ವಿವಾಹಿತ ಸ್ತ್ರೀಯರು ಸಮಾರಂಭಕ್ಕೆಧರಿಸುವ ಚಿನ್ನಕ್ಕೆ ಈ ಊರಲ್ಲಿ ಮಿತಿ

KannadaprabhaNewsNetwork |  
Published : Oct 29, 2025, 01:15 AM IST
ಆಭರಣ  | Kannada Prabha

ಸಾರಾಂಶ

ಉತ್ತರಾಖಂಡದ ಕಂಧಾರ್‌ ಎಂಬ ಗ್ರಾಮದಲ್ಲಿ, ಆಭರಣಪ್ರಿಯ ಸ್ತ್ರೀಯರು ಶುಭಸಮಾರಂಭಗಳಲ್ಲಿ ಧರಿಸುವ ಚಿನ್ನಾಭರಣಗಳಿಗೆ ಮಿತಿ ಹೇರಲಾಗಿದೆ.

ಹೆಚ್ಚು ವೆಚ್ಚ ಮತ್ತು ಆಡಂಬರ ತಗ್ಗಿಸಲು ಕ್ರಮ

ಮೂಗುತಿ, ಓಲೆ, ಮಾಂಗಲ್ಯಕ್ಕಷ್ಟೇ ಅವಕಾಶ

ನಿಯಮ ಉಲ್ಲಂಘಿಸಿದರೆ 50000 ರು. ದಂಡ

ಡೆಹ್ರಾಡೂನ್‌: ಉತ್ತರಾಖಂಡದ ಕಂಧಾರ್‌ ಎಂಬ ಗ್ರಾಮದಲ್ಲಿ, ಆಭರಣಪ್ರಿಯ ಸ್ತ್ರೀಯರು ಶುಭಸಮಾರಂಭಗಳಲ್ಲಿ ಧರಿಸುವ ಚಿನ್ನಾಭರಣಗಳಿಗೆ ಮಿತಿ ಹೇರಲಾಗಿದೆ. ಆಭರಣ ಖರೀದಿಗೆಂದು ಅಧಿಕ ವೆಚ್ಚ ಮಾಡಿ ಜನ ಸಾಲಗಾರರಾಗುವುದನ್ನು ತಪ್ಪಿಸಲು ಹಾಗೂ ಸಮಾಜದಲ್ಲಿ ಸಮಾನತೆ ತರಲು ಈ ಹೊಸ ನಿಯಮವನ್ನು ರೂಪಿಸಲಾಗಿದ್ದು, ಇದನ್ನು ಉಲ್ಲಂಘಿಸುವವರಿಗೆ ಭಾರೀ ಮೊತ್ತದ ದಂಡವನ್ನೂ ನಿಗದಿಪಡಿಸಲಾಗಿದೆ.

ಬಡ ಪರಿವಾರಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಸಮುದಾಯ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ನಿಯಮದ ಅನುಸಾರ, ಮದುವೆ ಹಾಗೂ ಇತರೆ ಶುಭಕಾರ್ಯಗಳಿಗೆ ಹಾಜರಾಗುವ ವಿವಾಹಿತ ಹೆಂಗಳೆಯರು ಕೇವಲ 3 ಬಗೆಯ ಆಭರಣ ತೊಡಬಹುದಾಗಿದೆ. ಅವುಗಳು ಮೂಗುತಿ, ಕಿವಿಯೋಲೆ, ಮಾಂಗಲ್ಯ ಸರ. ಉಳಿದೆಲ್ಲಾ ಆಡಂಬರದ ಆಭರಣ ನಿರ್ಬಂಧಿಸಲಾಗಿದೆ. ಒಂದೊಮ್ಮೆ ಈ ನಿಯಮವನ್ನು ಉಲ್ಲಂಘಿಸಿದರೆ, ಅಂಥವರ ಮೇಲೆ 50,000 ರು. ದಂಡ ವಿಧಿಸಲಾಗುವುದು.

ಉದ್ದೇಶವೇನು?:

ಮದುವೆಯಂತಹ ಸಮಾರಂಭಗಳು ಪವಿತ್ರ ಆಚರಣೆಗಳೇ ಹೊರತು ತೋರಿಕೆಗಾಗಿ ಮಾಡುವ ಆಡಂಬರವಲ್ಲ ಎಂಬುದು ಗ್ರಾಮಸ್ಥರ ನಿಲುವು. ಅನ್ಯರನ್ನು ನೋಡಿಕೊಂಡು, ಅವರನ್ನು ಮೀರಿಸುವಂತೆ ಮಿಂಚುವ ಸ್ತ್ರೀಸಹಜ ಹಂಬಲದಿಂದ ಪರಿವಾರಕ್ಕೆ ಆರ್ಥಿಕ ಹೊರೆಯಾಗುತ್ತದೆ. ಜತೆಗೆ ಇದರಿಂದ ಸಮಾಜದಲ್ಲಿ ಜನರ ನಡುವಿನ ಅಂತರವೂ ಹೆಚ್ಚುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಈ ನಿಯಮ ರೂಪಿಸಲಾಗಿದೆ. ಈ ಮೂಲಕ ಕಂಧಾರ್‌ ಗ್ರಾಮಸ್ಥರು ಹೊಸ ರೀತಿಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎವರೆಸ್ಟ್‌, ಲಾಲ್ಜೀ ಇಂಗು ಮಾರಾಟಕ್ಕೆ ನಿರ್ಬಂಧ
ಭಾರತದಲ್ಲಿ ಮುಸ್ಲಿಮರೇ ಇರಬಾರದು ಎನ್ನುವ ವ್ಯಕ್ತಿ ಹಿಂದೂ ಅಲ್ಲ: ಭಾಗ್ವವತ್‌