ಕೊಪ್ಪಳದ ಚಾರ್ಟರ್ಡ್ ಅಕೌಂಟೆಂಟ್ ಸಂಜಯಗೆ ಪ್ರಶಂಸೆಯ ಮಹಾಪೂರರೋಣ:ನೀಟ್ ಪರೀಕ್ಷೆಯಲ್ಲಿ 556 ಅಂಕ ಪಡೆದು ಚಿಕ್ಕಮಗಳೂರ ಸರ್ಕಾರಿ ಎಂ.ಬಿ.ಬಿ.ಎಸ್ ಕಾಲೇಜಿನಲ್ಲಿ ವೈದ್ಯಕೀಯ ಸೀಟ್ ಪಡೆದ ರೋಣ ಪಟ್ಟಣದ ಬಡ ವಿದ್ಯಾರ್ಥಿ ಗವಿಸಿದ್ದಪ್ಪ ಗದಗಿನಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕೊಪ್ಪಳ ಪಟ್ಟಣದ ಚಾರ್ಟರ್ಡ್ ಅಕೌಂಟೆಂಟ್ ಸಂಜಯ ವಿರೂಪಾಕ್ಷಪ್ಪ ಕೊತಬಾಳ ಅವರು ₹ 60 ಸಾವಿರ ಆರ್ಥಿಕ ನೆರವು ನೀಡಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ವಿದ್ಯಾರ್ಥಿ ಗವಿಸಿದ್ದಪ್ಪ ಗದಗಿನ ಅವರ ತಂದೆ ಬಸವರಾಜ ಗದಗಿನ ಅವರು ನಿತ್ಯ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದು, ಮಗನ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಕಷ್ಟ ಪಟ್ಟು ಕಲಿಕೆಗೆ ಅನುಕೂಲ ಮಾಡುತ್ತಾ ಬಂದಿದ್ದಾರೆ. ತಂದೆಯ ಆಸೆಯಂತೆ ಮಗ ಗವಿಸಿದ್ದಪ್ಪ ತೀವ್ರ ಪರಿಶ್ರಮ ಪಟ್ಟು ಎಂಬಿಬಿಎಸ್ ಸೀಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಮಗನಿಗೆ ಉನ್ನತ ಶಿಕ್ಷಣಕ್ಕೆ ಕಳುಹಿಸಲು ತಂದೆಗೆ ಆರ್ಥಿಕ ಸಂಕಷ್ಟ ಎದುರಾಯಿತು. ಇದರಿಂದ ತೀವ್ರ ಚಿಂತಾಕ್ರಾಂತರಾಗಿದ್ದರು. ಈ ಮಧ್ಯೆ ಮಗನಿಗೆ ಎಂಬಿಬಿಎಸ್. ಸೀಟ್ ಲಭಿಸಿದ ನಿಮಿತ್ತ ಮಗ ಗವಿಸಿದ್ದಪ್ಪನೊಂದಿಗೆ ಕೊಪ್ಪಳದ ಗವಿಮಠಕ್ಕೆ ಶ್ರೀಗಳ ದರ್ಶನಕ್ಕೆಂದು ತೆರಳಿದರು. ಈ ಸಂದರ್ಭದಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದ ಪಡೆದು, ತಮಗೆ ಎದುರಾದ ಸಂಕಷ್ಟವನ್ನು ಶ್ರೀಗಳ ಬಳಿ ಹೇಳತೊಡಗಿದ್ದರು. ಅದೇ ಸಂದರ್ಭದಲ್ಲಿ ಆಕಸ್ಮಾತಾಗಿ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದ ಕೊಪ್ಪಳ ಪಟ್ಟಣದ ಚಾರ್ಟರ್ಡ್ ಅಕೌಂಟೆಂಟ್ ಸಂಜಯ ಕೊತಬಾಳ ಅವರಿಗೆ ವಿದ್ಯಾರ್ಥಿಯ ಕುಟುಂಬದ ಎದುರಿಸುತ್ತಿರುವ ಸಂಕಷ್ಟ ತಿಳಿಯುತ್ತದೆ. ತಕ್ಷಣವೇ ಶ್ರೀಗಳ ಎದುರಲ್ಲಿಯೇ ಸಂಜಯ ಕೊತಬಾಳ ಅವರು, ವಿದ್ಯಾರ್ಥಿ ಗವಿಸಿದ್ದಪ್ಪ ಗದಗಿನ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ವಾಗ್ದಾನ ಮಾಡಿದರು. ಅದರಂತೆ ₹ 60 ಸಾವಿರ ರು.ಗಳ ಚೆಕ್ನ್ನು ನೀಡಿದ್ದಲ್ಲದೇ, ಇನ್ನೂ ಏನಾದರೂ ಹಣದ ಅವಶ್ಯಕತೆ ಇದ್ದಲ್ಲಿ ಕೊಡುವುದಾಗಿ ಭರವಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.