ಲಖನೌ: ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರ ಉತ್ತರಾಧಿಕಾರಿಯೆಂದೇ ಬಿಂಬಿತರಾಗಿದ್ದ, ಅವರ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದ ಮಾಯಾವತಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಪಕ್ಷದಲ್ಲಿನ ಬಿನ್ನಮತ ದೊಡ್ಡಮಟ್ಟದಲ್ಲಿ ಸ್ಫೋಟಗೊಂಡಿದೆ.
ಅಕಾಶ್ ಬದಲಿಗೆ ರಾಜ್ಯಸಭಾ ಸಂಸದ ರಾಮ್ಜಿ ಗೌತಮ್ ಹಾಗೂ ತಮ್ಮ ಕಿರಿಯ ಸಹೋದರ ಆನಂದ್ ಕುಮಾರ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದಾರೆ. ಆಕಾಶ್ ಆನಂದ್ ಅವರನ್ನು ತಮ್ಮ ಜವಾಬ್ದಾರಿಗಳಿಂದ ವಜಾಗೊಳಿಸುತ್ತಿರುವುದು ಇದು 2ನೇ ಬಾರಿ. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಮೊದಲ ಬಾರಿಗೆ ಅವರನ್ನು ವಜಾಗೊಳಿಸಲಾಗಿತ್ತು. ಬಳಿಕ ಜುಲೈನಲ್ಲಿ ಮರುನೇಮಕ ಮಾಡಿ ರಾಜಕೀಯ ನೇತೃತ್ವ ವಹಿಸಿದ್ದರು. ಇದೀಗ ಮತ್ತೆ ಸಂಬಂಧದಲ್ಲಿ ಬಿರುಕು ಮೂಡಿದ್ದು, ತಾವು ಬದುಕಿರುವವರೆಗೂ ಪಕ್ಷದಲ್ಲಿ ಯಾರೂ ತಮ್ಮ ಉತ್ತರಾಧಿಕಾರಿಯಾಗುವುದಿಲ್ಲ ಎಂದು ಮಾಯಾವತಿ ಘೋಷಿಸಿದ್ದಾರೆ.