ಬರ ಪಟ್ಟಿಗೆ ಆಲೂರು: ಬ್ಲಾಕ್ ಕಾಂಗ್ರೆಸ್ ಸ್ವಾಗತ

KannadaprabhaNewsNetwork | Published : Oct 13, 2023 12:15 AM

ಸಾರಾಂಶ

ರಾಜ್ಯ ಸರ್ಕಾರ 2 ನೇ ಪಟ್ಟಿಯಲ್ಲಿ ಆಲೂರು ತಾಲೂಕನ್ನು ಸೇರಿಸಿರುವುದಕ್ಕೆ ಆಲೂರು ಬ್ಲಾಕ್ ಕಾಂಗ್ರೆಸ್ ಸಮಿತಿಯು ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿತು
ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 2ನೇ ಬರ ಪಟ್ಟಿಯಲ್ಲಿ ಆಲೂರು ಸ್ಥಾನ ಕನ್ನಡಪ್ರಭವಾರ್ತೆ ಆಲೂರು ಪ್ರಸ್ತುತ ವರ್ಷ ರಾಜ್ಯದಲ್ಲಿ ಮಳೆ ಕೊರತೆಯಿಂದ ಭೀಕರ ಬರಗಾಲ ಆವರಿಸಿದ್ದು ರಾಜ್ಯ ಸರ್ಕಾರವು ಈ ಮೊದಲು 190 ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಿ ಪಟ್ಟಿ ಪ್ರಕಟಿಸಿತ್ತು. ಆ ಪಟ್ಟಿಯಲ್ಲಿ ನಮ್ಮ ಆಲೂರು ತಾಲೂಕನ್ನು ಕೈಬಿಟ್ಟಿತ್ತು. ಆದರೆ ಮೊನ್ನೆ ಬಿಡುಗಡೆ ಮಾಡಿದ 2 ನೇ ಪಟ್ಟಿಯಲ್ಲಿ ಆಲೂರು ತಾಲೂಕನ್ನು ಸೇರಿಸಿರುವುದಕ್ಕೆ ಆಲೂರು ಬ್ಲಾಕ್ ಕಾಂಗ್ರೆಸ್ ಸಮಿತಿಯು ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿತು. ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್ ಶಿವಮೂರ್ತಿ ಮಾತನಾಡಿ, ಈ ವರ್ಷ ನಮ್ಮ ತಾಲೂಕಿನಲ್ಲಿಯೂ ಕೂಡ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿದ್ದರೂ ಕೂಡ ಬರ ತಾಲೂಕಿನ ಮೊದಲ ಪಟ್ಟಿಯಲ್ಲಿ ನಮ್ಮ ತಾಲೂಕನ್ನು ಕೈಬಿಟ್ಟ ಸರ್ಕಾರದ ಕ್ರಮವನ್ನು ನಮ್ಮದೇ ಸರ್ಕಾರವಿದ್ದರೂ ಕೂಡ ಅದರ ವಿರುದ್ಧ ಸುದ್ದಿಗೋಷ್ಠಿ ನೆಡೆಸಿ ಮಾಧ್ಯಮಗಳ ಮೂಲಕ ಆಕ್ಷೇಪ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ತಾಲೂಕನ್ನು ಬರ ಪಟ್ಟಿಗೆ ಸೇರಿಸುವಂತೆ ಅಗ್ರಹಿಸಿದ್ದೆವು. ನಮ್ಮ ಆಗ್ರಹವನ್ನು ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ತಲುಪಿಸಿದ್ದಕ್ಕೆ ಈ ಸಂದರ್ಭದಲ್ಲಿ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದರು. ನಮ್ಮ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮುರುಳಿಮೋಹನ್ ಈ ವಿಷಯವನ್ನು ಕಂದಾಯ ಸಚಿವರಿಗೆ, ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಗಮನಕ್ಕೆ ತಂದು ತಾಲೂಕಿನ ತಾಲೂಕಿನ ಬರ ಪರಿಸ್ಥಿತಿಯನ್ನು ಸವಿಸ್ತಾರವಾಗಿ ವಿವರಿಸಿ ನಮ್ಮ ತಾಲೂಕನ್ನು 2ನೇ ಪಟ್ಟಿಯಲ್ಲಿ ಬರ ಪಟ್ಟಿಗೆ ಸೇರಿರುವುದರಲ್ಲಿ ಅವರ ಪ್ರಯತ್ನ ಸಾಕಷ್ಟಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಾಂತಕೃಷ್ಣ ಮಾತನಾಡಿ, ಹಿಂದೆ ಮಾಧ್ಯಮಗಳ ಮೂಲಕವೇ ಆಲೂರು ತಾಲೂಕನ್ನ ಬರಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದೆವು. ಮಾಧ್ಯಮಗಳ ವರದಿಗಳನ್ನು ಆಧರಿಸಿ ಸರ್ಕಾರ ಎರಡನೇ ಪಟ್ಟಿಯಲ್ಲಿ ತಾಲೂಕನ್ನು ಬರಪಟ್ಟಿಗೆ ಸೇರಿಸಿರುವುದಕ್ಕೆ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಉಸ್ತುವಾರಿ ಸಚಿವರುಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ತಾಲೂಕು ಬರಪಟ್ಟಿಗೆ ಸೇರಿರುವುದರಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಸಲ್ಪವಾದರೂ ಪರಿಹಾರವನ್ನು ಸರ್ಕಾರ ನೀಡುತ್ತದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್ ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಅಜ್ಜೆನಹಳ್ಳಿ ರಂಗಯ್ಯ, ಜಿಲ್ಲಾ ಕಾರ್ಯದರ್ಶಿ ಬಿ.ಎಚ್ ಧರ್ಮಪ್ಪ,ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಎಂ.ಎಚ್ ರಂಗೇಗೌಡ, ಹಿಂದುಳಿದ ವರ್ಗಗಳ ಮುಖಂಡ ಬಿ.ವೈ ಶಿವೇಗೌಡ ಉಪಸ್ಥಿತರಿದ್ದರು.

Share this article