ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ಹಿನ್ನೆಲೆ ಆತಂಕ

KannadaprabhaNewsNetwork |  
Published : Jul 30, 2026, 01:45 AM IST
ತಾಲೂಕಿನಾಧ್ಯಂತ ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ  ಪರಿಶೀಲನೆ | Kannada Prabha

ಸಾರಾಂಶ

ಬಿತ್ತನೆಮಾಡಿರುವ ಮೆಕ್ಕೆಜೋಳವು ಬಿಳಿ ಸುಳಿ ರೋಗಕ್ಕೆ ತುತ್ತಾಗಿ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿರುವುದರಿಂದ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ವರದಿಗಳು ನಿರಂತರವಾಗಿ ಬಿತ್ತರವಾಗಿದ್ದ ಹಿನ್ನೆಲೆಯಲ್ಲಿ ಬುಧವಾರ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ತಾಲೂಕಿನ ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಆಯ್ದ ಗ್ರಾಮಗಳಲ್ಲಿ ಮೆಕ್ಕೆಜೋಳವು ಬಿಳಿ ಸುಳಿ ರೋಗಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಕೃಷಿ ಅಧಿಕಾರಿಗಳಿಂದ ಹಾಗೂ ರೈತರಿಂದ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನಾಧ್ಯಂತ ರೈತರು ಬಿತ್ತನೆಮಾಡಿರುವ ಮೆಕ್ಕೆಜೋಳವು ಬಿಳಿ ಸುಳಿ ರೋಗಕ್ಕೆ ತುತ್ತಾಗಿ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿರುವುದರಿಂದ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ವರದಿಗಳು ನಿರಂತರವಾಗಿ ಬಿತ್ತರವಾಗಿದ್ದ ಹಿನ್ನೆಲೆಯಲ್ಲಿ ಬುಧವಾರ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ತಾಲೂಕಿನ ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಆಯ್ದ ಗ್ರಾಮಗಳಲ್ಲಿ ಮೆಕ್ಕೆಜೋಳವು ಬಿಳಿ ಸುಳಿ ರೋಗಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಕೃಷಿ ಅಧಿಕಾರಿಗಳಿಂದ ಹಾಗೂ ರೈತರಿಂದ ಮಾಹಿತಿ ಪಡೆದರು.

ನಂತರ ಮಾಧ್ಯಮದ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಮೆಕ್ಕೆಜೋಳವು ಕೂಡ ಒಂದಾಗಿದ್ದು ಜಿಲ್ಲೆಯಲ್ಲಿ ಶೇಕಡ 80ರಷ್ಟು ರೈತರು ಮೆಕ್ಕೆಜೋಳವನ್ನು ಬಿತ್ತನೆ ಮಾಡಿಕೊಂಡು ಬರುತ್ತಿದ್ದಾರೆ ಆದರೆ ಕಳೆದ ವರ್ಷದಿಂದ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡ ಬಿಳಿ ಸುಳಿ ರೋಗವು ಕೃಷಿ ಇಲಾಖೆಯ ಅಧಿಕಾರಿಗಳ ವರದಿಯಂತೆ ಶೇಕಡ 10ರಷ್ಟು ಕಂಡುಬಂದಿದ್ದು ಪ್ರಸ್ತುತ ವರ್ಷ ಇದರ ಪ್ರಮಾಣ ಕೆಲವು ಕಡೆ 80ರಷ್ಟು ಇನ್ನೂ ಕೆಲವು ಕಡೆ 100ರಷ್ಟು ಕಂಡುಬಂದಿದ್ದು ಮೆಕ್ಕೆಜೋಳವನ್ನ ಬಿತ್ತನೆ ಮಾಡಿದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದು ವಾಸ್ತವ ಎಂಬುದು ನಮಗೆ ಕಂಡು ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಜೋಳವನ್ನು ಜಾನುವಾರುಗಳಿಗೂ ಕೂಡ ಬಳಸದ ಪರಿಸ್ಥಿತಿ ಎದುರಾಗಿದ್ದು, ಈ ಸಂಬಂಧ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಜಂಟಿ ತಂಡವನ್ನ ರಚಿಸಲಾಗಿದ್ದು ಈ ಬಗ್ಗೆ ಪರಿಶೀಲನೆ ಮಾಡಿ ನಮಗೆ ವರದಿಯನ್ನ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ. ‘ ಕಡ್ಡಾಯವಾಗಿ ಈ ವರ್ಷ ಪ್ರತಿಯೊಬ್ಬ ರೈತರು ಬೆಳೆ ವಿಮೆ ನೋಂದಾಯಿಸಿಕೊಳ್ಳಿ ’ ರೈತರಲ್ಲೇ ಒಂದು ಮನವಿಯನ್ನ ಮಾಡುತ್ತೇವೆ. ಪ್ರಸ್ತುತ ವರ್ಷದಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಆಲೂರು ತಾಲೂಕಿನಲ್ಲಿಯೂ ಕೂಡ ವಾಡಿಕೆ ಗಿಂತ ಅತ್ಯಂತ ಕಡಿಮೆ ಮಳೆ ಆಗಿರುವ ಬಗ್ಗೆ ಮಾಹಿತಿ ಲಭ್ಯವಿದ್ದು ಪ್ರತಿಯೊಬ್ಬ ರೈತರು ಕೂಡ ಈ ವರ್ಷ ತಪ್ಪದೇ ಬೆಳೆ ವಿಮೆಯನ್ನ ನೊಂದಾಯಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದರು.

