ನವದೆಹಲಿ: ಭಾನುವಾರ ಸಂಸತ್ ಭವನದ ಸಂಕೀರ್ಣದಲ್ಲಿ ‘ಪ್ರೇರಣಾ ಸ್ಥಳ’ವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಉದ್ಘಾಟಿಸಿದರು. ದೇಶದ ಎಲ್ಲ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಒಂದೇ ಸ್ಥಳದಲ್ಲಿ ಇಲ್ಲಿ ಸ್ಥಾಪಿಸಲಾಗಿದೆ.ಇತ್ತೀಚೆಗೆ ಹಳೆಯ ಸಂಸತ್ ಭವನದಿಂದ ಹೊಸ ಭವನಕ್ಕೆ ಸಂಸತ್ತು ಸ್ಥಳಾಂತರವಾಗಿದೆ. ಸಂಸತ್ ಭವನದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲು, ಲೋಕಸಭೆಯ ಸಚಿವಾಲಯವು ಸಂಸತ್ ಭವನದ ಸಂಕೀರ್ಣದಲ್ಲಿ ‘ಪ್ರೇರಣಾ ಸ್ಥಳ’ವನ್ನು ನಿರ್ಮಿಸಿದೆ.
ಸ್ಥಳ ಉದ್ಘಾಟಿಸಿ ಮಾತನಾಡಿದ ಧನಕರ್, ‘ಪ್ರೇರಣಾ ಸ್ಥಳ' ಕ್ಕೆ ಬರುವ ಮೂಲಕ ನಾನು ಸ್ಫೂರ್ತಿ ಪಡೆದಿದ್ದೇನೆ.ಈ ಸ್ಥಳವು ಎಲ್ಲಾ ಭಾರತೀಯರಿಗೆ ಧಾರ್ಮಿಕ ಸ್ಥಳಕ್ಕಿಂತ ಕಡಿಮೆಯಿಲ್ಲ. ಮಹಾನ್ ನಾಯಕರನ್ನು ಭೇಟಿ ಮಾಡುವುದರಿಂದ ಅದು ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಇದರ ಸಂದರ್ಶಕರಿಗೆ ಇದು ಇದು ಪ್ರೇರಕ ಮತ್ತು ಸ್ಪೂರ್ತಿದಾಯಕವಾಗಿದೆ. ಹೀಗಾಗಿಯೇ ಇದಕ್ಕೆಪ್ರೇರಣಾ ಸ್ಥಳ ಎಂದು ಹೆಸರಿಡಲಾಗಿದೆ’ ಎಂದರು.
ಒಂದೇ ಸ್ಥಳದಲ್ಲಿ ಪ್ರತಿಮೆಗಳು: ಮಹಾತ್ಮಾ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾರಾಣಾ ಪ್ರತಾಪ್, ಕಿತ್ತೂರು ರಾಣಿ ಚೆನ್ನಮ್ಮ, ಜಗಜ್ಯೋತಿ ಬಸವೇಶ್ವರರು, ಛತ್ರಪತಿ ಶಿವಾಜಿ ಪ್ರತಿಮೆ ಸೇರಿದಂತೆ ನಾವು ಎಲ್ಲಾ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಒಂದೇ ಸ್ಥಳದಲ್ಲಿ ತರಲಾಗಿದೆ. ಈವರೆಗೂ ಇವು ಬೇರೆ ಬೇರೆ ಸ್ಥಳಗಳಲ್ಲಿ ಇದ್ದವು.ಈ ಬಗ್ಗೆ ಹೇಳಿಕೆ ನೀಡಿದ ಹಿಂದಿನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ‘ಈ ಸ್ಥಳಕ್ಕೆ ಭೇಟಿ ನೀಡಿ,ಮುಂಬರುವ ಪೀಳಿಗೆಯು ಇತಿಹಾಸದಲ್ಲಿ ಈ ಎಲ್ಲಾ ಮಹಾನ್ ವ್ಯಕ್ತಿಗಳು ಮಾಡಿದ ತ್ಯಾಗ, ಹೋರಾಟ ಮತ್ತು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳ ಬಗ್ಗೆ ತಿಳಿದುಕೊಳ್ಳಬಹುದು’ ಎಂದರು.
ಕಾಂಗ್ರೆಸ್ ಕಿಡಿ : ಮಹಾತ್ಮಾ ಗಾಂಧಿ ಸೇರಿ ಹಲವು ಮಹಾಮಹಿಮರ ಪ್ರತಿಮೆಯನ್ನು ಪ್ರೇರಣಾ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತೆ ವಿರೋಧಿಸಿದ್ದಾರೆ. ಗಾಂಧಿ ಪ್ರತಿಮೆಯು ಪ್ರತಿಭಟನಾ ಸ್ಥಳವಾಗಿತ್ತು. ಹೀಗಾಗಿ ವಿಪಕ್ಷಗಳಿಗೆ ಪ್ರತಿಭಟನೆಗೆ ಜಾಗ ಸಿಗಬಾರದೆಂದು ಸರ್ಕಾರವು ಪ್ರತಿಮೆ ಸ್ಥಳಾಂತರಿಸಿದೆ ಎಂದಿದ್ದಾರೆ.