ಕಾಶ್ಮೀರ ಘಟನೆ ಖಂಡಿಸಿ ವಿಹಿಂಜಾವೇ, ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Apr 25, 2025 11:53 PM

ಸಾರಾಂಶ

ಉಗ್ರರು ಎಲ್ಲೆ ಅವಿತುಕೊಂಡಿದ್ದರೂ ಸಹ ಬಿಡದೆ ಪ್ರತೀಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ. ಇಂತಹ ನೀಚ ಕೃತ್ಯಕ್ಕೆ ದೇಶದಲ್ಲಿ ಮುಸ್ಲಿಮರು, ಹಿಂದೂಗಳ ಜೊತೆ ನಿಂತು ಜಾತಿ ಭೇದವಿಲ್ಲದೆ ಖಂಡಿಸಬೇಕು, ಭಾರತದಲ್ಲಿ ವಾಸಿಸುವ ಎಲ್ಲ ಧರ್ಮಿಯರೂ ಭಾರತೀಯರೇ. ಅವರೆಲ್ಲರೂ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸಲು ಭಾರತದ ಸರ್ಕಾರದ ಜೊತೆ ಕೈಜೋಡಿಸಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕಾಶ್ಮೀರದ ಪಹಲ್ಗಾಂನಲ್ಲಿ ೨೬ ಪ್ರವಾಸಿಗರ ಮೇಲೆ ಪಾಕಿಸ್ತಾನಿ ಉಗ್ರರು ದಾಳಿ ನಡೆಸಿ ಗುಂಡಿಕ್ಕಿ ಕೊಂದಿರುವುದನ್ನು ಖಂಡಿಸಿ ವಿಶ್ವ ಹಿಂದೂ ಜಾಗರಣೆ ವೇದಿಕೆ ಹಾಗೂ ಬಿಜೆಪಿವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. .ಪಟ್ಟಣದ ಕುವೆಂಪು ವೃತ್ತದಲ್ಲಿ ಗುರುವಾರ ರಾತ್ರಿ ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದವರಿಗೆ ಮೇಣದ ಬತ್ತಿ ಬೆಳಗಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.

ಶೀಘ್ರದಲ್ಲೇ ಪ್ರತ್ಯುತ್ತರ

ನಂತರ ಮಾತನಾಡಿದ ಮಾಜಿ ಸಂಸದ ಎಸ್.ಮುನಿಸ್ವಾಮಿ, ಪ್ರವಾಸಕ್ಕೆಂದು ಹೋಗಿದ್ದವರ ಮೇಲೆ ಉಗ್ರರು ದಾಳಿ ಮಾಡಿ ಕೊಂದಿರುವುದು ಇಡೀ ಪ್ರಪಂಚವೇ ತಲೆ ತಗ್ಗಿಸುವ ಕೃತ್ಯವಾಗಿದೆ. ಇಂತಹ ನೀಚ ಕೃತ್ಯ ಎಸಗಿರುವ ಪಾಕಿಸ್ತಾನದ ಉಗ್ರರಿಗೆ ಪ್ರಧಾನಿ ಮೋದಿ ಇಷ್ಟರಲ್ಲೆ ಯಾರೂ ಉಹಿಸಲಾಗದಂತಹ ಉತ್ತರ ನೀಡುವ ಮೂಲಕ ಹುತಾತ್ಮರಿಗೆ ನ್ಯಾಯಸಿಗುವಂತೆ ಮಾಡಿಯೇ ತೀರುವರು ಎಂದು ಹೇಳಿದರು.

ಉಗ್ರರು ಎಲ್ಲೆ ಅವಿತುಕೊಂಡಿದ್ದರೂ ಸಹ ಬಿಡದೆ ಪ್ರತೀಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ. ಇಂತಹ ನೀಚ ಕೃತ್ಯಕ್ಕೆ ದೇಶದಲ್ಲಿ ಮುಸ್ಲಿಮರು, ಹಿಂದೂಗಳ ಜೊತೆ ನಿಂತು ಜಾತಿ ಭೇದವಿಲ್ಲದೆ ಖಂಡಿಸಬೇಕು, ಭಾರತದಲ್ಲಿ ವಾಸಿಸುವ ಎಲ್ಲ ಧರ್ಮಿಯರೂ ಭಾರತೀಯರೇ. ಅವರೆಲ್ಲರೂ ಉಗ್ರ ಚಟುವಟಿಕೆಗಳನ್ನು ನಿಯಂತ್ರಿಸಲು ಭಾರತದ ಸರ್ಕಾರದ ಜೊತೆ ಕೈಜೋಡಿಸಬೇಕು, ದೇಶ ಉಳಿಯಬೇಕಾದರೆ ಎಲ್ಲರೂ ಒಂದಾಗಿದ್ದರೆ ಮಾತ್ರ ಸಾಧ್ಯ ಎಂದರು.

ಪಾಕ್‌ ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ

ರಾಜ್ಯದಲ್ಲಿರುವ ಕಾಂಗ್ರೆಸ್ ನಾಯಕರು ಪಾಕಿಸ್ತಾನಿ ಏಜೆಂಟರಂತೆ ವರ್ತಿಸುವುದನ್ನು ಇನ್ನಾದರೂ ನಿಲ್ಲಿಸಲಿ. ಭಾರತದ ದೇಶ ಸಹ ಎಲ್ಲಾ ರಂಗದಲ್ಲಿಯೂ ಬಲಿಷ್ಟವಾಗಿದೆ,ಉಗ್ರರ ಅಟ್ಟಹಾಸಕ್ಕೆ ಪ್ರಧಾನಿ ಮೋದಿ,ಗೃಹಮಂತ್ರಿ ಅಮಿತ್ ಶಾ ದಿಟ್ಟ ಕ್ರಮವಹಿಸುವರು ನಾವು ಅವರಿಗೆ ನೈತಿಕ ಬೆಂಬಲ ನೀಡಬೇಕೆಂದು ಹೇಳಿದರು. ಇದೇ ವೇಳೆ ಪಾಕಿಸ್ತಾನ್ ಧ್ವಜವನ್ನು ಸುಟ್ಟು ಆಕ್ರೋಶವ್ಯಕ್ತಪಡಿಸಿದರು.

ಈ ವೇಳೆ ಭಜರಂಗದಳ ಮುಖಂಡ ಬಿ.ಸಿ.ಶ್ರೀನಿವಾಸಮೂರ್ತಿ, ಮಹೇಶ್, ಕಿಶೋರ್ ರಾಮಮೂರ್ತಿ, ಪುರಸಭೆ ಸದಸ್ಯ ಕಪಾಲಿಶಂಕರ್, ಹನುಮಪ್ಪ, ಅಮರೇಶ್, ಶ್ರೀನಿವಾಸಗೌಡ, ಚಲಪತಿ, ಅಭಿಲಾಷ್ ಕಾರ್ತಿಕ್, ವಕೀಲ ವೇಣುಗೋಪಾಲ್, ಸುಕುಮಾರನ್ ಇತರರು ಇದ್ದರು.

Share this article