ಆಟ ಆಡುವಾಗ ಮಗುವಿಗೆ ಗಾಯ : ಫೆವಿಕ್ವಿಕ್‌ ಹಾಕಿ ಅಂಟಿಸಿದ ಧೂರ್ತ ವೈದ್ಯ

KannadaprabhaNewsNetwork |  
Published : Nov 21, 2025, 03:15 AM IST
Baby

ಸಾರಾಂಶ

ಆಟವಾಡುವ ವೇಳೆ ಪೆಟ್ಟು ಮಾಡಿಕೊಂಡಿದ್ದ ಎರಡೂವರೆ ವರ್ಷದ ಮಗುವಿನ ಗಾಯಕ್ಕೆ ವೈದ್ಯರೊಬ್ಬರು ‘ಫೆವಿಕ್ವಿಕ್‌’ ಹಾಕಿ ಅಂಟಿಸಿದ ಅಜಾಗರೂಕ ಘಟನೆ ನಡೆದಿದೆ. ಮೇಜಿನ ತುದಿ ತಾಗಿದ್ದರಿಂದ ಕಂದನ ಎಡಗಣ್ಣಿನ ಮೇಲೆ ಗಾಯವಾಗಿತ್ತು.

ಮೇರಠ್‌ : ಆಟವಾಡುವ ವೇಳೆ ಪೆಟ್ಟು ಮಾಡಿಕೊಂಡಿದ್ದ ಎರಡೂವರೆ ವರ್ಷದ ಮಗುವಿನ ಗಾಯಕ್ಕೆ ವೈದ್ಯರೊಬ್ಬರು ‘ಫೆವಿಕ್ವಿಕ್‌’ ಹಾಕಿ ಅಂಟಿಸಿದ ಅಜಾಗರೂಕ ಘಟನೆ ನಡೆದಿದೆ. ಮೇಜಿನ ತುದಿ ತಾಗಿದ್ದರಿಂದ ಕಂದನ ಎಡಗಣ್ಣಿನ ಮೇಲೆ ಗಾಯವಾಗಿತ್ತು. 

ಕೂಡಲೇ ಪೋಷಕರು ಆತನನ್ನು ಭಾಗ್ಯಶ್ರೀ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿದ್ದ ವೈದ್ಯರು ಗಾಯ ಸ್ವಚ್ಛಗೊಳಿಸಿ ಹೊಲಿಗೆ ಹಾಕುವ ಬದಲು, ತಂದೆ ಜಸ್ಪಿಂದರ್‌ರಿಂದ ಫೆವಿಕ್ವಿಕ್‌ ತರಿಸಿ ಗಾಯಕ್ಕೆ ಹಾಕಿ ಅಂಟಿಸಿದ್ದಾರೆ. 

ಉರಿ ತಾಳಲಾರದೆ ಆ ಮಗು ರಾತ್ರಿಯಿಡೀ ಅತ್ತಿದ್ದರಿಂದ ಮರುದಿನ ಪೋಷಕರು ಬೇರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು 3 ತಾಸು ಚಿಕಿತ್ಸೆ ನಡೆಸಿ, ಅಂಟಿನಿಂದ ಕಟ್ಟಿದ್ದ ಗಡ್ಡೆ ತೆಗೆದು, ಹೊಲಿಗೆ ಹಾಕಿದ್ದಾರೆ. ಈ ಬಗ್ಗೆ ಸಿಂಗ್‌ ದೂರಿತ್ತಿದ್ದಾರೆ.

ಮತಪಟ್ಟಿ ಪರಿಷ್ಕರಣೆ ನಿಲ್ಲಿಸಿ: ಆಯೋಕ್ಕೆ ಸಿಎಂ ಮಮತಾ ಪತ್ರ

ಕೋಲ್ಕತಾ: ರಾಜ್ಯದಲ್ಲಿ ಆರಂಭಿಸಿರುವ ಮತಪಟ್ಟಿ ವಿಶೇಷ ಪರಿಷ್ಕರಣೆ ಸ್ಥಗಿತ ಕೋರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಇಡೀ ಪ್ರಕ್ರಿಯೆ ಗೊಂದಲಕಾರಿ ಮತ್ತು ಬಲವಂತದ ಕೆಲಸವಾಗಿದೆ. ಹೀಗಾಗಿ ಕೂಡಲೇ ಇದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ. ಈ ನಡುವೆ ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯ ಅಶೋಕ್‌ ಸರ್ದಾರ್‌ (63) ಎಂಬ ವ್ಯಕ್ತಿ ರೈಲ್ವೆ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ಮತಪಟ್ಟಿಯಲ್ಲಿ ತನ್ನ ಹೆಸರು ಇರದಿದ್ದನ್ನು ಕಂಡು ಆತ ಆತಂಕಕ್ಕೆ ಒಳಗಾಗಿದ್ದ’ ಎಂದು ಕುಟುಂಬಸ್ಥರು ಆಪಾದಿಸಿದ್ದಾರೆ. ಬುಧವಾರವಷ್ಟೆ ರಾಜ್ಯದ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು.

