಗೆ ವಾರಕ್ಕೆ ಒಂದು ರಜೆ ನೀಡುವ ಬದಲು 10 ದಿನಗಳಿಗೆ ಒಂದು ರಜೆ ನೀಡಲಾಗುತ್ತಿದೆ’ ಎಂದು ದೂರಿದರು.
‘ನಿಯಮಗಳ ಅನ್ವಯ ಚಾಲಕರಿಗೆ ವಾರಕ್ಕೆ 40-64 ಗಂಟೆಗಳ ವಿಶ್ರಾಂತಿ ನೀಡಬೇಕು. ಆದರೆ ಅವರಿಗೆ 30 ತಾಸು ಮಾತ್ರವೇ ನೀಡಲಾಗುತ್ತಿದೆ. ರೈಲ್ವೆಯಲ್ಲಿ ವೀಕ್ಲಿ ರೆಸ್ಟ್ ಬದಲು ಪೀರಿಯಾಡಿಕ್ ರೆಸ್ಟ್ ಎಂಬ ನಿಯಮ ಇದೆ.
ಇದರನ್ವಯ ಕರ್ತವ್ಯದ ಒತ್ತಡದಿಂದ ನಿವಾರಣೆಗೆ 16 ತಾಸು ವಿಶ್ರಾಂತಿ ನೀಡಲಾಗುತ್ತದೆ. ಅದಾದ ಬಳಿಕ ಸತತ 30 ತಾಸು ವಿಶ್ರಾಂತಿ ನೀಡಿದರೆ ಮಾತ್ರವೇ ಚಾಲಕರು ಪೂರ್ಣ ವಿಶ್ರಾಂತಿ ಪಡೆಯಲು ಸಾಧ್ಯ. ಆದರೆ ಈ 30 ತಾಸಿನ ವಿಶ್ರಾಂತಿ ನೀಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಸೂಕ್ತಿ ವಿಶ್ರಾಂತಿ ಸಿಗದ ಚಾಲಕರು ಅಪಘಾತದ ಘಟನೆಗಳಿಗೆ ಕಾರಣರಾಗುತ್ತಿದ್ದಾರೆ’ ಎಂದು ಕುಮಾರೇಷನ್ ಹೇಳಿದ್ದಾರೆ.