ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ12 ಮಕ್ಕಳು ಸೇರಿ 24 ಜನ ಸಾವು
70 ಜನರ ಸ್ಥಿತಿ ಗಂಭೀರ । ತನಿಖೆಗೆ ಸಮಿತಿ ರಚನೆ ನಾಂದೇಡ್: ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 12 ನವಜಾತ ಶಿಶುಗಳು ಸೇರಿ 24 ಜನರು ಸಾವನ್ನಪ್ಪಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಏಕಾಏಕಿ ಇಷ್ಟು ಸಾವಿಗೆ ಏನು ಕಾರಣ ಎಂದು ತಿಳಿದುಬಂದಿಲ್ಲ. ಇಲ್ಲಿನ ಶಂಕರ್ ರಾವ್ ಚವ್ಹಾಣ್ ಸರ್ಕಾರಿ ಆಸ್ಪತ್ರೆ 500 ಬೆಡ್ ಸಾಮರ್ಥ್ಯ ಹೊಂದಿದ್ದು ಹಾಲಿ 1200ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದಾರೆ. ಈ ಪೈಕಿ ಇನ್ನೂ 70 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಜಿಲ್ಲಾಡಳಿತ ಮೂವರ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಮೃತರದಲ್ಲಿ 12 ನವಜಾತ ಶಿಶುಗಳು, ಗರ್ಭಿಣಿಯರು, ಹಾವು ಕಚ್ಚಿ ಸಾವನ್ನಪ್ಪಿದವರು, ವಿಷಪ್ರಾಶನದಿಂದ ಸಾವನ್ನಪ್ಪಿದವರೂ ಕೂಡಾ ಸೇರಿದ್ಧಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧದ ಕೊರತೆ ಇದ್ದು, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಔಷಧಗಳು ತಲುಪುತ್ತಿಲ್ಲ. ವೈದ್ಯಕೀಯ ಸಿಬ್ಬಂದಿಯ ಕೊರತೆಯೂ ಕಾಡುತ್ತಿದೆ. ಹೀಗಾಗಿ ದುರ್ಘಟನೆ ಸಂಭವಿಸಿದೆ ಎಂದು ಹೆಸರು ಹೇಳಬಯಸದ ಅಧಿಕಾರಿಗಳು ತಿಳಿಸಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.