ಅನಿಲ್‌ ಅಂಬಾನಿಯ ಇನ್ನೂ ₹1400 ಕೋಟಿ ಮೌಲ್ಯದ ಆಸ್ತಿ ಇ.ಡಿಯಿಂದ ಜಪ್ತಿ

ನವದೆಹಲಿ: ಬಹುಕೋಟಿ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಉದ್ಯಮಿ ಅನಿಲ್‌ ಅಂಬಾನಿಗೆ ಸೇರಿದ ಇನ್ನೂ 1400 ಕೋಟಿ ರು.ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ದೇಶಾದ್ಯಂತ ಅನಿಲ್‌ ಸೇರಿಗೆ ಆಸ್ತಿಗಳ ಮೇಲೆ ದಾಳಿ ನಡೆಸಿದ್ದ ಇ.ಡಿ ಈ ಹಿಂದೆ 7500 ಕೋಟಿ ರು. ಮೌಲ್ಯದ ಆಸ್ತಿಯನ್ನು ಇ.ಡಿ. ವಶಪಡಿಸಿಕೊಂಡಿತ್ತು. ಕಂಪನಿಗೆ ಸಾಲ ಪಡೆದು ಅದನ್ನು ಅಕ್ರಮವಾಗಿ ಬೇರೆ ಉದ್ದೇಶಕ್ಕೆ ಬಳಸಿದ ಆರೋಪ ಅನಿಲ್ ಮೇಲಿದೆ.

ಬಿಜೆಪಿ ಉತ್ತಮವಾಗಿದ್ದರೆ ನಮ್ಮ ಪಕ್ಷದಲ್ಲೇಕ್ಕಿದ್ದೀರಿ: ತರೂರ್‌ಗೆ ಕಾಂಗ್ರೆಸ್‌ ಪ್ರಶ್ನೆ

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಉಪನ್ಯಾಸವನ್ನು ಹೊಗಳಿದ ಪಕ್ಷದ ಸಂಸದ ಶಶಿ ತರೂರ್‌ ವಿರುದ್ಧ ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಬುಧವಾರ ಎಕ್ಸ್‌ನಲ್ಲಿ ಬೇಸರ ಹೊರಹಾಕಿರುವ ಕಾಂಗ್ರೆಸ್‌ನ ಸಂದೀಪ್‌ ದೀಕ್ಷಿತ್‌, ‘ತರೂರ್‌ಗೆ ಬಿಜೆಪಿಯಲ್ಲಿ ಕಾರ್ಯತಂತ್ರ ಉತ್ತಮ ಎನಿಸಿದರೆ ಅವರು ಕಾಂಗ್ರೆಸ್‌ನಲ್ಲೇಕಿದ್ದಾರೆ?. ಯಾರಾದರೂ ಕಾಂಗ್ರೆಸ್‌ ನೀತಿಗಳ ವಿರುದ್ಧವಾಗಿ ದೇಶಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ ಎನಿಸಿದರೆ ನೀವು ಅವರ ನೀತಿಗಳನ್ನೇ ಪಾಲಿಸಬೇಕು. ನೀವೇಕೆ ಕಾಂಗ್ರೆಸ್‌ನಲ್ಲಿದ್ದೀರಿ? ನೀವು ಸಂಸದರಾಗಿರುವ ಕಾರಣಕ್ಕೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಬೆಂಗ್ಳೂರಿಂದ ಕೇರಳಕ್ಕೆ ತೆರಳುತ್ತಿದ್ದ ಕಾರಿನಲ್ಲಿ ₹3 ಕೋಟಿ ನಗದು ಪತ್ತೆ

ವಯನಾಡು: ಬೆಂಗಳೂರಿನಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 3.15 ಕೋಟಿ ರು. ನಗದನ್ನು ಇಲ್ಲಿನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸಾಗಿಸುತ್ತಿದ್ದವನ್ನು ವಶಕ್ಕೆ ಪಡೆದಿದ್ದಾರೆ. ಕೆಲ ತಿಂಗಳಿನಿಂದ ನಿಷೇಧಿತ ವಸ್ತುಗಳ ಸಾಗಣೆ ಪ್ರಕರಣದಲ್ಲಿ ರಾಡಾರ್‌ನಲ್ಲಿದ್ದ ಕಾರು ಬೆಂಗಳೂರಿನಿಂದ ನಗದು ತರುತ್ತಿರುವ ಬಗ್ಗೆ ಕೇರಳದ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿದೆ. ಗುರುವಾರ ನುಸುಕಿನ ವೇಳ ಕರ್ನಾಟಕ-ಕೇರಳ ಗಡಿ ವಯನಾಡು ಜಿಲ್ಲೆಯ ಮನಂತವಾಡಿ ಎಂಬಲ್ಲಿ ಕಾರನ್ನು ತಡೆದಿದ್ದಾರೆ. ಈ ವೇಳೆ ರಬ್ಬರ್‌ ಲೇಪಿತ ಕಬ್ಬಿಣದ ಬಾಕ್ಸ್‌ಗಳಲ್ಲಿದ್ದ 630 ಕಂತೆ ನಗದು ಪತ್ತೆಯಾಗಿದೆ.ತಕ್ಷಣವೇ ಅದರಲ್ಲಿದ್ದ ಕೇರಳ ಮೂಲದ ಮೂವರನ್ನು ಪೊಲೀಸರು ವಶಕ್ಕೆ ಪಡೆದು, ನಗದು ವಡಕ್ಕರ ಮೂಲದವನಿಂದ ಬಂದಿದೆ ಎಂಬ ವಿಷಯ ಪಡೆದುಕೊಂಡಿದ್ದಾರೆ. ಈ ಸಂಬಂಧ ಇನ್ನು ಹೆಚ್ಚಿನ ತನಿಖೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