ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್‌ ದೀಪಾವಳಿ ಔತಣದಲ್ಲಿ ಮಾಂಸಾಹಾರ, ಮದ್ಯ : ಹಿಂದೂಗಳ ಆಕ್ರೋಶ

KannadaprabhaNewsNetwork |  
Published : Nov 11, 2024, 12:59 AM ISTUpdated : Nov 11, 2024, 04:57 AM IST
ಬ್ರಿಟನ್ ದೀಪಾವಳಿ ವಿವಾದ | Kannada Prabha

ಸಾರಾಂಶ

ದೀಪಾವಳಿ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್‌ ಹಿಂದೂಗಳಿಗೆ ಆಯೋಜಿಸಿದ್ದ ಔತಣಕೂಟ ಇದೀಗ ವಿವಾದಕ್ಕೆ ಕಾರಣವಾಗಿದೆ. ಔತಣಕೂಟದಲ್ಲಿ ಮಾಂಸಾಹಾರ ಮತ್ತು ಮದ್ಯ ಪೂರೈಸಿದ್ದನ್ನು ಹಿಂದೂಗಳು ವಿರೋಧಿಸಿದ್ದಾರೆ.

ಲಂಡನ್: ದೀಪಾವಳಿ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್‌ ಹಿಂದೂಗಳಿಗೆ ಆಯೋಜಿಸಿದ್ದ ಔತಣಕೂಟ ಇದೀಗ ವಿವಾದಕ್ಕೆ ಕಾರಣವಾಗಿದೆ. ಔತಣಕೂಟದಲ್ಲಿ ಮಾಂಸಾಹಾರ ಮತ್ತು ಮದ್ಯ ಪೂರೈಸಿದ್ದನ್ನು ಹಿಂದೂಗಳು ವಿರೋಧಿಸಿದ್ದಾರೆ. 

ಪ್ರಧಾನಿಗಳ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಹಿಂದೂಗಳಿಗಾಗಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಅದರಂತೆ ಕೀರ್‌ ಕೂಡ ಈ ವರ್ಷ ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಕುರಿ ಕಬಾಬ್‌, ಬಿಯರ್‌, ವೈನ್‌ ಸೇರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷ ಬ್ರಿಟನ್ ಪ್ರಧಾನಿಯಾಗಿದ್ದ ರಿಷಿ ಸುನಾಕ್ ಕೂಡ ದೀಪಾವಳಿ ಪಾರ್ಟಿ ಆಯೋಜಿಸಿದ್ದರು. ಆದರೆ ಆ ಮೆನುವಿನಲ್ಲಿ ಯಾವುದೇ ಮಾಂಸಾಹಾರ ಇರಲಿಲ್ಲ.

ಭಾರತದಿಂದ ಹಸೀನಾ ಗಡಿಪಾರಿಗೆ ಬಾಂಗ್ಲಾ ಇಂಟರ್‌ಪೋಲ್‌ಗೆ ಮನವಿ

ಢಾಕಾ: ಸದ್ಯ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಗಡಿಪಾರು ಸಂಬಂಧ ಇಂಟರ್‌ಪೋಲ್‌ಗೆ ಮನವಿ ಮಾಡಲು ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಹೇಳಿದೆ. ಮೀಸಲಾತಿ ವಿರೋಧಿ ದಂಗೆಯ ವೇಳೆ ವಿದ್ಯಾರ್ಥಿಗಳನ್ನು ಕ್ರೂರವಾಗಿ ಹತ್ತಿಕ್ಕಿ ಮಾನವೀಯತೆಯ ವಿರುದ್ಧ ಅಪರಾಧವೆಸಗಿ ನರಮೇಧಕ್ಕೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ಹಸೀನಾ ಹಾಗೂ ಅವರ ಪಕ್ಷದ ನಾಯಕರ ವಿರುದ್ಧ 60ಕ್ಕೂ ಅಧಿಕ ದೂರುಗಳು ದಾಖಲಾಗಿದ್ದು, ಅವುಗಳ ವಿಚಾರಣೆಗೆ ಅವರನ್ನು ಹಾಜರುಪಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಯೋಧ ಸಾವು

ಜಮ್ಮು: ಜಮ್ಮು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ಉಗ್ರರು ಮತ್ತು ಸೇನೆಯ ನಡುವೆ ಭಾನುವಾರ ನಡೆದ ಗುಂಡಿನ ಚಕಮಕಿ ವೇಳೆ ಜೂನಿಯರ್‌ ಕಮೀಷನ್ಡ್‌ ಆಫೀಸರ್‌ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರೆ ಮೂವರು ಯೋಧರು ಗಾಯಗೊಂಡಿದ್ದಾರೆ.ಇತ್ತೀಚೆಗೆ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಯನ್ನು ಹತ್ಯೆಗೈದ ಉಗ್ರರು ಅರಣ್ಯದಲ್ಲಿ ಅಡಗಿರುವ ಮಾಹಿತಿ ಅನ್ವಯ ಸೇನೆ ಕಾರ್ಯಾಚರಣೆ ನಡೆಸಿದ ವೇಳೆ, ಎರಡೂ ಬಣಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಸುಬೇದಾರ್‌ ರಾಕೇಶ್‌ ಕುಮಾರ್‌ ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ಸ್ಥಳದಲ್ಲಿ 3- 4 ಉಗ್ರರು ಸಿಕ್ಕಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮಿಳು ಚಿತ್ರರಂಗದ ಹಿರಿಯ ನಟ ದೆಹಲಿ ಗಣೇಶ್‌ ನಿಧನ

ಚೆನ್ನೈ: ತಮಿಳು ಚಿತ್ರರಂಗದಲ್ಲಿ 400 ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ದೆಹಲಿ ಗಣೇಶ್‌(80) ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ತಿರುನೆಲ್ವೇಲಿ ಮೂಲದ ಗಣೇಶ್‌ 1960ರ ದಶಕದಲ್ಲಿ ದೆಹಲಿಯ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಆರಂಭಿಸಿದ್ದರು. ಚಿತ್ರರಂಗಕ್ಕೂ ಬರುವ ಮುನ್ನ ಒಂದು ದಶಕ ಐಎಎಫ್‌ನ ನಾಗರಿಕ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ ಸಿನಿಮಾ ರಂಗದಲ್ಲಿ ಸಕ್ರಿಯರಾದರು. ತಮಿಳು ಮಾತ್ರವಲ್ಲದೇ ತೆಲುಗು ಸೇರಿದಂತೆ ಇತರ ಕೆಲ ಭಾಷೆಗಳ ಸಿನಿಮಾದಲ್ಲಿಯೂ ನಟಿಸಿದ್ದರು. ಜೊತೆಗೆ ಧಾರವಾಹಿಗಳಲ್ಲಿಯೂ ಅಭಿನಯಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ ಡೀಲ್‌ನಲ್ಲಿ ಭಾರತದ ಕೃಷಿ, ಡೈರಿಗೆ ರಕ್ಷಣೆ
₹55 ಲಕ್ಷದ ಚಿನ್ನ ಮರಳಿ ನೀಡಿದ ಸ್ಚಚ್ಛತಾ ಸಿಬ್ಬಂದಿ ಕರೆಸಿ ರಜನಿ ಸನ್ಮಾನ!