ನವದೆಹಲಿ: ಸಿಂಗೂರ್ನಲ್ಲಿ ಟಾಟಾ ನ್ಯಾನೋ ಘಟಕ ಆರಂಭಕ್ಕೆ ಅನುಮತಿ ನೀಡಿ, ಕಾಮಗಾರಿ ಆರಂಭವಾದ ಬಳಿಕ ಅದನ್ನು ಮುಚ್ಚಿಸಿದ್ದ ಪಶ್ಚಿಮ ಬಂಗಾಳ ಸರ್ಕಾರಕ್ಕೆ 766 ಕೋಟಿ ರು. ದಂಡ ವಿಧಿಸಲಾಗಿದೆ. ಈ ದಂಡದ ಹಣವನ್ನು ಟಾಟಾ ಸಂಸ್ಥೆಗೆ ನೀಡುವಂತೆ ಮಧ್ಯಸ್ಥಿಕೆ ನ್ಯಾಯಾಲಯ ಸೂಚಿಸಿದೆ. ಹಿಂದೆ ಸಿಪಿಎಂ ಸರ್ಕಾರ ಇದ್ದ ವೇಳೆ ನ್ಯಾನೋ ಘಟಕಕ್ಕೆ ಅನುಮತಿ ನೀಡಿತ್ತು. ಆದರೆ ಕೃಷಿ ಸಮೃದ್ಧ ಭೂಮಿಯಲ್ಲಿ ಜಾಗ ನೀಡಿದ್ದನ್ನು ಮಮತಾ ಬ್ಯಾನರ್ಜಿ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಹೀಗಾಗಿ ಅದಾಗಲೇ 1000 ಕೋಟಿ ರು. ಹೂಡಿಕೆ ಮಾಡಿ ಘಟಕದ ಕಾಮಗಾರಿ ಆರಂಭಿಸಿದ್ದ ಟಾಟಾ ಕಂಪನಿ, ಸಿಂಗೂರ್ ಘಟಕ ಮುಚ್ಚಿ ಅದನ್ನು ಗುಜರಾತ್ಗೆ ವರ್ಗಾಯಿಸಿತ್ತು. ಈ ಬಗ್ಗೆ ಟಾಟಾ ಸಮೂಹದ ನ್ಯಾಯಾಧಿಕರಣದ ಮೊರೆ ಹೋಗಿತ್ತು. ನ್ಯಾಯಾಧಿಕರಣ ಇದೀಗ 2016ರಿಂದ ಅನ್ವಯವಾಗುವಂತೆ ಶೇ.11ರಷ್ಟು ಬಡ್ಡಿಯೊಂದಿಗೆ 766 ಕೋಟಿ ರು. ಹಣ ಪಾವತಿಸುವಂತೆ ಸೂಚಿಸಿದೆ.