-ರಘುನಾಥಪುರ ಗ್ರಾಮಸ್ಥರಿಂದ ತಾಲೂಕು ಕಾನೂನು ಸೇವಾ ಸಮಿತಿಗೆ ರಕ್ಷಣೆಗಾಗಿ ಮನವಿಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರೇಮ್ ಕುಮಾರ್ ಅವರಿಗೆ ಗ್ರಾಮಸ್ಥರು ಮನವಿ ಪತ್ರ ನೀಡಿ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕು ರಘುನಾಥಪುರದಲ್ಲಿರುವ ಇಂಡೇನಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೆಮಿಕಲ್ ಪ್ಯಾಕ್ಟರಿಯ ವಿಷಕಾರಿ ಅನಿಲ ಬಿಡುಗಡೆ ಹಾಗೂ ಗ್ರಾಮದ ಹಳೆಯ ದೇವಸ್ಥಾನಗಳು, ನಕಾಶೆ ರಸ್ತೆ ಮತ್ತು ಸಿಹಿ ನೀರಿನ ಬಾವಿ ಕಣ್ಮರೆಯಾಗಿರುವ ಕುರಿತು ಗಮನಕ್ಕೆ ತಂದರು.
ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ತಮಗೆ ಆಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದರು. ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಗ್ರಾಮದ ಕೆಲವು ವ್ಯಕ್ತಿಗಳು ಹೇಳಿಕೆ ನೀಡಿದವರ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು.ಊಹಾಪೋಹ ಸುದ್ದಿಗಳನ್ನು ಹರಡುವ ಮೂಲಕ. ಗ್ರಾಮದಲ್ಲಿ ಗೊಂದಲದ ವಾತಾವರಣ ಉಂಟು ಮಾಡುತ್ತಿದ್ದಾರೆ, ಆದ್ದರಿಂದ ತಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರಲ್ಲದೆ, ಕಾರ್ಖಾನೆಯ ವಿಷಗಾಳಿ ಸೇವನೆಯಿಂದ ಗ್ರಾಮಸ್ಥರ ಆರೋಗ್ಯ ಹದಗೆಟ್ಟಿದ್ದು, ತಾಲೂಕು ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುವಂತೆ ಒತ್ತಾಯಿಸಿದರು. ಆರ್.ಎಂ.ಮಹಾದೇವ್, ಆರ್.ಎಂ.ಲಕ್ಷ್ಮೀಪತಿ, ಮುನಿರಾಜಪ್ಪ ಇತರರಿದ್ದರು.