ಚೆನ್ನೈ : ‘ಕಾವೇರಿ ವಿಚಾರವಾಗಿ ಧನಾತ್ಮಕ ಚಿಂತನೆಯೊಂದಿಗೆ ನಾನೇ ಕರ್ನಾಟಕದ ಜತೆಗೆ ಮಾತುಕತೆ ಪ್ರಸ್ತಾಪ ಮುಂದಿಟ್ಟಿದ್ದೆ’ ಎಂದು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಹೇಳಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ರದ್ದಾದ ಮಾತುಕತೆ
ಕರ್ನಾಟಕದ ಜತೆಗಿನ ಮಾತುಕತೆ ಪ್ರತಿಭಟನೆ ಹಿನ್ನೆಲೆಯಲ್ಲಿ ರದ್ದಾದ ವಿಚಾರಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಅಧಿವೇಶನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾವೇರಿ ವಿಚಾರದಲ್ಲಿ ನಾನು ಕೀಳು ರಾಜಕೀಯ ಮಾಡಲು ಬಯಸಲ್ಲ. ತಮಿಳುನಾಡು ಜನರಿಗಾಗಿ ನಾನು ಯಾವುದೇ ಅವಮಾನ ಎದುರಿಸಲು ಸಿದ್ಧ’ ಎಂದು ತಿಳಿಸಿದರು.
ಅಧಿವೇಶನದಲ್ಲಿ ಕಾವೇರಿ ವಿಚಾರ ಪ್ರಸ್ತಾಪಿಸಿದ ಸ್ಟಾಲಿನ್
ಅಧಿವೇಶನದಲ್ಲಿ ಕಾವೇರಿ ವಿಚಾರ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾವೇರಿ ವಿಚಾರದಲ್ಲಿ 1969ರಿಂದ ಈವರೆಗೆ ತಮಿಳುನಾಡು ಸರ್ಕಾರಗಳು ಮಾತುಕತೆಯಿಂದ ಹಿಡಿದು ಕಾನೂನು ಹೋರಾಟ ನಡೆಸಿದವರೆಗಿನ ಘಟನಾವಳಿಗಳನ್ನು ಪ್ರಸ್ತಾಪಿಸಿದರು.
ನಮ್ಮ ಸರ್ಕಾರವು ಕಾವೇರಿ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಬದ್ಧವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇದೇ ವೇಳೆ ಸದನಕ್ಕೆ ಸ್ಪಷ್ಟಪಡಿಸಿದರು.
ಪ್ರತಿಪಕ್ಷದ ಮಾಜಿ ನಾಯಕ, ದಿ. ಕಾಂಗ್ರೆಸ್ ಮುಖಂಡ ಪಿ.ಜಿ. ಕರುತಿರುಮನ್ ಅವರ, ‘ಕಾವೇರಿ ವಿಚಾರವನ್ನು ಜಾಗರೂಕತೆಯಿಂದ ನಿಭಾಯಿಸಬೇಕು’ ಎಂಬ ಹೇಳಿಕೆಯನ್ನು ಇದೇ ವೇಳೆ ಪ್ರಸ್ತಾಪಿಸಿದ ಅವರು, ‘ನಾನು ಧನಾತ್ಮಕ ಚಿಂತನೆಯೊಂದಿಗೆ ಕಾವೇರಿ ವಿಚಾರದ ಕುರಿತು ಮಾತನಾಡಲು ಕರ್ನಾಟಕದ ಜತೆಗೆ ಮಾತುಕತೆಗೆ ಮುಂದಾಗಿದ್ದೆ. ಪರಸ್ಪರ ವೈರಿ ರಾಷ್ಟ್ರಗಳು ಕೂಡ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಪ್ರಯತ್ನಿಸುತ್ತವೆ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