‘ಬಿಳಿ ಸುಳಿ ರೋಗದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ’ ಈಗಾಗಲೇ ರೈತರು ಕಳೆದ ಬಾರಿ ಬಿಳಿ ಸುಳಿಯ ರೋಗದ ಪ್ರಮಾಣ ಕಡಿಮೆ ಇತ್ತು ಎಂಬ ಉದ್ದೇಶದಿಂದ ಈ ಬಾರಿ ಈ ರೋಗ ಬರುವುದಿಲ್ಲ ಎಂಬ ಆಶಾಭಾವನೆಯಲ್ಲಿ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದಾರೆ ಆದರೆ ಬಿತ್ತನೆ ಮಾಡಿರುವ ಮೆಕ್ಕೆಜೋಳವು ಸಂಪೂರ್ಣ ಬಿಳಿ ಸುಳಿ ರೋಗಕ್ಕೆ ತುತ್ತಾಗಿರುವುದರಿಂದ ನಮ್ಮ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ವಾಸ್ತವಾಂಶವನ್ನು ಒಳಗೊಂಡಂತಹ ಪಾರದರ್ಶಕವಾದ ವರದಿಯನ್ನ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಸ್ಥಳೀಯ ರೈತ ಕದಾಳು ಲೋಕೇಶ್ ಮಾತನಾಡಿ ನಮ್ಮ ತಾಲೂಕಿನಲ್ಲಿ ರೈತರು ಬಿತ್ತನೆ ಮಾಡಿರುವ ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗವು ಬಂದಿರುವುದರಿಂದ ಬೆಳೆಯ ವೀಕ್ಷಣೆಗೆ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳು ಇಂದು ಭೇಟಿ ನೀಡಿದ್ದು ರೈತರಲ್ಲಿ ಒಂದು ಆಶಾಭಾವನೆ ಮೂಡಿದೆ ಕಾರಣ ಜಿಲ್ಲಾಧಿಕಾರಿಗಳೇ ಖುದ್ದು ಬಿಳಿ ಸುಳಿ ರೋಗದ ಬಗ್ಗೆ ಕೃಷಿ ಅಧಿಕಾರಿಗಳೊಂದಿಗೆ ರೈತರ ಜಮೀನುಗಳಿಗೆ ಭೇಟಿ ನೀಡಿರುವುದರಿಂದ ರೈತರ ಸಂಕಷ್ಟ ಅವರಿಗೆ ಅರ್ಥವಾಗಿದೆ. ದಯಮಾಡಿ ಜಿಲ್ಲಾಧಿಕಾರಿಗಳು ರೈತರ ಹಿತ ಚಿಂತನೆಯ ದೃಷ್ಟಿಯಿಂದ ಜೋಳದ ಬೆಳೆಯಲ್ಲಿ ಆಗಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ಒಂದು ಉತ್ತಮವಾದ ವರದಿಯನ್ನ ನೀಡುವ ಮೂಲಕ ರೈತರಿಗೆ ಬೆಳೆ ಪರಿಹಾರವನ್ನು ಅಥವಾ ವಿಮೆಯನ್ನ ಕೊಡಿಸುವ ನಿಟ್ಟಿನಲ್ಲಿ ರೈತರ ನೆರವಿಗೆ ಧಾವಿಸಬೇಕು ಹಾಗೂ ಸರ್ಕಾರವು ರೈತರ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಆಲೂರು ತಾಲೂಕನ್ನ ಬರಪೀಡಿತ ತಾಲೋಕು ಎಂದು ಘೋಷಣೆ ಮಾಡಬೇಕೆಂದು ಒತ್ತಾಯ ಮಾಡಿದರು .

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಎಚ್. ಮಲ್ಲಿಕಾರ್ಜುನ್, ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್‌, ಜಿಲ್ಲಾ ಕೃಷಿ ಉಪ ನಿರ್ದೇಶಕ ಪ್ರಭಾಕರ್,ಸಹಾಯಕ ಕೃಷಿ ನಿರ್ದೇಶಕ ಮನು, ರಾಜ್ಯಸ್ವ ನಿರೀಕ್ಷಕ ಗೋವಿಂದರಾಜು, ಗ್ರಾಮ ಲೆಕ್ಕಿಗ ಸಂಜೀವ್ ಚೌಹಾಣ್, ಲೋಕೇಶ್ ಸೇರಿದಂತೆ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡತನ ಮೀರಿ ನೀಟ್‌ ಪರೀಕ್ಷೆಯಲ್ಲಿ ಸಾಧನೆಗೈದ ಕುಮಾರಸ್ವಾಮಿ
ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ ಚನ್ನಪಟ್ಟಣದಲ್ಲಿ ಪ್ರತಿಭಟನೆ