ಫಿರೋಜಾಬಾದ್: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಪ್ರಯಾಣಿಸುತ್ತಿದ್ದ ಶತಾಬ್ಧಿ ಎಕ್ಸ್ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿ ಕಲ್ಲುತೂರಾಟ ನಡೆಸಿರುವ ಘಟನೆ ಉತ್ತರಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದೆ. ಲಖನೌನಿಂದ ದೆಹಲಿಗೆ ಹೋಗುತ್ತಿದ್ದ ಶತಾಬ್ಧಿ ರೈಲಿಗೆ ಗುರುವಾರ ಸಂಜೆ 7.45ರ ಸುಮಾರಿಗೆ ಇಲ್ಲಿನ ಪೆಮೇಶ್ವರ ಗೇಟ್ ಸೇತುವೆ ಬಳಿ ರೈಲಿನ ಒಂದು ಬೋಗಿಯ ಮೇಲೆ ಕಲ್ಲೆಸಲಾಗಿದೆ. ಇದೇ ರೈಲಿನಲ್ಲಿ ಮೋಹನ್ ಭಾಗ್ವತ್ ಅವರು ಎ1 ಕೋಚ್ನಲ್ಲಿ ಪ್ರಯಾಣಿಸುತ್ತಿದ್ದರು.
ದಿಲ್ಲಿಯಲ್ಲಿ ಮತ್ತೆ ಅಗ್ನಿ ಅನಾಹುತ: ಒಂದೇ ಕುಟುಂಬದ 3 ಬಲಿ
ನವದೆಹಲಿ: 21 ಜನರನ್ನು ಬಲಿ ಪಡೆದ ಹೋಟೆಲ್ ಅಗ್ನಿ ಅವಘಡದ ಬೆನ್ನಲ್ಲೇ ದೆಹಲಿಯಲ್ಲಿ ಮತ್ತೊಂದು ಅಗ್ನಿ ಆಕಸ್ಮಿಕ ಸಂಭವಿಸಿದೆ. ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಗೋವಿಂದಪುರಿ ಪ್ರದೇಶದಲ್ಲಿ 5 ಅಂತಸ್ತಿನ ಕಟ್ಟಡದಲ್ಲಿ ದುರ್ಘಟನೆ ಸಂಭವಿಸಿದೆ. ಕಟ್ಟಡದ ನೆಲ ಮಹಡಿಯಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕೀಟ್ ಘಟನೆಗೆ ಕಾರಣ ಎನ್ನಲಾಗಿದೆ. ಈ ನಡುವೆ ಸರಣಿ ಅಗ್ನಿ ಅನಾಹುತ ಬೆನ್ನಲ್ಲೇ ಸಣ್ಣ ಮತ್ತು ಮಧ್ಯಮ ಗಾತ್ರದ ಬಹುಮಹಡಿ ಕಟ್ಟಡಗಳಿಗೂ ಹೊಗೆ ಪತ್ತೆ ಉಪಕರಣ ಮತ್ತು ಅಗ್ನಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಕೃಷ್ಣಮೃಗ ಬೇಟೆ ಚಿತ್ರಕ್ಕೆ ತಡೆ: ಸಲ್ಮಾನ್ ದೂರು ಆಧರಿಸಿ ನೋಟಿಸ್ ಜಾರಿ
ನವದೆಹಲಿ: ನಟ ಸಲ್ಮಾನ್ ಖಾನ್ಗೆ ಆರೋಪಿಯಾಗಿರುವ ಕೃಷ್ಣಮೃಗ ಬೇಟೆ ಪ್ರಕರಣ ಆಧರಿತ ಎನ್ನಲಾದ ‘ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೀಗಲ್’ ಚಿತ್ರದ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಈ ಚಿತ್ರ ಬಿಡುಗಡೆಯಾದರೆ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತದೆ. ಹೀಗಾಗಿ ಬಿಡುಗಡೆಗೆ ತಡೆ ನೀಡಬೇಕೆಂದು ಸಲ್ಮಾನ್ಖಾನ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಭಿಪ್ರಾಯ ಕೇಳಿ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಿದ ಕೋರ್ಟ್, ವಿಚಾರಣೆಯನ್ನು ಜೂ.19ಕ್ಕೆ ಮುಂದೂಡಿದೆ.
ಯುದ್ಧ ಸ್ಥಗಿತದ ಖುಷಿಗೆ ಸೆನ್ಸೆಕ್ಸ್ 1695 ಅಂಕ ಜಿಗಿತ: 75527ಕ್ಕೆ ಅಂತ್ಯ
ಮುಂಬೈ: ಅಮೆರಿಕ- ಇರಾನ್ ಒಪ್ಪಂದ ಸನ್ನಿಹಿತ ಕುರಿತ ಸಿಹಿ ಸುದ್ದಿ ಬೆನ್ನಲ್ಲೇ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರ 1695 ಅಂಕಗಳ ಏರಿಕೆ ಕಂಡು 75527ರಲ್ಲಿ ಅಂತ್ಯವಾಗಿದೆ. ನಿಫ್ಟಿ ಕೂಡಾ 461 ಅಂಕ ಏರಿಕೆ ಕಂಡು 23645ರಲ್ಲಿ ಮುಕ್ತಾಯವಾಗಿದೆ. ಶುಕ್ರವಾರದ ವಹಿವಾಟು ಮುಕ್ತಾಯಕ್ಕೆ 30 ನಿಮಿಷ ಮೊದಲು ಯುದ್ಧ ಸ್ಥಗಿತದ ಕುರಿತು ಇರಾನ್ನಿಂದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸೆನ್ಸೆಕ್ಸ್ ಒಮ್ಮೆಗೆ 800 ಅಂಕಗಳ ಏರಿಕೆ ಕಂಡಿತು. ಶುಕ್ರವಾರದ ಷೇರುಪೇಟೆ ಏರಿಕೆ ಪರಿಣಾಮ ಹೂಡಿಕೆದಾರರಿಗೆ 9.66 ಲಕ್ಷ ಕೋಟಿ ರು.ಲಾಭವಾಗಿದೆ.
ಅಮೆರಿಕ-ಇರಾನ್ ಡೀಲ್ ಸಂಭವ: ಚಿನ್ನ ₹2940, ಬೆಳ್ಳಿ ₹10,000 ಏರಿಕೆ
ನವದೆಹಲಿ: ಇರಾನ್ - ಅಮೆರಿಕ ಯುದ್ಧ ಸ್ಥಗಿತದ ಸುದ್ದಿ ಬೆನ್ನಲ್ಲೇ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 2,940 ರು. ಏರಿಕೆಯಾಗಿ 1,48,580 ರು.ಗೆ ತಲುಪಿದ್ದರೆ, 22 ಕ್ಯಾರಟ್ನ ಚಿನ್ನದ ಬೆಲೆ 2,700 ರು. ಏರಿ 1,36,200 ರು.ಗೆ ತಲುಪಿದೆ. 1 ಕೆ.ಜಿ. ಬೆಳ್ಳಿ ದರ 10,000 ರು. ಏರಿ 2,60,000 ರು.ಕ್ಕೆ ತಲುಪಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 3,000 ರು. ಏರಿ 1,56,000 ಲಕ್ಷ ರು., 1 ಕೆ.ಜಿ. ಬೆಳ್ಳಿ ಬೆಲೆ 10,000 ರು. ಏರಿ 2,55,000 ರು. ಆಗಿದೆ.