ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿ ಬದುಕು

KannadaprabhaNewsNetwork | Published : Feb 25, 2024 1:48 AM

ಸಾರಾಂಶ

ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿ ಸಾಮಾನ್ಯ ಜನರು ಬದುಕುವುದು ಕಷ್ಟವಾಗಿದ್ದನ್ನು ಅರಿತು ಮುಖ್ಯಮಂತ್ರಿಗಳು ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಕೇಂದ್ರದ ಬೆಲೆ ಏರಿಕೆ ನೀತಿಯಿಂದ ನಿತ್ಯ ಜೀವನ ನಡೆಸಲು ಪರದಾಡುತ್ತಿದ್ದ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನೆಮ್ಮದಿಯ ಬದುಕು ನೀಡಿವೆ ಎಂದು ವಿಧಾನಸಭೆಯ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಶನಿವಾರ ತಾಲೂಕಿನ ಸುರೇಬಾನದಲ್ಲಿ ಹೋಬಳಿ ಮಟ್ಟದ ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಇದು ನುಡಿದಂತೆ ನಡೆದ ರಾಜ್ಯ ಸರ್ಕಾರ ತನ್ನ ಬದ್ದತೆ ತೋರಿಸಿದೆ ಎಂದರು.

ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿ ಸಾಮಾನ್ಯ ಜನರು ಬದುಕುವುದು ಕಷ್ಟವಾಗಿದ್ದನ್ನು ಅರಿತು ಮುಖ್ಯಮಂತ್ರಿಗಳು ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದರು. ರಾಮದುರ್ಗ ತಾಲೂಕಿನಲ್ಲಿ 53662 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಸುಮಾರು ₹10 ಕೋಟಿ ವಿವಿಧ ಫಲಾನುಭವಿಗಳ ಕೈ ಸೇರುತ್ತಿದೆ. ಇದು ಅವರ ನಿತ್ಯಜೀವನಕ್ಕೆ ಸಹಕಾರಿಯಾಗಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ತಾಲೂಕಿನ 61304 ಪಡಿತರ ಚೀಟಿದಾರರಿಗೆ ಈ ವರೆಗೆ ₹20 ಕೋಟಿಗೂ ಅಧಿಕ ಹಣ ಬಿಡಗಡೆಯಾಗಿದೆ. ಗೃಹಜ್ಯೋತಿ ಯೋಜನೆಯಡಿ 61139 ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ತಾಲೂಕಿನ 65,55439 ಮಹಿಳೆಯರು ಪ್ರಯಾಣ ಮಾಡಿದ್ದು ಇದಕ್ಕಾಗಿ ₹15 ಕೋಟಿ ಅನುದಾನ ನೀಡಲಾಗಿದೆ. ಮತ್ತು ನಿರುದ್ಯೋಗಿ ಯುವಕರಿಗೆ ಯುವನಿಧಿ ನೀಡುವ ಯೋಜನೆಯಲ್ಲಿ ತಾಲೂಕಿನಿಂದ 638 ಫಲಾನುಭವಿಗಳು ನೋಂದಣಿ ಮಾಡಿದ್ದು ಈ ಪೈಕಿ 48 ಜನರಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.

ಸಮಾವೇಶದಲ್ಲಿ ಸಿಡಿಪಿಒ ಶಂಕರ ಕುಂಬಾರ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಕಿರಣ ಸಣ್ಣಕ್ಕಿ, ಡಿಪೋ ಮ್ಯಾನೇಜರ ಎಚ್. ಆರ್‌. ಪಾಟೀಲ ಆಹಾರ ಇಲಾಖೆಯ ಉಪತಹಸೀಲ್ದಾರ ಈಶ್ವರ ಬಡಿಗೇರ ಇಲಾಖೆಯ ಮಾಹಿತಿ ನೀಡಿದರು. ಈ ವೇಳೆ ತೋಟಗಾರಿಕೆ ಇಲಾಖೆ ತರಕಾರಿ ಬೀಜಗಳನ್ನು ಉಚಿತ ವಿತರಿಸಲಾಯಿತು. ತಾಪಂ ಇಒ ಬಸವರಾಜ ಐನಾಪೂರ ಸ್ವಾಗತಿಸಿದರು. ತಹಸೀಲ್ದಾರ ಸುರೇಶ ಚವಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸುರೇಬಾನ, ಮನಿಹಾಳ, ಸಂಗಳ, ಘಟಕನೂರ, ಮುಳ್ಳೂರ, ಕಿತ್ತೂರ, ಅವರಾದಿ, ಗೊಣ್ಣಾಗರ ಪಂಚಾಯತ ಅಧ್ಯಕ್ಷರು ಸೇರಿದಂತೆ ಹಲವರಿದ್ದರು.

Share this article